ಮಂಗಳೂರು, ಸೆ.27: ನನಗೆ ತುಳು ಕಾರ್ಯಕ್ರಮವನ್ನು ಸಂಯೋಜಿಸಲು ಸ್ಪೂರ್ತಿ ನೀಡಿದ ಸಂಸ್ಥೆ ತುಳು ಕೂಟ. ನನ್ನ ಪೂರ್ವಾಶ್ರಮದಲ್ಲಿ ಮಂಗಳೂರಿನ ತುಳು ಕೂಟದ ಎಸ್.ಆರ್.ಹೆಗ್ಡೆ ಅವರ ಕಚೇರಿಗೆ ಹೋಗುತ್ತಿದೆ.ಅಲ್ಲಿ ತುಳು ಕೂಟ ಪತ್ರಿಕೆಯನ್ನು ಓದುತ್ತಿದ್ದೆ.ಆಗಲೇ ನನಗೆ ತುಳುವಿನ ಬಗ್ಗೆ ಅಭಿಮಾನ ಮೂಡಿತು. ತುಳು ಭಾಷೆ, ಸಂಸ್ಕೃತಿಗೆ ತುಳು ಕೂಟದ ಕೊಡುಗೆ ಅನನ್ಯ ಎಂದು ಒಡಿಯೂರು ಶ್ರೀ ಶ್ರೀ ಗುರುದೇವಾನಂದ ಸ್ವಾಮಿಜಿಯವರು ನುಡಿದರು. ಅವರು ಕ್ಷೇತ್ರಕ್ಕೆ ಭೇಟಿ ನೀಡಿದ ವಿಶ್ವ ತುಳುವೆರೆ ಪರ್ಬ ಸಮಿತಿ ಸದಸ್ಯರಿಗೆ ಶುಭಾಶೀರ್ವಾದ ಮಾಡಿದರು.
ಅಖಿಲ ಭಾರತ ತುಳು ಒಕ್ಕೂಟದ ಬೆಳ್ಳಿ ಹಬ್ಬದ ಪ್ರಯುಕ್ತ ಕರ್ನಾಟಕ ತುಳು ಸಾಹಿತ್ಯ ಅಕಾಡಮಿಯ ಸಹಯೋಗದಲ್ಲಿ ಸಹ್ಯಾದ್ರಿ ಕಾಲೇಜಿನಲ್ಲಿ ಡಿಸೆಂಬರ್ 12,13,14 ರಂದು ನಡೆಯಲಿರುವ ತುಳುವರ ಮಹೋತ್ಸವದಲ್ಲಿ ಹಮ್ಮಿಕೊಳ್ಳಬೇಕಾದ ಸಾಂಸ್ಕ್ರತಿಕ , ಸಾಹಿತ್ಯಕ , ಕ್ರೀಡಾ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ಪಡೆದ ಸ್ವಾಮಿಜಿ ಸದಸ್ಯರಿಗೆ ಪೂರ್ಣಾಶೀರ್ವಾದ ನೀಡಿದರು.
ಒಡಿಯೂರಿನ ರಜತ ಸಂಭ್ರಮ ಕಾರ್ಯಕ್ರಮದಲ್ಲಿ ಬಲೇ ತುಳು ತೇರ್ ಒಯಿಪುಗ ಕಾರ್ಯಕ್ರಮದ ಮೂಲಕ ತುಳುವರಲ್ಲಿ ಸಂಚಲನ ಮೂಡಿಸಿದ ಶ್ರೀ ಕ್ಷೇತ್ರ ಒಡಿಯೂರಿನ ಶ್ರೀ ಗುರುದೇವಾನಂದ ಸ್ವಾಮೀಜಿಯವರು ಶ್ರೀ ಕ್ಷೇತ್ರದಲ್ಲಿ ನಿರಂತರ ತುಳು ಕಾರ್ಯಕ್ರಮಗಳನ್ನು ಸಂಯೋಜಿಸುತ್ತಿದ್ದಾರೆ.
ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಪೂಜ್ಯ ಡಾ| ಡಿ. ವೀರೇಂದ್ರ ಹೆಗ್ಗಡೆಯವರ ಪೂರ್ಣಾಶೀರ್ವಾದ ಹಾಗೂ ಮಾರ್ಗದರ್ಶನದಲ್ಲಿ, ನೇತ್ರಾವತಿ ನದಿ ತೀರದಲ್ಲಿರುವ ಮಂಜುನಾಥ ಭಂಡಾರಿಯವರ ಸಹ್ಯಾದ್ರಿ ಕಾಲೇಜಿನ ಆವರಣದಲ್ಲಿ ನಡೆಯಲಿರುವ ಈ ಕಾರ್ಯಕ್ರಮವು ಯಶಸನ್ನು ಕಾಣಲಿ ಎಂದು ಆಶಿರ್ವದಿಸಿದರು.
ವಿಶ್ವ ತುಳು ಪರ್ಬ ಸಮಿತಿಯ ಹಾಗು ತುಳು ಒಕ್ಕೂಟ ಅಧ್ಯಕ್ಷರು ಶ್ರೀ ಧರ್ಮಪಾಲ ಯು. ದೇವಾಡಿಗ ಅವರನ್ನು ಕ್ಷೇತ್ರದ ವತಿಯಿಂದ ಗೌರವಿಸಲಾಯಿತು.
ಸಮಿತಿಯ ಸಂಯೋಜಕ ಎ.ಸಿ. ಭಂಡಾರಿ, ಪ್ರಧಾನ ಕಾರ್ಯದರ್ಶಿ ನಿಟ್ಟೆ ಶಶಿಧರ ಶೆಟ್ಟಿ, ಪ್ರಧಾನ ಸಂಚಾಲಕರು ಕದ್ರಿ ನವನೀತ ಶೆಟ್ಟಿ, ಸಂಚಾಲಕ ಲೀಲಾಕ್ಷ ಕರ್ಕೇರ, ಸಹ ಸಂಚಾಲಕ ಚಂದ್ರಶೇಖರ ಸುವರ್ಣ ಹಾಗು ಪಿ.ಎ ಪೂಜಾರಿ, ಹರೀಶ್ ನೀರುಮಾರ್ಗ ಉಪಸ್ಥಿತರಿದ್ದರು.