ಕುಂದಾಪುರ: ಕರ್ನಾಟಕ ವಿಧಾನ ಮಂಡಲದ ಸ್ಥಳೀಯ ಸಂಸ್ಥೆಗಳ ಮತ್ತು ಪಂಚಾಯತ್ ರಾಜ್ ಸಂಸ್ಥೆಗಳ ಸಮಿತಿ ಅ. ೧೬ರಂದು ಕೋಟ ಡಾ|ಶಿವರಾಮ ಕಾರಂತ ಕಲಾಭವನಕ್ಕೆ ಭೇಟಿ ನೀಡಿತು.
ಈ ಸಂದರ್ಭದಲ್ಲಿ ಸಮಿತಿಯ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಯೋಜನೆಗಳ ಕುರಿತು ಚರ್ಚೆ ಹಾಗೂ ಕಾಮಗಾರಿಗಳ ಅನುಷ್ಠಾನದ ಪರಿಶೀಲನೆಗಾಗಿ ಸಮಿತಿಯು ಉಡುಪಿ ಜಿಲ್ಲೆಗೆ ಆಗಮಿಸಿದ್ದು, ನಮ್ಮ ಗ್ರಾಮ-ನಮ್ಮ ರಸ್ತೆ, ಸುವರ್ಣ ಗ್ರಾಮೋದಯ ಯೋಜನೆ, ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಹಾಗೂ ವಸತಿ ಇಲಾಖೆಯ ರಾಜೀವ್ ಗಾಂಧಿ ವಸತಿ ನಿಗಮದ ಬಸವ ವಸತಿ ಯೋಜನೆ, ಇಂದಿರಾ ಅವಾಸ್ ಯೋಜನೆ, ಗ್ರಾಮೀಣ ಅಂಬೇಡ್ಕರ್ ಯೋಜನೆ ಅನುಷ್ಠಾನ ಮತ್ತು ಕಾರ್ಯವೈಖರಿ ಪರಿಶೀಲಿಸಲಿದೆ ಎಂದರು.
ಕುಂದಾಪುರ ವಿಧಾನಸಭಾ ಕ್ಷೇತ್ರಕ್ಕೆ ಬಸವ ವಸತಿ ಹಾಗೂ ಇಂದಿರಾ ಅವಾಸ್ ಯೋಜನೆಯಡಿ ಕನಿಷ್ಠ ಮನೆಗಳು ಮಂಜೂರಾಗಿದ್ದು, ದ್ವಿತೀಯ ಹಂತದಲ್ಲೂ ಅಗತ್ಯ ಮನೆಗಳು ಮಂಜೂರಾಗಿಲ್ಲ. ಇದರಿಂದ ಗ್ರಾ.ಪಂಗಳಿಗೆ ಬೆರಳೆಣಿಕೆಯ ಮನೆಗಳು ಸಿಗುತ್ತಿದ್ದು, ನಮ್ಮ ಕ್ಷೇತ್ರಕ್ಕೆ ಅನ್ಯಾಯವಾಗಿದೆ ಎಂದು ಕೋಟ ಗ್ರಾ.ಪಂ ಅಧ್ಯಕ್ಷ ಶಿವ ಪೂಜಾರಿ ಸಮಿತಿಯ ಮುಖ್ಯಸ್ಥರಲ್ಲಿ ತಿಳಿಸಿದರು.
ಇದೇ ಸಂದರ್ಭ ಐರೋಡಿ ಗ್ರಾ.ಪಂಗೂ ಸಮಿತಿ ಭೇಟಿ ನೀಡಿ, ಪಂಚಾಯತ್ ವ್ಯಾಪ್ತಿಯ ಬಸವ ವಸತಿ ಯೋಜನೆ, ಇಂದಿರಾ ಅವಾಸ್ ಯೋಜನೆಯ ಮನೆಗಳ ಕಾರ್ಯವನ್ನು ಪರಿಶೀಲಿಸಿತು.
ಸಮಿತಿಯ ಅಧ್ಯಕ್ಷ , ಬೈಂದೂರು ಶಾಸಕ ಗೋಪಾಲ ಪೂಜಾರಿ, ವಿಧಾನಸಭಾ ಸದಸ್ಯ ವಾಸು, ಆರ್.ನರೇಂದ್ರ, ಡಿ.ಎನ್.ಜೀವರಾಜ್, ಯು.ಬಿ.ಬಣಕಾರ್, ಎಂ.ಜಿ.ಅಪ್ಪಾಜಿ ಮತ್ತು ವಿಧಾನಪರಿಷತ್ ಸದಸ್ಯರಾದ ಕೋಟ ಶ್ರೀನಿವಾಸ ಪೂಜರಿ, ಜಿ.ಎಸ್. ನ್ಯಾಮಗೌಡ, ಕವಟಗಿಮಠ ಮಹಾಂತೇಶ್, ಕಾರಂತ ಹುಟ್ಟೂರು ಪ್ರತಿಷ್ಠಾನದ ಕಾರ್ಯಧ್ಯಕ್ಷ ಆನಂದ್ ಸಿ.ಕುಂದರ್, ಕೋಟ ಗ್ರಾ.ಪಂ ಅಧ್ಯಕ್ಷ ಶಿವ ಪೂಜಾರಿ, ತಾ.ಪಂ ಸದಸ್ಯ ಭರತ್ ಶೆಟ್ಟಿ, ರಾಜು ಪೂಜಾರಿ ಹಾಗೂ ಕೋಟ, ಕೋಟತಟ್ಟು ಗ್ರಾ.ಪಂ ಸದಸ್ಯರು, ಅಽಕಾರಿಗಳು ಉಪಸ್ಥಿತರಿದ್ದರು.