ಕುಂದಾಪುರ: ಮಾರಣಕಟ್ಟೆ ದೇವಸ್ಥಾನಕ್ಕೆ ದೇವರ ದರ್ಶನಕ್ಕೆಂದು ಪತಿಯೊಂದಿಗೆ ಬಂದಿದ್ದ ಮಹಿಳೆಯೋರ್ವಳು ಗಂಡನಿಗೆ ಕೈಕೊಟ್ಟು ದೇವಸ್ಥಾನದಿಂದಲೇ ಪ್ರಿಯಕರನೊಂದಿಗೆ ಪರಾರಿಯಾದ ಘಟನೆ ನಡೆದಿದೆ.
ಅಲೂರು ಗ್ರಾಮದ ರಾಜು ಪೂಜಾರಿ ಎನ್ನುವವರು ತಮ್ಮ ಪತ್ನಿ ಸುಧಾರೊಂದಿಗೆ ಅವಳ ತಾಯಿ ಮನೆ ಚಿತ್ತೂರು ನೈಕಂಬಳಿ ಯಿಂದ ಹೊರಟು ಚಿತ್ತೂರು ಗ್ರಾಮದ ಮಾರಣಕಟ್ಟೆ ದೇವಸ್ಥಾನಕ್ಕೆ ಬಂದಿದ್ದು, ಈ ಸಮಯ ಸುಧಾರೊಂದಿಗೆ ಒಬ್ಬಾತ ಯುವಕ ಸಲುಗೆಯಿಂದಲೇ ಮಾತನಾಡಿದ್ದು, ಅವರಿಬ್ಬರೂ ಸ್ನೇಹಿತರೆಂದು ಗಂಡನಿಗೆ ಪರಿಚಯವನ್ನು ಮಾಡಿಕೊಟ್ಟಿದ್ದಳು. ಇದರ ಬಳಿಕ ರಾಜು ಹಾಗೂ ಸುಧಾ ಇಬ್ಬರೂ ದೇವಸ್ಥಾನಕ್ಕೆ ಪ್ರದಕ್ಷಣೆ ಬಂದು ದೇವಸ್ಥಾನದಲ್ಲಿಯೇ ಕುಳಿತುಕೊಂಡಿದ್ದಾರೆ. ಕೆಲ ಕ್ಷಣದಲ್ಲಿ ಸುಧ ಅಲ್ಲಿಂದ ಹೊರಗೆ ಹೋಗಿದ್ದು ಕೆಲ ಸಮಯದ ಬಳಿಕ ರಾಜು ದೇವಸ್ಥಾನದಿಂದ ಹೊರಗೆ ಬಂದು ನೋಡಿದಾಗ ಸುಧಾಳು ಕಣ್ಮರೆಯಾಗಿದ್ದಳು ಆಕೆಯ ಮೊಬೈಲ್ ಸ್ವಿಚ್ ಆಫ್ ಆಗಿತ್ತು.
ಸುಧಾಳು ದೇವಸ್ಥಾನದಲ್ಲಿ ಮಾತನಾಡಿದ ಯುವಕ ನಾಗರಾಜ ಎಂಬವನೊಂದಿಗೆ ಬೈಕಿನಲ್ಲಿ ಹೋಗಿದ್ದು ಸ್ಥಳೀಯರಿಂದ ತಿಳಿದ ರಾಜು ಕಂಗಾಲಾಗಿದ್ದು ಸಂಜೆಯಾದರೂ ಪತ್ನಿ ಮನೆಗೆ ಬಾರದ ಕಾರಣ ಅನಿವಾರ್ಯವಾಗಿ ಕೊಲ್ಲೂರು ಪೊಲಿಸ್ ಠಾಣೆ ಮೆಟ್ಟಿಲೇರಿದ್ದಾರೆ.