ಮಂಗಳೂರು,ಅ.08: ನಗರದ ಹಂಪನಕಟ್ಟೆ ಕುನಿಲ್ ಕಾಂಪ್ಲೆಕ್ಸ್ನಲ್ಲಿರುವ ಫ್ರಂಟ್ಲೈನ್ ಅಡ್ವರ್ಟೈಸ್ಮೆಂಟ್ ಕಚೇರಿಗೆ ಬಂದ ಮುಸ್ಲಿಂ ಯುವತಿಯೊಬ್ಬಳು ಫೊಟೋ ದೊಡ್ಡದು ಮಾಡಿಕೊಡುವಂತೆ ಹೇಳಿಕೊಂಡು ಬಂದಿದ್ದಳು. ಆಕೆ ಬಂದ ಕೆಲವೇ ಸಮಯದಲ್ಲಿ ಕಚೇರಿಗೆ ನುಗ್ಗಿದ 15 ಮಂದಿ ದುಷ್ಕರ್ಮಿಗಳು ಸಿಬ್ಬಂದಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಕೈಗೆ ಸಿಕ್ಕ ಹಣ ಮತ್ತು ಆಭರಣಗಳನ್ನು ದೋಚಿ ಪರಾರಿಯಾದ ಘಟನೆ ಮಂಗಳವಾರ ಅಪರಾಹ್ನ ಸಂಭವಿಸಿದೆ.
ಫ್ರಂಟ್ಲೈನ್ ಅಡ್ವರ್ಟೈಸ್ಮೆಂಟ್ ಕಚೇರಿಯ ಸಿಬ್ಬಂದಿ ರಾಘವೇಂದ್ರ (35) ಎಂಬವರೇ ಹಲ್ಲೆಗೊಳಗಾದ ವ್ಯಕ್ತಿ. ಗಂಭೀರ ಹಲ್ಲೆಗೊಳಗಾಗಿರುವ ರಾಘವೇಂದ್ರರನ್ನು ನಗರದ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಹಲ್ಲೆಗೆ ಕುರಿತ ಪ್ರಕರಣಕ್ಕೆ ಸಂಬಂಧಿಸಿದಂತೆ 15 ಮಂದಿಯ ಮೇಲೆ ನಗರದ ಬಂದರ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಘಟನೆಯ ವಿವರ:
ಮಂಗಳವಾರ ಮಧ್ಯಾಹ್ನ 1ರ ಸುಮಾರಿಗೆ ರಾಘವೇಂದ್ರ ತನ್ನ ಕೆಲಸದಲ್ಲಿ ತೊಡಗಿಕೊಂಡಿದ್ದರು. ಆ ಸಮಯಕ್ಕೆ ಮುಸ್ಲಿಂ ಯುವತಿಯೊಬ್ಬಳು ತನ್ನ ಮೊಬೈಲ್ನಲ್ಲಿರುವ ಫೊಟೋವನ್ನು ಡಿಜಿಟಲೀಕರಣ ಮಾಡಿ ನಕಲು ಕೊಡುವಂತೆ ಕೇಳಿಕೊಂಡು ಬಂದಿದ್ದಳು. ಅದಕ್ಕೆ ಒಪ್ಪಿದ ರಾಘವೇಂದ್ರ ಕೆಲಸಕ್ಕೆ ಸ್ವಲ್ಪ ಸಮಯ ತಗಲುವುದರಿಂದ ಕೊಂಚ ಸಮಯ ಬಿಟ್ಟು ಬನ್ನಿ ಎಂದಿದ್ದರು. ಆಗ ಯುವತಿ ಪರವಾಗಿಲ್ಲ, ಪರವಾಗಿಲ್ಲ ಎನ್ನುತ್ತಲೇ ಸುಮಾರು ಎರಡು ತಾಸುಗಳನ್ನು ಅಲ್ಲೇ ಕಳೆದಿದ್ದಳು ಎನ್ನಲಾಗಿದೆ. ಯುವತಿ ಕಚೇರಿಯಲ್ಲಿರುವುದನ್ನು ಗಮನಿಸಿದ 15 ಜನ ಮುಸ್ಲಿಂ ಯುವಕರ ತಂಡ ಏಕಾ ಏಕಿ ಕಚೇರಿಯೊಳಗೆ ನುಗ್ಗಿತ್ತು. ಎದುರು ಸಿಕ್ಕ ರಾಘವೇಂದ್ರರಿಗೆ ಅಲ್ಲೇ ಇದ್ದ ಕಂಪ್ಯೂಟರ್ ಸಾಮಗ್ರಿಗಳಿಂದ ಹಿಗ್ಗಾಮುಗ್ಗಾ ಥಳಿಸಿ ರೌಡಿಸಂ ಪ್ರದರ್ಶಿಸಿದೆ.
ಮಾರಣಾಂತಿಕ ಹಲ್ಲೆ ನಡೆಸಿ ಸುಮ್ಮನಾಗದ ತಂಡ ಕಚೇರಿಯಲ್ಲಿದ್ದ ಕಂಪ್ಯೂಟರ್ ಗಳನ್ನು ಪುಡಿಗೈದಿತ್ತು. ಜೊತೆಗೆ ಎರಡು ಬೆಲೆಬಾಳುವ ಕ್ಯಾಮೆರಾ, 50ಸಾವಿರ ನಗದನ್ನೂ ದೋಚಿ ಪರಾರಿಯಾಗಿದೆ ಎಂದು ರಾಘವೇಂದ್ರ ತಿಳಿಸಿದ್ದಾರೆ. ಮುಸ್ಲಿಮ್ ಯುವತಿಯನ್ನು ಕಚೇರಿಯಲ್ಲಿ ಕೂರಿಸಿರುವುದರಿಂದಲೇ ಹಲ್ಲೆ ನಡೆಸಲಾಗಿದೆ ಎನ್ನಲಾಗುತ್ತಿದೆ. ಆದರೆ ಹಲ್ಲೆಗೈದವರು ಬರೀ ಹಲ್ಲೆಗಷ್ಟೇ ಮೀಸಲಾಗದೆ, ಚಿನ್ನಾಭರಣ, ನಗದಿನ ಜೊತೆ ಪರಾರಿಯಾಗಿರುವುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಬಂದರ್ ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಪೂರ್ವನಿಯೋಜಿತ ಕೃತ್ಯ..?
ಫೋಟೋ ಡಿಜಿಟಲೀಕರಣ ಮಾಡಿಕೊಡುವಂತೆ ಮಧ್ಯಾಹ್ನ ಬಂದ ಯುವತಿ ಸುಮಾರು ಎರಡು ತಾಸು ಕಳೆದರೂ ಸ್ಥಳದಿಂದ ನಿರ್ಗಮಿಸಿರಲಿಲ್ಲ. ಅಲ್ಲದೆ ಯುವತಿಯ ಮೊಬೈಲಿಗೆ ಕ್ಷಣ ಕ್ಷಣಕ್ಕೂ ಕರೆಗಳು ಬರುತ್ತಿದ್ದವೆಂದು ಪ್ರತ್ಯಕ್ಷದರ್ಶಿ ಮಹಿಳೆಯೋರ್ವರು ತಿಳಿಸಿದ್ದಾರೆÉ. ಫೋನ್ನಲ್ಲಿ ಯುವತಿ ಗುಸು ಗುಸು ಮಾತನಾಡುತ್ತಿದ್ದುದು ಕೂಡಾ ಅನುಮಾನಕ್ಕೆ ಕಾರಣವಾಗಿದೆ. ಈ ಯುವತಿಯೇ ತಂಡವನ್ನು ಕರೆಸಿ ರಬಹುದಾದ ಸಾಧ್ಯತೆಯೂ ಇದೆ ಎನ್ನ ಲಾಗುತ್ತಿದೆ. ಅಲ್ಲದೆ ಗುಂಪು ಯಾವುದರ ಬಗ್ಗೆಯೂ ತುಟಿಕ್ಪಿಟಿಕ್ಕೆನ್ನದೆ ಹಲ್ಲೆ ನಡೆಸಿ, ದರೋಡೆಗೈದಿರುವುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಎಲ್ಲದಕ್ಕೂ ಉತ್ತರ ತನಿಖೆಯ ನಂತರವೇ ತಿಳಿದುಬರಲಿದೆ. ನೈತಿಕ ಪೊಲೀಸರು ಈ ಹಲ್ಲೆಯ ಹಿಂದೆ ಇದ್ದಿರಬಹುದು ಎಂದು ಹೇಳಲಾಗುತ್ತಿದೆ. ಮತ್ತೊಂದು ಕಡೆ ವೈಯಕ್ತಿಕ ದ್ವೇಷದ ಹಿನ್ನೆಲೆ ಇದ್ದಿರಬಹುದೇ ಎಂಬ ಶಂಕೆಯೂ ಇದೆ.