ಮಂಗಳೂರು:ಅ.07: ಪುತ್ತೂರಿನ ಬೆಳಂದೂರಿನ ಜಿಲ್ಲಾ ಪಂಚಾಯತ್ ಸದಸ್ಯೆ ಸಾವಿತ್ರಿ ಶಿವರಾಂ (60) ಇಂದಿಲ್ಲಿ ಅಲ್ಪಕಾಲದ ಅಸ್ವಾಸ್ಥ್ಯದಿಂದ ನಿಧನರಾಗಿದ್ದಾರೆ. ಮೂಲತ: ದೇವರಗುಂಡು ಗ್ರಾಮದವರಾದ ಸಾವಿತ್ರಿ ಶಿವರಾಂ ಪತಿ ಶಿವರಾಂ, ಈರ್ವರು ಪುತ್ರಿಯರು, ತಾಯಿ, ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ಸಹಿತ 4 ಸಹೋದರರು, ಓರ್ವ ಸಹೋದರಿ ಮತ್ತು ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ. ರಾಷ್ಟ್ರ ಸೇವಿಕಾ ಸಮಿತಿಯ ಕಾರ್ಯಕರ್ತೆಯೂ ಆಗಿದ್ದ ಸಾವಿತ್ರಿ ಶಿವರಾಂ ಪುತ್ತೂರು ತಾಲೂಕು ಪಂಚಾಯತ್ ಅಧ್ಯಕ್ಷರಾಗಿಯೂ 2009 ರಿಂದ 2011 ರ ವರೆಗೆ ಜವಾಬ್ದಾರಿ ನಿರ್ವಹಿಸಿದ್ದರು.
ಸಾವಿತ್ರಿ ಶಿವರಾಂ ನಿಧನಕ್ಕೆ ಸಂಸದ ನಳಿನ್ ಕುಮಾರ್ ಕಟೀಲು, ಶಾಸಕರಾದ ಕ್ಯಾ| ಗಣೇಶ್ ಕಾರ್ಣಿಕ್, ಅಂಗಾರ. ಎಸ್, ಮಾಜಿ ಶಾಸಕ ಕೆ.ಮೋನಪ್ಪ ಭಂಡಾರಿ, ಬಾಲಕೃಷ್ಣ ಭಟ್, ಕೃಷ್ಣ ಜೆ.ಪಾಲೆಮಾರ್, ಮಲ್ಲಿಕಾ ಪ್ರಸಾದ್, ಜಿಲ್ಲಾ ಬಿಜೆಪಿ ಅಧ್ಯಕ್ಷ ಕೆ. ಪ್ರತಾಪಸಿಂಹ ನಾಯಕ್, ಪ್ರಮುಖರಾದ ಕಿಶೋರ್ ರೈ, ಸಂಜೀವ ಮಠಂದೂರು, ಶೈಲಜಾ ಕೆ.ಟಿ ಭಟ್, ಸುಲೋಚನಾ ಜಿ.ಕೆ ಭಟ್, ಜ್ಯೇಷ್ಠ ಪಡಿವಾಳ್, ಸತೀಶ್ ಪ್ರಭು, ಕಾತ್ಯಾಯಿನಿ, ಸಂಜಯ ಪ್ರಭು, ಗುರುಚರಣ್ ರಾವ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಮೃತರ ಮೃತ ದೇಹವನ್ನು ಇಂದು ಮಂಗಳೂರಿನಿಂದ ಈಶ್ವರಮಂಗಲಕ್ಕೆ ತರಲಾಗಿದ್ದು, ನಾಳೆ ಬೆಳಿಗ್ಗೆ ೮.೦೦ ಗಂಟೆಗೆ ಪೆರಾಜೆಯ ಮನೆಯಲ್ಲಿ ಅಂತ್ಯಕ್ರಿಯೆ ನಡೆಯಲಿದೆ.