ಕುಂದಾಪುರ: ಕಾರಂತರು ಪ್ರತಿಯೊಬ್ಬ ಪ್ರಜೆಯ ಧ್ವನಿಗೆ ಸ್ಪಂಧಿಸಿದವರಾಗಿದ್ದರು, ಕಲೆ ಎಂದರೇ ಆತ್ಮವಿಶ್ವಾಸ, ಆತ್ಮಗೌರವದಿಂದ ಬದುಕಲು ಕಲಿಸುವುದು, ಕಲಾವಿದ ಯಾವತ್ತಿಗೂ ತನ್ನನ್ನು ತಾನೂ ಕುಗ್ಗಿಸಿಕೊಳ್ಳಬಾರದು ಎಂದು ತೋರಿಸಿಕೊಟ್ಟವರು, ಅವರು ಉಸಿರಾಡಿದ ಈ ಮಣ್ಣಿನಲ್ಲಿ ನಾನು ಉಸಿರಾಡುತ್ತಿರವುದು ಹೆಮ್ಮೆ ಎನಿಸುತ್ತದೆ ಕಾರಂತರು ಓರ್ವ ವ್ಯಕ್ತಿ ಅಲ್ಲ ಅವರು ವಿರಾಟ್ ಶಕ್ತಿ ಎಂದು ಕವಿ ಸಾಹಿತಿ ಜಯಂತ್ ಕಾಯ್ಕಿಣಿ ಹೇಳಿದರು.
ಅವರು ಶುಕ್ರವಾರ ಸಂಜೆ ಕೋಟ ಕಾರಂತ ಥೀಂ ಪಾರ್ಕನಲ್ಲಿ ಕೋಟತಟ್ಟು ಗ್ರಾಮ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕರ್ನಾಟಕ ಸರಕಾರ, ಡಾ.ಶಿವರಾಮ ಕಾರಂತ ಟ್ರಸ್ಟ್ (ರಿ.) ಉಡುಪಿ, ಡಾ.ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ ಪ್ರತಿಷ್ಠಾನ (ರಿ.) ಕೋಟ, ಡಾ.ಶಿವರಾಮ ಕಾರಂತ ಜನ್ಮದಿನೋತ್ಸವ- ಹುಟ್ಟೂರ ಪ್ರಶಸ್ತಿ ಪ್ರಧಾನ, ಹುಟ್ಟೂರ ಪ್ರಶಸ್ತಿಗೆ ಹತ್ತು ವಸಂತಗಳ ಸಡಗರ – ಗುಂಜನ 2014 ಒಂದು ತಿಂಗಳ ಸರಣಿ ಕಾರ್ಯಕ್ರಮದಲ್ಲಿ ಡಾ.ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು.
ಕಾರಂತರು ಮರೆಯಾದರು ಅವರ ಶಾಶ್ವತವಾದ ಜಾಗೃತ ಶಕ್ತಿಯಾಗಿರುವಂತ ಕಾರ್ಯಕ್ರಮಕ್ಕೆ ಚಾಲನೆ ನೀಡುವುದು ಅಭಿನಂದನಾರ್ಹ ಈ ಪ್ರಶಸ್ತಿ ಕಾರಂತ ಕೈಯಲ್ಲಿನ ಬೆತ್ತದ ಒಂದು ಏಟು ಎಂದು ಸ್ವೀಕರಿಸುತ್ತೇನೆ, ಎಕೆಂದರೆ, ಈ ಪ್ರಶಸ್ತಿ ನಾನು ಇಲ್ಲಿಯವರೆಗೆ ಮಾಡಿದ ಸಾಹಿತ್ಯ ಸಾಧನೆಗೆ ಅಲ್ಲ ಮುಂದೆ ಮಾಡಬೇಕಾಗಿರುವ ಸಾಹಿತ್ಯ ಸಾಧನೆಗೆ ಎಂದುಕೊಳ್ಳುತ್ತೇನೆ. ನಾನೊಬ್ಬ ಕಾರಂತರ ಸಂವೇದನೆಯ ಕುಟುಂಬದ ಸದಸ್ಯ. ಕಲಾವಿದರ ಪರಿಸ್ಥಿತಿ ಈಗ ಬದಲಾಗಿದೆ ಕಾರಂತರ ಕಲಾಭಿಮಾನಕ್ಕೆ ತದ್ವಿರುದ್ಧವಾದ ವರ್ತನೆಗಳನ್ನು ಈಗ ಕಾಣಬಹುದಾಗಿದೆ. ಮಾಹಿತಿಯನ್ನೆ ಜ್ಞಾನ ಎಂದು ತಿಳಿಯುವ ಈಗಿನವರಿಗೆ ಆ ಕಾಲದಲ್ಲೆ 9 ಸಾವಿರ ಪ್ರಾಣಿ-ಪಕ್ಷಿಕಗಳ ಚಿತ್ರವನ್ನು ಕೈಬರಹದಲ್ಲಿ ಬಿಡಿಸಿ ವಿಶ್ವಕೋಶವನ್ನು ರಚಿಸಿದ ಮೇರು ಸಾಹಿತಿ ಅವರು ಎಂದರು.
ಕಾರ್ಯಕ್ರಮವನ್ನು ನಗರಾಭಿವೃದ್ಧಿ ಸಚಿವ ವಿನಯ ಕುಮಾರ್ ಸೊರಕೆ ಉದ್ಘಾಟಿಸಿ ಮಾತನಾಡಿ ಇಲ್ಲಿ ಶಿವರಾಮ ಕಾರಂತರು ಎಲ್ಲಾ ರಂಗದಲ್ಲಿಯೂ ಮೇರು ಪ್ರತಿಭೆಯಾಗಿದ್ದು, ಅವರ ಸಾಹಿತ್ಯದಲ್ಲಿ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ದೊರಕಿಸುವ ಆಸಕ್ತಿಯಿತ್ತು. ಕಾರಂತರು ತೊಡಗಿಸಿಕೊಂಡ ಎಲ್ಲಾ ರಂಗದಲ್ಲಿಯೂ ಸಕ್ರೀಯವಾದವರಿಗೆ ನೀಡುವ ಕಾರಂತ ಹುಟ್ಟೂರ ಪ್ರಶಸ್ತಿ ಮೂಲಕ ಅವರ ನೆನಪನ್ನು ಚಿರಸ್ಥಾಯಿಯನ್ನಾಗಿಸಲು ಸಾಧ್ಯ. ಎಂದರು.
ಕೋಟತಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಶೋಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಳಾಗಿ ಜೆಡಿಎಸ್ ಜಿಲ್ಲಾಧ್ಯಕ್ಷ ದೇವಿ ಪ್ರಸಾದ್ ಶೆಟ್ಟಿ, ಕಸಾಪ ಉಡುಪಿ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಜಿಲ್ಲಾ ಪಂಚಾಯಿತಿ ಸದಸ್ಯೆ ಸುನೀತಾ ರಾಜಾರಾಮ್, ತಾಲೂಕು ಪಂಚಾಯಿತಿ ಸದಸ್ಯ ಭರತ್ ಕುಮಾರ್ ಶೆಟ್ಟಿ, ಸಾಲಿಗ್ರಾಮ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಸಾಧು ಪಿ., ಕೋಟ ಗ್ರಾಮ ಪಂಚಾಯಿತಿ ಅಧ್ಯಕ್ಷ ಶಿವ ಪೂಜಾರಿ ಉಪಸ್ಥಿತರಿದ್ದರು.
ಇದೇ ವೇದಿಕೆಯಲ್ಲಿ ಜಯಂತ್ ಕಾಯ್ಕಿಣಿ ಅವರ ಕುರಿತ ಸಾಕ್ಷ್ಯ ಚಿತ್ರ ಕಾಯ್ಕಿಣಿ ಕಥನ ಲೋಕರ್ಪಣೆ ಮಾಡಲಾಯಿತು. ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಪ್ರಸ್ತಾವಿಕವಾಗಿ ಮಾತನಾಡಿದರು. ಪ್ರತಿಷ್ಠಾನದ ಕಾರ್ಯಧ್ಯಕ್ಷ ಆನಂದ್ ಸಿ.ಕುಂದರ್ ಸ್ವಾಗತಿಸಿದರು. ಸಾಲಿಗ್ರಾಮ ಮಕ್ಕಳ ಮೇಳದ ಸಂಚಾಲಕ ಶ್ರೀಧರ ಹಂದೆ ಯಕ್ಷಗಾನ ಪದ್ಯದ ಮೂಲಕ ಪ್ರಶಸ್ತಿ ಪರಸ್ಕೃತರ ಪರಿಚಯ ಮಾಡಿದರು. ಪ್ರತಿಷ್ಠಾನ ಕಾರ್ಯದರ್ಶಿ ನರೇಂದ್ರ ಕುಮಾರ್ ಅವರು ಕಾರ್ಯಕ್ರಮಕ್ಕೆ ಸಹಕರಿಸಿದ ಸರ್ವರನ್ನು ಸ್ಮರಿಸಿದರು. ಕುಮಾರಿ ಉಷಾ ಮತ್ತು ಸತೀಶ್ ವಡ್ಡರ್ಸೆ ಕಾರ್ಯಕ್ರಮ ನಿರೂಪಿಸಿದರು. ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಜಯರಾಮ್ ಶೆಟ್ಟಿ ವಂದಿಸಿದರು.