ಮಂಗಳೂರು ,ಅ.01: ಮಂಗಳೂರು ಕರ್ನಾಟಕ ಕರಾವಳಿ ಜಿಲ್ಲೆಗಳ ಸುಪ್ರಸಿದ್ಧವಾದ ಉತ್ಸವ ಮಂಗಳೂರು ರಥಬೀದಿಯ ಶ್ರೀ ವೆಂಕಟ್ರಮಣ ದೇವಸ್ಥಾನದ ಆಚಾರ್ಯ ಮಠ ವಠಾರದಲ್ಲಿ ಜರುಗುವ ಸಾರ್ವಜನಿಕ ಶ್ರೀ ಶಾರದಾ ಮಹೋತ್ಸವ. ಶಾರದಾ ಮಾತೆಯ ಈ ಭವ್ಯ ಉತ್ಸವಕ್ಕೆ 92ನೇ ವರ್ಷದ ಸಂಭ್ರಮ.
ಈ ಬಾರಿ 30-09-2014ರಂದು ಆರಂಭವಾಗಿದ್ದು ಶಾರದಾ ಮಹೋತ್ಸವವು ಭಗವದ್ಭಕ್ತ ಸಮೂಹದಿಂದ ಶಾಸ್ತ್ರವಿಹಿತ, ರೀತಿ ಸಂಪ್ರದಾಯಗಳೊಂದಿಗೆ ತಾರೀಕು 5-10-2014ರ ವರೆಗೆ ಆಚರಿಸಲಾಗುತ್ತದೆ.
ಈ ಪ್ರಯುಕ್ತ ಶ್ರೀ ಮಾತೆಯ ಭವ್ಯ ವಿಗ್ರಹದ ಮೆರವಣಿಗೆಯು ಸೋಮವಾರದಂದು ನಡೆಯಿತು. ಸಾರ್ವಜನಿಕ ಶಾರದಾ ಮಹೋತ್ಸವಗಳ ಪೈಕಿ ಶ್ರೀ ವೆಂಕಟ್ರಮಣ ದೇವಳದ ವಠಾರದಲ್ಲಿ ನಡೆಯುವ ಶ್ರೀ ಶಾರದಾ ಮಹೋತ್ಸವ ಪ್ರಮುಖವಾಗಿದೆ. ನಾಡಹಬ್ಬವೆಂದು ಪ್ರತೀತಿ ಇದ್ದಂತೆ ಎಲ್ಲ ಶಾರದೋತ್ಸವಗಳಿಗೂ ಮಂಗಳೂರು ಶ್ರೀ ಶಾರದಾ ಮಹೋತ್ಸವ ಪ್ರೇರಣಾಶಕ್ತಿ.
ನವರಾತ್ರಿಯ ಪರ್ವಕಾಲದಲ್ಲಿ ಬರುವ ಮೂಲ ನಕ್ಷತ್ರದ ದಿನದಂದು ಶ್ರೀ ಮಾತೆಯ ವಿಗ್ರಹವನ್ನು ಪ್ರತಿಷ್ಠೆ ಮಾಡಲಾಗುತ್ತದೆ. ಇದೇ ಬರುವ ಶ್ರವಣ ನಕ್ಷತ್ರದ ಅಂತ್ಯದಲ್ಲಿ ವಿಸರ್ಜನೆಯ ವೈದಿಕ ವಿಧಿವಿಧಾನಗಳೊಂದಿಗೆ ಸಂಪೂರ್ಣಗೊಳ್ಳುತ್ತದೆ. ಪ್ರತೀ ದಿನವೂ ಆ ದಿನದ ಸಂದರ್ಭ ಹಾಗೂ ಶಾಸ್ತ್ರಕ್ಕನುಗುಣವಾಗಿ ಶ್ರೀ ಮಾತೆಯ ವಿಗ್ರಹಕ್ಕೆ ಮಹಾಲಕ್ಷ್ಮಿ, ಸ್ಕಂದಮಾತಾ, ದುರ್ಗಾ, ಮಹಾಕಾಳಿ ಹೀಗೆ ಬೇರೆ ಬೇರೆ ರೂಪಗಳನ್ನು ಅದೇ ವಿಗ್ರಹಕ್ಕೆ ನೀಡಿ ಅಲಂಕರಿಸಲಾಗುತ್ತದೆ.
ದಿನನಿತ್ಯ ಶ್ರೀ ದೇವಿಯ ವಿಗ್ರಹಕ್ಕೆ ವಿಶೇಷ ಅಲಂಕಾರ ಪೂಜೆ, ಕುಂಕುಮಾರ್ಚನೆ, ರಾತ್ರಿ ರಂಗಪೂಜೆ ಇಲ್ಲಿ ನಡೆಯುವುದು ವಿಶೇಷ.
ವಿಶೇಷ ಶೋಭಾಯಾತ್ರೆ ಅಕ್ಟೋಬರ್ 5ರಂದು ಅಬಾಲ ವೃದ್ಧರು, ಸ್ತ್ರೀ-ಪುರುಷರು ಈ ಶೋಭಾಯಾತ್ರೆಯಲ್ಲಿ ಪಾಲ್ಗೊಂಡು ಉತ್ಸಾಹಿ ತರುಣರಿಂದ ಶ್ರೀದೇವಿಯ ವಿಗ್ರಹ ವಿಸರ್ಜನೆ ಸಂದರ್ಭದಲ್ಲಿ ದಾರಿಯುದ್ದಕ್ಕೂ ಭುಜ ಸೇವೆಯ ಮೂಲಕ ಸಾಗುವ ಶೋಭಾಯಾತ್ರೆ ಇದಾಗಿದ್ದು, ಈ ಭವ್ಯ ಶೋಭಾಯಾತ್ರೆ ಹಾಗೂ ಶಾರದಾ ಮಾತೆಯನ್ನು ನೋಡಲು ಸಹಸ್ರಾರು ಜನರು ದೇಶ ವಿದೇಶಗಳಿಂದ ಬಂದು ಪಾಲ್ಗೊಂಡು ಕೃತಾರ್ಥರಾಗುತ್ತಾರೆ.
ಶ್ರೀ ದೇವಿಯ ಸನ್ನಿಧಿಯಲ್ಲಿ ವಿವಿಧ ಧಾರ್ಮಿಕ, ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯಲಿದೆ ಹಾಗೂ ಸಾರ್ವಜನಿಕ ಅನ್ನಸಂತರ್ಪಣೆ ಕೂಡ ನೆರವೇರಲಿದೆ.
ಚಿತ್ರ : ಮಂಜು ನೀರೆಶ್ವಾಲ್ಲ್ಯ



