ವರದಿ ಹಾಗೂ ವಿಶೇಷ ಚಿತ್ರಗಳು : ಸತೀಶ್ ಕಾಪಿಕಾಡ್.
ಈ ವರದಿಯಲ್ಲಿ ಶೋಭಾಯಾತ್ರೆಯ 100ಕ್ಕೂ ಹೆಚ್ಚು ವಿಶೇಷ ಚಿತ್ರಗಳಿವೆ.
ಮಂಗಳೂರು,ಅ.04: ಕುದ್ರೋಳಿ ಶ್ರೀಗೋಕರ್ಣನಾಥ ದೇವಸ್ಥಾನದಲ್ಲಿ ಮಂಗಳೂರು ದಸರಾ ಹಾಗೂ ನವರಾತ್ರಿ ಮಹೋತ್ಸವದ ಸಡಗರದೊಂದಿಗೆ ಪೂಜಿಸಲ್ಪಟ್ಟ ಶ್ರೀ ಗಣಪತಿ, ಶ್ರೀ ಶಾರದೆ ಮಾತೆ ಸಹಿತ ನವದುರ್ಗೆಯರ ವಿಗ್ರಹಗಳ ಭವ್ಯ ಶೋಭಾಯಾತ್ರೆಯು ಶನಿವಾರ ಸಂಜೆ ಶ್ರೀ ಕ್ಷೇತ್ರದ ನವೀಕರಣದ ಮತ್ತು ಮಂಗಳೂರು ದಸರಾ ರೂವಾರಿ, ಮಾಜಿ ಕೇಂದ್ರ ಸಚಿವ ಬಿ. ಜನಾರ್ದನ ಪೂಜಾರಿ ಅವರ ನೇತೃತ್ವದಲ್ಲಿ ಬಹಳ ವೈಭವದಿಂದ ಜರಗಿತು.
ಕುದ್ರೋಳಿ ದೇವಸ್ಥಾನದ ಸ್ವರ್ಣ ಮಂಟಪದಲ್ಲಿ ಪ್ರತಿಷ್ಠಾಪಿಸಿದ್ದ ಗಣಪತಿ, ಆದಿಶಕ್ತಿ, ಶೈಲಪುತ್ರಿ, ಬ್ರಹ್ಮಚಾರಿಣಿ, ಚಂದ್ರಘಂಟ, ಕೂಷ್ಮಾಂಡಿನಿ, ಸ್ಕಂದ ಮಾತಾ, ಕಾತ್ಯಾಯಿನಿ, ಮಹಾಕಾಳಿ, ಮಹಾಗೌರಿ, ಸಿದ್ಧಿದಾತ್ರಿ, ಶಾರದೆಯನ್ನು ಸಂಜೆ ದೇವಸ್ಥಾನದ ಆವರಣಕ್ಕೆ ತಂದಿರಿಸಲಾಯಿತು. ಅಲ್ಲಿಂದ ಭಕ್ತ ಜನಸಾಗರದ ಜಯಘೋಷಗಳೊಂದಿಗೆ ಅಲಂಕೃತ ವಾಹನಗಳಿಗೆ ಏರಿಸಲಾಯಿತು.
ಸಾಲು ಸಾಲು ಬಣ್ಣದ ಕೊಡೆಗಳು, ಕಿವಿಗಡಚಿಕ್ಕುವ ಚೆಂಡೆ ವಾದನ, ನಾಸಿಕ್ ಬ್ಯಾಂಡ್ ಅಬ್ಬರ, ಭಜನಾ ತಂಡಗಳ ಶಿಸ್ತುಬದ್ಧ ಕುಣಿತ, ಕೋಲಾಟ, ವೀರಗಾಸೆ, ಕಂಸಾಳೆ , ಡೋಲು, ಜಾಗಟೆ, ಕೊಂಬು, ಕಹಳೆಯ ನಿನಾದ, ಮುಗಿಲು ಮುಟ್ಟಿದ ಭಕ್ತರ ಜಯಘೋಷ, ವೈವಿಧ್ಯಮಯ ನೃತ್ಯ, ಅಲ್ಲಲ್ಲಿ ಸಂಗೀತದ ರಸದೌತಣ, ಸುಡುಮದ್ದುಗಳ ಸುರಿಮಳೆ, ಬಣ್ಣ ಬಣ್ಣದ ಲೋಕದ ಮೂಲಕ ಶ್ರೀ ಮಹಾಗಣಪತಿ, ಶಾರದೆ, ಆದಿಶಕ್ತಿ, ಶ್ರೀ ಕ್ಷೇತ್ರದ ವಿಶಿಷ್ಟ ಪರಂಪರೆಯಾದ ನವದುರ್ಗೆಯರ ಶೋಭಾಯಾತ್ರೆಯು ಶ್ರೀ ಕ್ಷೇತ್ರದಿಂದ ಪ್ರಾರಂಭವಾಗಿ ಮಣ್ಣಗುಡ್ಡೆ, ಲೇಡಿಹಿಲ್, ಲಾಲ್ಬಾಗ್, ಬಲ್ಲಾಳ್ಬಾಗ್, ಎಂಜಿ ರಸ್ತೆ, ಕೆಎಸ್ರಾವ್ ರಸ್ತೆ, ಹಂಪನಕಟ್ಟೆ, ಜಿಎಚ್ಎಸ್ ರಸ್ತೆ , ಶ್ರೀ ವೆಂಕಟರಮಣ ದೇವಸ್ಥಾನದ ಮುಂಭಾಗದಿಂದ ಕಾರ್ಸ್ಟ್ರೀಟ್ ಚಿತ್ರಾ ಮೂಲಕ ಸಾಗಿ ರವಿವಾರ ಮುಂಜಾನೆ ಶ್ರೀ ಕ್ಷೇತ್ರದ ಪುಷ್ಕರಣಿಯಲ್ಲಿ ಸಂಪನ್ನಗೊಳ್ಳಲ್ಲಿದೆ.
ಲಕ್ಷಾಂತರ ಭಕ್ತರು ವರ್ಣಮಯ ಶೋಭಾಯಾತ್ರೆಯಲ್ಲಿ ಪಾಲ್ಗೊಂಡಿದ್ದರು. ನಗರವು ಪೂರ್ತಿ ವರ್ಣಮಯ ವಿದ್ಯುದ್ದೀಪಾಲಂಕಾರದಿಂದ ಕಂಗೊಳಿಸಿತು. ಶೋಭಾಯಾತ್ರೆಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳ ಸಾಂಸ್ಕೃತಿಕ, ಜಾನಪದ ಪರಂಪರೆ ತಂಡ, ಕರಾವಳಿಯ ಹುಲಿವೇಷ, ತ್ರಿಶೂರಿನ ವರ್ಣಮಯ ಕೊಡೆ, ಕೇರಳದ ಚೆಂಡೆವಾದ್ಯ, ಮಹಾರಾಷ್ಟ್ರದ ಡೋಲಾನೃತ್ಯ, ಆಂಧ್ರದ ಬಾಲಮುರಳಿಕೃಷ್ಣ ಕೋಲಾಟ, ಕಲ್ಲಡ್ಕದ ಶಿಲ್ಪಾಗೊಂಬೆ, ವಾದ್ಯವೃಂದ, ವಿವಿಧ ಪುಣ್ಯಕ್ಷೇತ್ರಗಳ ಸಹಕಾರದೊಂದಿಗೆ ಮೆರವಣಿಗೆಯಲ್ಲಿ ನೂರಕ್ಕೂ ಹೆಚ್ಚಿನ ಸ್ತಬ್ಧಚಿತ್ರಗಳು ವಿಶೇಷ ಆಕರ್ಷಣೆಯಾಗಿದ್ದವು.
ಶೋಭಾಯಾತ್ರೆ ಸಾಗಿದ ರಸ್ತೆಯುದ್ದಕ್ಕೂ ವಿದ್ಯುತ್ ದೀಪಗಳಿಂದ ಅಲಂಕೃತಗೊಂಡಿದ್ದು, ಸ್ವಾಗತ ಕೋರುವ ದೇವಿಯ ಚಿತ್ರದ ಫ್ಲೆಕ್ಸ್ಗಳು ರಾರಾಜಿಸುತ್ತಿದ್ದವು. ಅಲ್ಲಲ್ಲಿ ಭಕ್ತಾಧಿಗಳು ಆರತಿ ಪೂಜೆ ಸಲ್ಲಿಸಿದರು. ಮೆರವಣಿಗೆ ವೀಕ್ಷಿಸಲು ಮಕ್ಕಳು, ಮಹಿಳೆಯರು ಸೇರಿದಂತೆ ಲಕ್ಷಾಂತರ ಮಂದಿ ಸಂಜೆಯಿಂದಲೇ ರಸ್ತೆ ಪಕ್ಕದಲ್ಲಿ ಗುಂಪುಗುಂಪಾಗಿ ನೆರೆದಿದ್ದರು. ಸುಡುಮದ್ದುಗಳ ಪ್ರದರ್ಶನ ನೋಡುಗರ ಮೈನವಿರೇಳಿಸಿತು.
ಶಾಸಕರಾದ ಜೆ.ಆರ್.ಲೋಬೋ, ಮೊಯ್ದಿನ್ ಬಾವ, ಮೇಯರ್ ಮಹಾಬಲ ಮಾರ್ಲ, ಶ್ರೀ ಕ್ಷೇತ್ರದ ಅಭಿವೃದ್ಧಿ ಸಮಿತಿ ಅಧ್ಯಕ್ಷ ಅಧ್ಯಕ್ಷ ಜಯ ಸಿ. ಸುವರ್ಣ, ಸಹ ಅಧ್ಯೆಕ್ಷೆ ಶ್ರೀಮತಿ ಉರ್ಮಿಳಾ ರಮೇಶ್ ಕುಮಾರ್, ಶ್ರೀ ಕ್ಷೇತ್ರದ ಆಡಳಿತಾ ಮಂಡಳಿ ಅಧ್ಯಕ್ಷ ಎಚ್.ಎಸ್.ಸಾಯಿರಾಮ್, ಉಪಾಧ್ಯಕ್ಷ ರಾಘವೇಂದ್ರ ಕೂಳೂರು, ಕೋಶಾಧಿಕಾರಿ ಪದ್ಮರಾಜ್ .ಆರ್, ಶ್ರೀ ಕ್ಷೇತ್ರದ ಅಭಿವೃದ್ಧಿ ಸಮಿತಿ ಸದಸ್ಯರಾದ ಹರಿಕೃಷ್ಣ ಬಂಟ್ವಾಳ್, ಡಾ. ಬಿಜಿ.ಸುವರ್ಣ, ರವಿಶಂಕರ್ ಮಿಜಾರು ಪದಾಧಿಕಾರಿಗಳಾದ ಮಾದವ ಸುವರ್ಣ,ಬಿ.ಕೆ.ತಾರನಾಥ್, ಕೆ.ಮಹೇಶ್ಚಂದ್ರ, ದೇವೇಂದ್ರ ಪೂಜಾರಿ, ಬಿ.ದೇವದಾಸ್, ಎನ್.ಹರಿಶ್ಚಂದ್ರ, ರಾಧಾಕೃಷ್ಣ ಮುಂತಾದವರು ಶೋಭಾಯಾತ್ರೆಯಲ್ಲಿ ಪಾಲ್ಗೊಂಡರು.
ಶ್ರೀ ದೇವರ ಸೇವೆ ಮಾಡಿವರಿಗೆ ಹಾಗೂ ಇತರ ಸಾಧಕರಿಗೆ ಗೌರವ -ಸನ್ಮಾನ :
ಶಾಸಕರಾದ ಜೆ.ಆರ್.ಲೋಬೋ, ಮೊಯ್ದಿನ್ ಬಾವ, ಮೇಯರ್ ಮಹಾಬಲ ಮಾರ್ಲ, ಶ್ರೀ ಕ್ಷೇತ್ರದ ಅಭಿವೃದ್ಧಿ ಸಮಿತಿ ಅಧ್ಯಕ್ಷ ಅಧ್ಯಕ್ಷ ಜಯ ಸಿ. ಸುವರ್ಣ, ಶ್ರೀ ಕ್ಷೇತ್ರದ ಆಡಳಿತಾ ಮಂಡಳಿ ಅಧ್ಯಕ್ಷ ಎಚ್.ಎಸ್.ಸಾಯಿರಾಮ್ ಹಾಗೂ ಹಲವಾರು ಗಣ್ಯರು ಸೇರಿದಂತೆ ಮಂಗಳೂರು ದಸರಾ ಮಹೋತ್ಸವದ ಯಶಸ್ಸಿಗೆ ವಿಶೇಷ ಸೇವೆ ಸಲ್ಲಿಸಿದವರನ್ನು ಜನಾರ್ದನ ಪೂಜಾರಿ ಅವರು ಶೋಭಾಯಾತ್ರೆಗೆ ಮೊದಲು ಶ್ರೀ ಶಾರದೆಯ ಸನ್ನಿಧಿಯಲ್ಲಿ ಸಮ್ಮಾನಿಸಿದರು.
ಈ ಸಂದರ್ಭದಲ್ಲಿ , ಉಪಾಧ್ಯಕ್ಷ ರಾಘವೇಂದ್ರ ಕೂಳೂರು, ಕೋಶಾಧಿಕಾರಿ ಪದ್ಮರಾಜ್ .ಆರ್, ನವೀಕರಣ ಸಮಿತಿ ಸದಸ್ಯರಾದ ಡಾ. ಬಿ.ಜಿ.ಸುವರ್ಣ, ಹರಿಕೃಷ್ಣ ಬಂಟ್ವಾಳ್, ರವಿಶಂಕರ್ ಮಿಜಾರು ಪದಾಧಿಕಾರಿಗಳಾದ ಮಾದವ ಸುವರ್ಣ,ಬಿ.ಕೆ.ತಾರನಾಥ್, ಕೆ.ಮಹೇಶ್ಚಂದ್ರ, ಶ್ರೀ ಜಯ ಸಿ ಸುವರ್ಣ, ದೇವೇಂದ್ರ ಪೂಜಾರಿ, ಬಿ.ದೇವದಾಸ್, ಎನ್.ಹರಿಶ್ಚಂದ್ರ, ರಾಧಾಕೃಷ್ಣ ಹಾಗೂ ಮುಂತಾದವರು ಉಪಸ್ಥಿತರಿದ್ದರು.
ಬಿಗು ಬಂದೋಬಸ್ತ್:
ದಸರಾ ಮೆರವಣಿಗೆ ಅಂಗವಾಗಿ ನಗರದ ಪ್ರಮುಖ ರಸ್ತೆಗಳಲ್ಲಿ ವಾಹನ ಸಂಚಾರ ಬದಲಾವಣೆ ಮಾಡಲಾಗಿತ್ತು. ಮೆರವಣಿಗೆ ಸಾಗುವ ರಸ್ತೆಯಲ್ಲಿ ವಾಹನ ಸಂಚಾರ ನಿಷೇಧಿಸಲಾಗಿತ್ತು. ಯಾವುದೇ ಅಹಿತಕರ ಘಟನೆ ನಡೆಯದಂತೆ ನಗರದಾದ್ಯಂತ ಬಿಗು ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.
ವಾಹನ ಸಂಚಾರ ನಿಷೇಧ:
ಮೆರವಣಿಗೆಯ ಹಿನ್ನಲೆಯಲ್ಲಿ ಶನಿವಾರ ಸಂಜೆ ೩ರಿಂದ ಮೆರವಣಿಗೆ ಸಾಗಿದ್ದಂತೆಲ್ಲಾ ಆಯಾ ರಸ್ತೆಗಳಲ್ಲಿ ವಾಹನ ಸಂಚಾರ ಬದಲಾವಣೆ ಮಾಡಲಾಗಿತ್ತು. ಮೆರವಣಿಗೆ ಆರಂಭವಾದ ಕೂಡಲೇ ನ್ಯೂ ಚಿತ್ರದಿಂದ ಕುದ್ರೋಳಿ ಕಡೆಗೆ, ಅಳಕೆ ಜಂಕ್ಷನ್ ನಿಂದ ಕುದ್ರೋಳಿ ದೇವಸ್ಥಾನದ ಕಡೆಗೆ ವಾಹನ ಸಂಚಾರ ನಿಷೇಧ ಮಾಡಲಾಗಿತ್ತು. ಕುದ್ರೋಳಿ ದೇವಸ್ಥಾನದ ದಕ್ಷಿಣ ಗೇಟ್ ಮತ್ತು ಉತ್ತರ ಗೇಟ್ ರಸ್ಥೆಗಳಲ್ಲಿ ನಿಷೇಧ ಹೇರಲಾಗಿತ್ತು.
ವರದಿ ಹಾಗೂ ವಿಶೇಷ ಚಿತ್ರಗಳು : ಸತೀಶ್ ಕಾಪಿಕಾಡ್.