ಮಂಗಳೂರು: ವ್ಯಕ್ತಿ ಯೋರ್ವರನ್ನು ಮಾರಕಾಯುಧಗಳಿಂದ ಯದ್ವಾತದ್ವ ಕಡಿದು ಬರ್ಬರವಾಗಿ ಹತ್ಯೆ ಗೈದಿರುವ ಘಟನೆ ಶಕ್ತಿನಗರ ಸಮೀಪದ ವೈದ್ಯನಾಥ ದೇವಸ್ಥಾನದ ಸಮೀಪದ ಜೋಕುಲ್ಸಾನ ಎಂಬಲ್ಲಿ ನಿನ್ನೆ ತಡರಾತ್ರಿ ವೇಳೆ ಜರಗಿದೆ.
ಕೊಲೆಗೀಡಾದ ವ್ಯಕ್ತಿಯನ್ನು ಮಂಗಳೂರಿನ ಬಂದರ್ ಸಮೀಪದ ಅನ್ಸರ್ ರಸ್ತೆಯ ನಿವಾಸಿ ಅಬ್ದುಲ್ ಹಮೀದ್(47) ಎಂದು ಗುರುತಿಸಲಾಗಿದೆ. ದೇಹದ ಮೇಲೆ ಅಲಲ್ಲಿ ಕತ್ತಿಯಿಂದ ಕಡಿದ ಗಾಯದ ಗುರುತುಗಳಿದ್ದು, ಹೊಟ್ಟೆಯಿಂದ ಕರುಳು ಕಿತ್ತುಬಂದಿದೆ.
ಸ್ಥಳೀಯ ನಿವಾಸಿಯೋರ್ವರು ಮನೆ ಕಡೆಗೆ ತೆರಳುತ್ತಿದ್ದಾಗ ದೈವಸ್ಥಾನ ಸಮೀಪ ರಕ್ತದ ಕಲೆಗಳು ಪತ್ತೆಯಾಗಿತ್ತು. ಕೂಡಲೇ ಅವರು ಸ್ಥಳೀಯರೊಂದಿಗೆ ರಕ್ತದ ಹರಿದ ಸ್ಥಳ ಜೋಕುಲ್ ಸಾನ ತನಕ ತೆರಳಿದಾಗ ಅಬ್ದುಲ್ ಹಮೀದ್ ಬರ್ಬರವಾಗಿ ಕಡಿದು ಹತ್ಯೆಗೈದಿರುವ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ಸ್ಥಳೀಯವಾಗಿ ಗುರುತಿಸಿಕೊಳ್ಳದ ಇವರನ್ನು ಯಾವ ಕಾರಣಕ್ಕಾಗಿ ಕೊಲೆಗೈಯ್ಯಲಾಗಿದೆ, ಹಾಗೂ ರಾತ್ರಿಯ ವೇಳೆ ಇವರು ಅಲ್ಲಿಗೆ ಯಾಕೆ ಹೋಗಿದ್ದರು, ಜೊತೆಗೆ ಯಾರೆಲ್ಲಾ ಇದ್ದರು ಎಂಬುದು ಪೊಲೀಸ್ ತನಿಖೆಯಿಂದಷ್ಟೇ ತಿಳಿದುಬರಬೇಕಿದೆ.
ಗಾಂಜಾ ವ್ಯಸನಿಗಳ ತಾಣ :
ಕೊಲೆ ನಡೆದ ಸ್ಥಳ ನಿರ್ಜನ ಪ್ರದೇಶವಾಗಿದ್ದು, ರಸ್ತೆಯೂ ಕೊನೆಗೊಳ್ಳುವ ಸ್ಥಳವಾಗಿದೆ. ಅಲ್ಲದೆ ಗಾಂಜಾ ವ್ಯಸನಿಗಳ ಅಡ್ಡೆಯೂ ಆಗಿತ್ತು ಎಂದು ಪೊಲೀಸ್ ವಲಯದಿಂದ ತಿಳಿದುಬಂದಿದೆ. ಹಿಂದೆ ಕಳವು, ದರೋಡೆ ಪ್ರಕರಣಗಳೂ ಇಲ್ಲಿ ನಡೆದಿತ್ತು. ಆದರೆ ಸದ್ಯ ಪ್ರಕರಣ ದರೋಡೆ ಅಥವಾ ಗಾಂಜಾ ಹಿನ್ನೆಲೆಯಲ್ಲಿ ನಡೆದಿರುವ ವಿಚಾರ ಪೊಲೀಸ್ ವಲಯದಿಂದ ತಿಳಿದುಬರಬೇಕಿದೆ.
ಮಂಗಳೂರು ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ಕೊಂಡಿದ್ದಾರೆ. ಸ್ಥಳಕ್ಕೆ ಕಮೀಷನರ್ ಆರ್.ಹಿತೇಂದ್ರ ಸಹಿತ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿದ್ದಾರೆ.