ಮಂಗಳೂರು, ಅ.14: ಭಾರತೀಯ ರೆಡ್ಕ್ರಾಸ್ ಸೊಸೈಟಿ ದ.ಕ ಜಿಲ್ಲಾ ಘಟಕದ ಸಹಭಾಗಿತ್ವದಲ್ಲಿ ಎಸ್ಡಿಎಂ ಕಾನೂನು ಮಹಾವಿದ್ಯಾಲಯ ಮತ್ತು ಎಸ್ಡಿಎಂ ಉದ್ಯಮಾಡಳಿತ ಕಾಲೇಜುಗಳ ಆಶ್ರಯದಲ್ಲಿ ಅಂತಾರಾಷ್ಟ್ರೀಯ ವಿಕೋಪ ಶಮನ ದಿನಾಚರಣೆ ಸೋಮವಾರ ಜರಗಿತು. ಇದೇ ವೇಳೆ ಜಿಲ್ಲಾ ವಿಕೋಪ ಸ್ಪಂದನಾ ತಂಡದ (ಡಿಸ್ಟ್ರಿಕ್ಟ್ ಡಿಸಾಸ್ಟರ್ ರೆಸ್ಪಾನ್ಸ್ ಟೀಮ್) ಉದ್ಘಾಟನೆ ನೆರವೇರಿತು.
ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾ ಅಪರ ಜಿಲ್ಲಾಧಿಕಾರಿ ಬಿ. ಸದಾಶಿವ ಪ್ರಭು, ವಿಕೋಪಗಳಲ್ಲಿ ಪ್ರಾಕೃತಿಕ ಹಾಗೂ ಮಾನವ ನಿರ್ಮಿತ ವಿಕೋಪಗಳೆಂಬ 2 ವಿಧಗಳಿವೆ. ಪ್ರಾಕೃತಿಕ ವಿಕೋಪ ಮುನ್ಸೂಚನೆಯಿಲ್ಲದೆ ಬರುವಂತದ್ದಾದರೆ, ಮಾನವ ನಿರ್ಮಿತ ವಿಕೋಪವನ್ನು ಜಾಗೃತಿಯ ಮೂಲಕ ನಿಲ್ಲಿಸಲು ಸಾಧ್ಯವಿದೆ. ನಗರಗಳಲ್ಲಿ ಪ್ರಮುಖ ಸಮಸ್ಯೆಯಾಗಿ ಕಾಡುತ್ತಿರುವ ಕೃತಕ ನೆರೆಗಳಿಗೆ ಚರಂಡಿಗಳ, ಕಾಲುವೆಗಳ ಅತಿಕ್ರಮಣ, ಒತ್ತುವರಿ, ತ್ಯಾಜ್ಯಗಳನ್ನು ಚರಂಡಿಗಳಿಗೆ ಎಸೆಯುವುದು ಇದಕ್ಕೆ ಕಾರಣ ಎಂದರು.
ಮುಖ್ಯ ಅತಿಥಿ ಕರ್ನಾಟಕ ಮುಖ್ಯ ಅಗ್ನಿಶಾಮಕ ಹಾಗೂ ತುರ್ತು ಸೇವೆಗಳ ಜಿಲ್ಲಾ ಮುಖ್ಯ ಅಧಿಕಾರಿ ಎಚ್.ಎಸ್.ವರದರಾಜನ್ ಮಾತನಾಡಿ, ವಿಕೋಪಗಳು ಸಂಭವಿಸಿದಾಗ ಮಾಡಬೇಕಾದ ಹಾಗೂ ಮಾಡಬಾರದ ಅಂಶಗಳ ಬಗ್ಗೆ ಅರಿವು ಹೊಂದುವುದರಿಂದ ಹಾನಿಯನ್ನು ಕನಿಷ್ಠಗೊಳಿಸಬಹುದು ಎಂದರು. ವಿಕೋಪಗಳ ಸಂದರ್ಭ ರಕ್ಷಣಾ ಪರಿಕರಗಳ ಬಳಕೆ, ರಕ್ಷಣ ತಂಡಗಳಿಗೆ ಆವಶ್ಯವಿರುವ ಪೂರಕ ನೆರವು, ಅನುಸರಿಸಬೇಕಾಗಿರುವ ಕ್ರಮಗಳ ಬಗ್ಗೆ ಜಿಲ್ಲಾ ವಿಕೋಪ ಸ್ಪಂದನಾ ತಂಡ ತರಬೇತಿ ಪಡೆದುಕೊಂಡು ಸನ್ನದ್ಧವಾಗಿರಬೇಕು ಎಂದವರು ಸಲಹೆ ನೀಡಿದರು.
ದ.ಕ. ಜಿಲ್ಲಾ ಗೃಹರಕ್ಷಕ ದಳದ ಡೆಪ್ಯುಟಿ ಕಮಾಂಡೆಂಟ್ ವಿ. ಪುರುಷೋತ್ತಮ್, ಮಂಗಳೂರು ವಿವಿ ಯುವ ರೆಡ್ಕ್ರಾಸ್ ನೋಡೆಲ್ ಅಧಿಕಾರಿ ಪ್ರೊ.ವಿನುತಾ ರೈ, ಎಸ್ಡಿಎಂ ಉದ್ಯಮಾಡಳಿತ ಕಾಲೇ ಜಿನ ಪ್ರಾಂಶುಪಾಲೆ ಅರುಣಾ ಕಾಮತ್, ಎಸ್ಡಿಎಂ ಕಾನೂನು ಕಾಲೇಜಿನ ಉಪನ್ಯಾಸಕಿ ಸುಸಾನ್ ಥೋಮಸ್ ಉಪಸ್ಥಿತರಿದ್ದರು.
ಯುವ ರೆಡ್ಕ್ರಾಸ್ ತರಬೇತುದಾರ ಸಂತೋಷ್ ಪೀಟರ್ ಡಿಸೋಜ ಸ್ವಾಗತಿಸಿದರು. ರೆಡ್ಕ್ರಾಸ್ ದ.ಕ. ಜಿಲ್ಲಾ ಘಟಕದ ಅಧ್ಯಕ್ಷ ಪ್ರಭಾಕರ ಶ್ರೀಯಾನ್ ವಂದಿಸಿದರು.