ಮಂಗಳೂರು, ಅ.6: ಬಜ್ಪೆ ಕೆಂಜಾರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ರನ್ವೇ ಕಾಮಗಾರಿಯ ಹಿನ್ನೆಲೆಯಲ್ಲಿ 6 ತಿಂಗಳ ಕಾಲ ರಾತ್ರಿ ವಿಮಾನ ಹಾರಾಟ ಸ್ಥಗಿತಗೊಳ್ಳುವ ಸಾಧ್ಯತೆ ಇದೆ.
‘‘ಹೊಸತಾಗಿ ನಿರ್ಮಿಸಿದ ರನ್ವೇಯ ಒಂದು ಪಾರ್ಶ್ವ ದಲ್ಲಿ ಕಾಮಗಾರಿ ನಡೆಯಲಿದೆ. ಈ ಸಂದರ್ಭ ಭದ್ರತೆಯ ಹಿನ್ನೆಲೆಯಲ್ಲಿ 2014ರ ನವೆಂಬರ್ನಿಂದ 2015ರ ಎಪ್ರಿಲ್ 30ರವರೆಗೆ ರಾತ್ರಿ ವಿಮಾನ ಸಂಚಾರ ಸ್ಥಗಿತಗೊಳಿಸಲು ಅನುಮತಿ ಕೋರಿ ನಾಗರಿಕ ವಿಮಾನಯಾನ ಇಲಾಖೆಯ ಆಡಳಿತ ನಿರ್ದೇಶಕರಿಗೆ ಪತ್ರ ಬರೆಯಲಾಗಿದೆ. ಅನುಮತಿ ದೊರೆತ ಬಳಿಕ ಸಂಚಾರ ಸ್ಥಗಿತಗೊಳಿಸಲಾಗುವುದು’’ ಎಂದು ಮಂಗಳೂರು ವಿಮಾನ ನಿಲ್ದಾಣ ಪ್ರಾಧಿಕಾರದ ನಿರ್ದೇಶಕ ಜೆ.ಟಿ.ರಾಧಾಕೃಷ್ಣನ್ ತಿಳಿಸಿದ್ದಾರೆ.
ಹೊಸ ರನ್ವೇಯಿಂದ ಪಾರ್ಕಿಂಗ್ ಸ್ಥಳ ಸಂಪರ್ಕಿಸುವ ಟ್ಯಾಕ್ಸಿ ವೇ ನಿರ್ಮಾಣ ಕಾಮಗಾರಿ ನಡೆಯಲಿರುವುದರಿಂದ ರಾತ್ರಿ ವಿಮಾನ ಹಾರಾಟ ಸ್ಥಗಿತಗೊಳಿಸುವುದು ಅನಿ ವಾರ್ಯ. ನಾಗರಿಕ ವಿಮಾನಯಾನ ಇಲಾಖೆ ಅನು ಮತಿ ನೀಡಿದರೆ ನವೆಂಬರ್ 1ರಿಂದ ಮುಂದಿನ ಆರು ತಿಂಗಳ ಕಾಲ ರಾತ್ರಿ 11:30ರಿಂದ ಬೆಳಗ್ಗೆ 7:30ರ ವರೆಗೆ ವಿಮಾನ ಹಾರಾಟ ಸ್ಥಗಿತಗೊಳ್ಳಲಿದೆ ಎಂದವರು ತಿಳಿಸಿದರು. ಇದರನ್ವಯ ದುಬೈ ಮತ್ತು ದಮಾಮ್ಗೆ ಹಾರಾಡುವ ಜೆಟ್ ಏರ್ಲೈನ್ಸ್ ಮತ್ತು ಏರ್ ಇಂಡಿಯಾ ವಿಮಾನ ಹಾರಾಟ ನಿಲ್ಲಿಸಲಿದೆ. ಬೆಳಗ್ಗೆ 7:40ಕ್ಕೆ ಆಗಮಿಸುವ ಜೆಟ್ ಏರ್ವೇಸ್ ರಾತ್ರಿ 11:05ಕ್ಕೆ ದುಬೈಗೆ ತೆರಳುತ್ತದೆ. ಅದಲ್ಲದೆ ಬೆಳಗ್ಗೆ 8 ಗಂಟೆಗೆ ಆಗಮಿಸುವ ವಿಮಾನ ರಾತ್ರಿ 11:25ಕ್ಕೆ ತೆರಳುತ್ತದೆ.
ಏರ್ ಇಂಡಿಯಾ ಎಕ್ಸ್ಪ್ರೆಸ್ ವಿಮಾನ ಮುಂಜಾನೆ 3:20ಕ್ಕೆ ದಮಾಮ್ನಿಂದ ಆಗಮಿಸಿ ಬೆಳಗ್ಗೆ 7:30ಕ್ಕೆ ತೆರಳುತ್ತದೆ. ದುಬೈಯಿಂದ ಬೆಳಗ್ಗೆ 7:45ಕ್ಕೆ ಆಗಮಿಸುವ ವಿಮಾನ ರಾತ್ರಿ 11.15ಕ್ಕೆ ನಿರ್ಗಮಿಸಲಿದೆ.