ಮಂಗಳೂರು, ನ.07-ಭಾರತಕ್ಕೂ ಹಾಗೂ ಏಳು ಸಮುದ್ರದಾಚೆಯ ಅರಬ್ ದೇಶ ಒಮನ್ಗು ವಿಶಿಷ್ಟ ಧಾರ್ಮಿಕ ನಂಟು ಇದೆ ಎನ್ನುವುದಕ್ಕೆ ಸಾಕ್ಷಿಯಾಗಿ ಇಂದಿನಿಂದ ನ. 9ರವರೆಗೆ ಬೆಂಗಳೂರಿನ ಅಂತಾರಾಷ್ಟ್ರೀಯ ವಾಸ್ತು ತಜ್ಞರು, ಆಧ್ಯಾತ್ಮಿಕ ಚಿಂತಕರು, ವೈಜ್ಞಾನಿಕ ಜ್ಯೋತಿಷ್ಯರಾಗಿರುವ ಶ್ರೀ ಚಂದ್ರಶೇಖರ ಸ್ವಾಮೀಜಿಯವರ ನೇತೃತ್ವದಲ್ಲಿ ಒಮನ್ ದೇಶದಲ್ಲಿ ಮೂರು ದಿನಗಳ ಮಹಾಯಾಗವೊಂದು ನಡೆಯಲಿದೆ.
ಅನಾರೋಗ್ಯದಿಂದ ಅಸ್ವಸ್ಥರಾಗಿ ಈಗ ಚೇತರಿಕೆ ಕಂಡಿರುವ ಒಮಾನಿನ ರಾಜ ಸುಲ್ತಾನ್ ಕಾಬೂಸ್ ಬಿನ್ ಸಹೀದ್ನ ಆರೋಗ್ಯದ ವೃದ್ಧಿಗಾಗಿ ನಡೆಯಲಿರುವ ಯಾಗಕ್ಕಾಗಿ ಇಂದು ಬೆಳಿಗ್ಗೆ 7.30ಕ್ಕೆ ಬೆಂಗಳೂರಿನ ಪೂರ್ಣ ಪ್ರಜ್ಞ ವಿದ್ಯಾಪೀಠ ಹಾಗೂ ಕೇರಳದ ಒಟ್ಟು 22 ಋತ್ವಿಜರು ಶ್ರೀ ಚಂದ್ರಶೇಖರ ಸ್ವಾಮೀಜಿಯವರ ಆಶ್ರಮದ ಸಹಯೋಗದಲ್ಲಿ ಆಶ್ರಮದ ನಿಕಟವರ್ತಿ ಉಡುಪಿಯ ಗ್ರಾಮೀಣರತ್ನ ಪುರಸ್ಕೃತ ಡಾ.ದೇವೀಪ್ರಸಾದ ಶೆಟ್ಟಿ ಬೆಳಪುರವರೊಂದಿಗೆ ಒಮನ್ ಏರ್ವೇಸ್ ವಿಮಾನದ ಮೂಲಕ ಬೆಂಗಳೂರಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತಮ್ಮ ಪ್ರಯಾಣ ಬೆಳೆಸಿದರು.
ನವೆಂಬರ್ 18 ರಂದು 74 ನೇ ವರ್ಷದ ಹರೆಯಕ್ಕೆ ಕಾಲಿಡಲಿರುವ ಒಮಾನಿನ ರಾಜ ಸುಲ್ತಾನ್ ಕಾಬೂಸ್ ಬಿನ್ ಸಹೀದ್ ಅವರು ಕಳೆದ ಕೆಲವು ತಿಂಗಳಿನಿಂದ ಅನಾರೋಗ್ಯ ಪೀಡಿತರಾಗಿ ಜರ್ಮನಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರಲ್ಲದೇ ತಾನು ಕ್ಷೇಮವಾದಲ್ಲಿ ಭಾರತೀಯ ಪದ್ದತಿಯಂತೆ ಧಾರ್ಮಿಕ ಯಾಗವೊಂದನ್ನು ನಡೆಸುವೆನು ಎಂಬ ಹರಕೆಯನ್ನು ಶ್ರೀ ಚಂದ್ರಶೇಖರ ಸ್ವಾಮೀಜಿ ಮೂಲಕ ಹೊತ್ತಿದ್ದರು ಎನ್ನಲಾಗಿದ್ದು ಈಗ ಆಸ್ಪತ್ರೆಯಲ್ಲಿ ಚೇತರಿಸಿಕೊಂಡಿದ್ದರಿಂದ ಅವರ ನಿಕಟವರ್ತಿಯಾದ ಬೆಂಗಳೂರಿನ ಶ್ರೀ ಚಂದ್ರಶೇಖರ ಸ್ವಾಮೀಜಿಯವರ ಸಾರಥ್ಯದಲ್ಲಿ ವಿವಿಧ ಯಾಗಗಳನ್ನು ಕೈಗೊಳ್ಳಲ್ಲಿದ್ದಾರೆ ಎಂದು ಆಶ್ರಮದ ಮೂಲಗಳು ತಿಳಿಸಿದೆ.
ಮಸ್ಕತ್ ವಿಮಾನ ನಿಲ್ದಾಣದಿಂದ ಸುಮಾರು 41 ಕಿ.ಮೀ. ದೂರದ ಬರ್ಕ ಎಂಬ ಪ್ರದೇಶದಲ್ಲಿ ಈ ಯಾಗಶಾಲೆಯನ್ನು ನಿರ್ಮಿಸಿದ್ದು ಅಲ್ಲಿ ಇಂದು ಸಂಜೆಯಿಂದ ಈ ಯಾಗಗಳು ನಡೆಯಲಿದೆ. ಇಂದು ಸಂಕಲ್ಪ ಕಲಶ ಪ್ರತಿಷ್ಠೆ, ಯಾಗ ಶಾಲೆ ಶುದ್ಧೀಕರಣ ನಡೆದು ನಾಳೆ ಮುಂಜಾನೆಯಿಂದ ಆರೋಗ್ಯ ವೃದ್ಧಿಗಾಗಿ ಮಹಾಧನ್ವಂತರಿ ಯಾಗ, ಪೂರ್ಣ ನವಗ್ರಹ ಶಾಂತಿ, ಮಹಾಮೃತ್ಯುಂಜಯಯಾಗ, ಮಹಾವಿಷ್ಣುಯಾಗ ನಡೆದು ಅದರಲ್ಲಿ ಸ್ವತಹ ಒಮನ್ ರಾಜ ಭಾಗವಹಿಸಲಿದ್ದಾರೆ ಎಂದು ತಿಳಿದು ಬಂದಿದೆ.
ಅವಿವಾಹಿತರಾಗಿರುವ ಒಮನ್ ರಾಜನಿಗೆ ಭಾರತೀಯ ಸಂಸ್ಕೃತಿ ಹಾಗೂ ಪರಂಪರೆಯ ಆಸ್ತಿಕತೆಯಿಂದ ಧ್ಯಾನ ಮಾಡಿದಲ್ಲಿ ಆರೋಗ್ಯ ಸುಧಾರಣೆ ಆಗುವುದು ಎಂಬ ಶ್ರೀ ಚಂದ್ರಶೇಖರ ಸ್ವಾಮೀಜಿಯವರ ಭವಿಷ್ಯವಾಣಿಯ ನಂಬಿಕೆಯಿಂದಲೇ ಈ ಯಾಗ ನೆರವೇರುತ್ತಿದೆ ಜೊತೆಗೆ ವಿಶೇಷ ಅನ್ನ ಪ್ರಸಾದವನ್ನು ಸಹ ವಿತರಿಸಲಾಗುತ್ತದೆ ಇದರಲ್ಲಿ ಒಮನ್ನ ಪ್ರಜೆಗಳು ಹಾಗೂ ಬಹುತೇಕ ಅನಿವಾಸಿ ಭಾರತೀಯರು ಭಾಗವಹಿಸಲಿದ್ದಾರೆ.
ಇಂದು ಒಮನ್ ದೇಶದಲ್ಲಿ ರಾಜನ ಆರೋಗ್ಯಪೂರ್ಣಕ್ಕೆ ನಡೆಯುತ್ತಿರುವ ಯಾಗದಿಂದ ಅಲ್ಲಿ ಸಂಭ್ರಮದ ವಾತಾವರಣ ನಿರ್ಮಾಣವಾಗಿದೆ. ಇದೇ ಧಾರ್ಮಿಕ ಕಾರ್ಯದ ಪೂರ್ವಭಾವಿಯಾಗಿ ಹಾಗೂ ಯಾಗದ ಬಗ್ಗೆ ವ್ಯವಸ್ಥೆಗೊಳಿಸಲು ನಾಲ್ಕು ದಿನದ ಮೊದಲೇ ಒಮನ್ಗೆ ಶ್ರೀ ಚಂದ್ರಶೇಖರ ಸ್ವಾಮೀಜಿಯವರು ತೆರಳಿದ್ದು ಇಂದು ಋತ್ವಿಜರು ಪ್ರಯಾಣ ಬೆಳೆಸಿದರು ಎಂದು ಆಶ್ರಮದವರು ಹೇಳಿದ್ದು ಬೆಂಗಳೂರಿನ ವಿಮಾನ ನಿಲ್ದಾಣದಲ್ಲೂ ಅಧಿಕಾರಿಗಳು ಇದನ್ನು ಧೃಢೀಕರಿಸಿದ್ದಾರೆ.
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ: ದೇವೀಪ್ರಸಾದ ಶೆಟ್ಟಿ ಬೆಳಪು : 9900226893
ಚಿತ್ರ-ವರದಿ: ನರೇಂದ್ರ ಕೆರೆಕಾಡು