ಮಂಗಳೂರು,ಅಕ್ಟೋಬರ್.01: ಮಂಗಳೂರು ಆಕಾಶವಾಣಿಯ ಹರ್ಷ ವಾರದ ಅತಿಥಿಯ 162 ನೇ ಕಾರ್ಯಕ್ರಮದಲ್ಲಿ ಅಕ್ಟೋಬರ್ 5ರಂದು ಬೆಳಿಗ್ಗೆ 8.5೦ಕ್ಕೆ ನಿವೃತ್ತ ಲೋಕಾಯುಕ್ತರಾದ ಶ್ರೀ.ಎನ್ ಸಂತೋಷ್ ಹೆಗ್ಡೆ ಭಾಗವಹಿಸಲಿದ್ದಾರೆ.
ಕರ್ನಾಟಕ ಲೋಕಯುಕ್ತರಾಗಿ ಭ್ರಷ್ಟಚಾರಿಗಳಿಗೆ ಸಿಂಹಸ್ವಪ್ನರಾಗಿದ್ದ ಇವರು ಅಡ್ವಕೇಟ್ ಜನರಲ್, ಭಾರತದ ಪಾಲಿಸಿಟರ್ ಜನರಲ್ ಆಗಿ ಆಯ್ಕೆಯಾದ ಮೊದಲ ಕನ್ನಡಿಗರು. ಸುಪ್ರೀಂಕೋರ್ಟ್ನ ಜಡ್ಜ್ ಆಗಿ, ದೂರಸಂಪರ್ಕ ನ್ಯಾಯಾಲಯದ ಅಧ್ಯಕ್ಷರಾಗಿ ಅನುಪಮ ಸೇವೆಸಲ್ಲಿಸಿದವರು. ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ರಾಮಕೃಷ್ಣ ಹೆಗ್ಡೆ, ಅಟಲ್ಬಿಹಾರಿ ವಾಜಪೇಯಿ, ಎಲ್.ಕೆ ಅಡ್ಡಾಣಿ ಮುಂತಾದವರ ಜೊತೆ ಬೆಂಗಳೂರಿನಲ್ಲಿ ನಿಕಟ ಸಂಪರ್ಕವಿದ್ದ ಹೆಗ್ಡೆಯವರು ಅವರ ಪರವಾದಿಸಿ ಬಿಡುಗಡೆಗೆ ಶ್ರಮಿಸಿದವರು.
ಅಣ್ಣಾ ಹಜಾರೆ ತಂಡದೊಂದಿಗೆ ಭ್ರಷ್ಟಚಾರ ನಿರ್ಮೂಲನಾ ಹೋರಾಟದಲ್ಲಿ ಭಾಗಿಯಾದವರು. ದೇಶದುದ್ದಗಲಕ್ಕೂ ಭ್ರಷ್ಟಚಾರ ವಿರುದ್ಧ ತಿಳುವಳಿಕೆಗಾಗಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸುವ ಇವರಿಗೆ ಮಂಗಳೂರು ವಿಶ್ವವಿದ್ಯಾಲಯವು ಗೌರವ ಡಾಕ್ಟರೇಟ್ ಹಾಗೂ ಹಂಪಿ ವಿ.ವಿ. ನಾಡೋಜ ಪ್ರಶಸ್ತಿ ನೀಡಿ ಗೌರವಿಸಿದೆ. 1966 ರಿಂದ ವಕೀಲ ವೃತ್ತಿಯನ್ನು ಆರಂಭಿಸಿದ ಇವರು ಇಂದಿನ ವರೆಗಿನ ವ್ಯವಸ್ಥೆಯ ಕುರಿತಾಗಿ ತಮ್ಮ ಸಂದರ್ಶನದಲ್ಲಿ ಖಾಸ್ಬಾತ್ ಹಂಚಿಕೊಂಡಿದ್ದಾರೆ.,
ಇವರನ್ನು ಕಾರ್ಯಕ್ರಮ ನಿರ್ವಾಹಕರಾದ ಡಾ.ಸದಾನಂದ ಪೆರ್ಲ ಸಂದರ್ಶಿಸಿದ್ದಾರೆ. ಮುಂದಿನ ವಾರದ ಅತಿಥಿಯಾಗಿ ಹಿರಿಯ ಸಂಗೀತ ಕಲಾವಿದರಾದ ಶ್ರಿ ಗೋಪಾಲಕೃಷ್ಣ ಅಯ್ಯರ್ ಭಾಗವಹಿಸಲಿದ್ದಾರೆ.