ಕುಂದಾಪುರ: ವಡ್ಡರ್ಸೆ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಕಳೆದು ಎರಡು ವರ್ಷಗಳಿಂದ ಸಮರ್ಪಕವಾಗಿ ಗ್ರಾಮ ಪಂಚಾಯಿತಿ ಕರ್ತವ್ಯಕ್ಕೆ ಹಾಜರಾಗದೆ, ಬಹುತೇಕ ನಿರಂತರ ಗೈರು ಹಾಜರಿಯಲ್ಲಿದ್ದು ಮಾಸಿಕ ಭತ್ಯೆಯನ್ನು ಪಡೆಯುತ್ತಿದ್ದಾರೆ. ಈ ಬಗ್ಗೆ ಜಿಲ್ಲಾ ಪಂಚಾಯಿತಿಯಲ್ಲಿ ದೂರು ದಾಖಲಿಸಿದ್ದರೂ ಕೂಡ ಯಾವುದೇ ಕ್ರಮ ಕೈಗೊಳ್ಳದೆ ಇರುವುದು ಖಂಡನಾರ್ಹ ಎಂದು ಶುಕ್ರವಾರದಂದು ವಡ್ಡರ್ಸೆ ಗ್ರಾಮ ಪಂಚಾಯಿತಿ ಸಾಮಾನ್ಯ ಸಭೆಗೆ ಹಾಜರಾದ ಸರ್ವ ಸದಸ್ಯರು ಈ ಕುರಿತು ಆಕ್ರೋಶ ವ್ಯಕ್ತಪಡಿಸಿ ಗ್ರಾಮ ಪಂಚಾಯಿತಿಗೆ ಬೀಗ ಜಡಿದು ಪ್ರತಿಭಟನೆ ನಡೆಸಿದರು.
ಈ ಸಂದರ್ಭ ಪ್ರತಿಭಟನೆಯಲ್ಲಿ ಉಪಸ್ಥಿತರಿದ್ದ ಪಂಚಾಯಿತಿ ಉಪಾಧ್ಯಕ್ಷ ಚಂದ್ರಶೇಖರ್ ಶೆಟ್ಟಿ ಮಾತನಾಡಿ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಹುದ್ದೆಯಲ್ಲಿರುವ ಉಮಾಶಂಕರ್ ಅವರು ಕಳೆದ 2 ವರ್ಷಗಳಿಂದ ಬಹುತೇಕ ದಿನಗಳಲ್ಲಿ ಗೈರು ಹಾಜರಾಗಿದ್ದಾರೆ. ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ತಾಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿಯಲ್ಲಿ ಗ್ರಾಮ ಪಂಚಾಯಿತಿ ಕೆಲಸಕ್ಕೆ ತೆರಳುತ್ತಿರುತ್ತಾರೆ, ಇದರಿಂದ ಗ್ರಾಮ ಪಂಚಾಯಿತಿಯ ಬಹುತೇಕ ಕೆಲಸಗಳು ಬಾಕಿ ಉಳಿದಿದೆ.
2 ವರ್ಷಗಳಿಂದ ಕಾರ್ಯದರ್ಶಿಗಳು ನಿರಂತರ ಗೈರು ಹಾಜರಾಗುತ್ತಿತ್ತು, ಈ ಪ್ರಶ್ನಿಸಿದ ನಮಗೆ ಕ್ರಿಮಿನಲ್ ಮೊಕದ್ದಮೆ ಹೂಡುವ ಬೆದರಿಕೆ ನೀಡುತ್ತಿದ್ದಾರೆ. ಅಲ್ಲದೇ ಪಂಚಾಯಿತಿಯಲ್ಲಿ ಅವ್ಯವಹಾರ ನಡೆಯುತ್ತಿದೆ ಈ ಬಗ್ಗೆ ಲೋಕಾಯುಕ್ತರಿಗೆ ದೂರು ಸಲ್ಲಿಸುತ್ತೇನೆ, ಮುಂದಿನ ಚುನಾವಣೆಗೆ ನಿಲ್ಲದಂತೆ ಮಾಡುತ್ತೇನೆ ಎಂದು ಬೆದರಿಕೆ ಹಾಕುತ್ತಿದ್ದಾರೆ. ಈ ಬಗ್ಗೆ ಈ ಹಿಂದೆ ಗ್ರಾಮ ಪಂಚಾಯಿತಿ ಜಮಾಬಂದಿಯಲ್ಲಿ ಸಾರ್ವಜನಿಕರು ಕಾರ್ಯದರ್ಶಿಯವರ ಕಾರ್ಯವೈಖರಿಯ ಬಗ್ಗೆ ಪ್ರಶ್ನಿಸಿದ್ದರು, ಈ ಬಗ್ಗೆ ಪಂಚಾಯಿತಿ ಕೂಡ ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಬಳಿ ದೂರು ಸಲ್ಲಿಸಲಾಗಿದೆ. ಆದರೂ ಇದವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ಆ ನಿಟ್ಟಿನಲ್ಲಿ ಸಾಮಾನ್ಯ ಸಭೆ ಬಳಿಕ ಪಂಚಾಯಿತಿ ಬೀಗ ಜಡಿಯುವ ನಿರ್ಧಾರ ಕೈಗೊಳ್ಳಲಾಗಿದೆ ಎಂದರು.
ಪ್ರತಿಭಟನೆಯ ಬಳಿಕ ಕೋಟ ಠಾಣೆಯ ಪೋಲಿಸ್ ಅಧಿಕಾರಿಯವರ ಮೂಲಕ ಜಿಲ್ಲಾಧಿಕಾರಿಯವರಿಗೆ ಮನವಿ ಸಲ್ಲಿಸಲಾಯಿತು. ಪ್ರತಿಭಟನೆಯಲ್ಲಿ ಗ್ರಾಮ ಪಂಚಾಯಿತಿ ಸದಸ್ಯರು, ಸ್ಥಳೀಯ ಉದ್ಯೋಗ ಖಾತ್ರಿ ಯೋಜನೆ ಫಲಾನಿಭವಿ ಮಹಿಳೆಯರು, ಸ್ಥಳೀಯರ ಗ್ರಾಮಸ್ಥರು ಪಾಲ್ಗೋಂಡಿದ್ದರು.