ಮಂಗಳೂರು, ಆ .07: ಅಡ್ಯಾರ್ನ ಸಹ್ಯಾದ್ರಿ ಕಾಲೇಜಿನ ಆವರಣದಲ್ಲಿ ಡಿಸೆಂಬರ್ 12-14 ರವರೆಗೆ ನಡೆಯುವ ವಿಶ್ವ ತುಳುವೆರೆ ಪರ್ಬ ತುಳು ನಾಡಿನ ಸಮಸ್ಯೆ ಹಾಗೂ ಅಭಿವೃದ್ಧಿಯನ್ನೇ ಪ್ರಮುಖವಾಗಿ ವಿಚಾರ ಸಂಕಿರಣಗಳಲ್ಲಿ ಕೇಂದ್ರೀಕರಿಸುವಂತೆ ತುಳು ಒಕ್ಕೂಟದ ಘಟಕ ಸಂಘಟನೆ ಪದಾಧಿಕಾರಿಗಳ ಸಭೆ ನಿರ್ಧರಿಸಿತು.
ಆ 5 ರಂದು ನಡೆದ ಈ ಸಭೆ ತುಳು ಒಕ್ಕೂಟದ ಸದಸ್ಯರು ಸಕ್ರಿಯ ವಾಗಿ ಬೆಳ್ಳಿ ಹಬ್ಬದ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವಂತೆಯೂ ಮನವಿ ಮಾಡಿದೆ. ಒಕ್ಕೂಟದ ಗೌರವ ಅಧ್ಯಕ್ಷ ದಾಮೋದರ ನಿಸರ್ಗ ಅಧ್ಯಕ್ಷತೆ ವಹಿಸಿದ್ದರು. ಪರ್ಬದ ಸಂಯೋಜಕ ಎ.ಸಿ. ಭಂಡಾರಿ ಒಕ್ಕೂಟದ ಮಾಜಿ ಅಧ್ಯಕ್ಷ ಅಡ್ಯಾರು ಮಹಾಬಲ ಶೆಟ್ಟಿ ಖಜಾಂಚಿ ಬಿ. ಜಯಕರ ಶೆಟ್ಟಿ ಮಾತನಾಡಿದರು.ವಿಶ್ವ ತುಳುವೆರೆ ಪರ್ಬ ತುಳು ನಾಡಿನ ರಂಗಕಲೆ ಪ್ರದರ್ಶನವಲ್ಲದೆ ತುಳುನಾಡಿನ ಪಾರಂಪರಿಕ ವಿವಿಧ ಕ್ರೀಡೆಗಳು, ಆಹಾರೋತ್ಸವ, ನಾಟಕೋತ್ಸವ, ಜಾನಪದೀಯ ಔಷಧಗಳಿಗೆ ಆದ್ಯತೆ ನೀಡುವಂತೆ ಸಭೆ ನಿರ್ಧರಿಸಿತು.
ಒಕ್ಕೂಟದಲ್ಲಿ ಈಗಾಗಲೇ ಸದಸ್ಯ ರಾಗಿರುವ ನಾಸಿಕ್ ಸೂರತ್, ಬರೋಡ, ದಿಲ್ಲಿ, ಮುಂಬೈ, ಸಾಂಗ್ಲಿ, ಚೆನ್ನೈ, ಪುಣೆಗಳಲ್ಲಿನ ಹೊರರಾಜ್ಯದ ಸಂಘಟನೆಗಳಲ್ಲದೆ ತುಳುವರು ಹೆಚ್ಚು ಸಂಖ್ಯೆಯಲ್ಲಿರುವ ಇತರ ಹೊರರಾಜ್ಯ ನಗರಗಳಲ್ಲೂ ಸಂಘಟಿತರಾಗಿ ಒಕ್ಕೂಟಕ್ಕೆ ಸೇರ್ಪಡೆಯಾಗುವಂತೆ ಅಧ್ಯಕ್ಷ ಸ್ಥಾನದಿಂದ ಮಾತನಾಡಿದ ದಾಮೋದರ ನಿಸರ್ಗ ಮನವಿ ಮಾಡಿದರು.
ಕಾರ್ಯದರ್ಶಿ ರತ್ನಕುಮಾರ್ ಎಂ. ಸ್ವಾಗತಿಸಿ ವಂದಿಸಿದರು. ಡಾ. ಕಿಶೋರ್ ಕುಮಾರ್ ರೈ, ಹರೀಶ್ ಬೋಳೂರು, ಚಂದ್ರಹಾಸ ದೇವಾಡಿಗ, ವಿಜಯಕುಮಾರ್ ಭಂಡಾರಿ, ಧನಕೀರ್ತಿ ಬಲಿಪ, ಸುಭಾಶ್ಚಂದ್ರ ಪಡಿವಾಳ್, ವಿ.ಜಿ. ಪಾಲ್, ಎಂ. ಕರುಣಾಕರ ಶೆಟ್ಟಿ, ಭಾಸ್ಕರ ಕುಲಾಲ್, ಹರೀಶ್ ನೀರ್ ಮಾರ್ಗ, ವಿಜಯಲಕ್ಷ್ಮೀ ಶೆಟ್ಟಿ ಹೇಮಂತ್ ಗರೋಡಿ, ಜಯಲಕ್ಷ್ಮೀ ಶೆಟ್ಟಿ ಸಂದೀಪ್ ಗರೋಡಿ, ಯತಿರಾಜ್ ಜೈನ್ ಮತಿತ್ತರರು ಉಪಸ್ಥಿತರಿದ್ದರು.