ಉಡುಪಿ: ಇಲ್ಲಿನ ಕಾರ್ಕಳ ಸಮೀಪದ ಮಹಾವಿಷ್ಣು ದೇವಸ್ಥಾನಕ್ಕೆ ಅಂತಾರಾಷ್ಟ್ರೀಯ ವೀಕ್ಷಕ ವಿವರಣೆಕಾರ -ಮಾಜಿ ಕ್ರಿಕೆಟಿಗ, ಬಿಸಿಸಿಐ ನಿರ್ದೇಶಕ ರವಿಶಾಸ್ತ್ರಿ ಭೇಟಿ ನೀಡಿದರು. ದೇವಸ್ಥಾನಕ್ಕೆ ಆಗಮಿಸಿದ ಅವರು ದೇವರಿಗೆ ವಿಶೇಷ ಸೇವೆ ನೀಡಿ ನಾಗಬನದಲ್ಲಿ ತಂಬಿಲ ಸೇವೆ ನೀಡಿದರು. ಶಾಸ್ತ್ರಿ ಕಳೆದ ಏಳು ವರ್ಷಗಳಿಂದ ಈ ಕ್ಷೇತ್ರಕ್ಕೆ ಭೇಟಿ ನೀಡಿ ಸಂತಾನ ಭಾಗ್ಯ ಪಡೆದಿರೋದು ವಿಶೇಷ.
ವಿಶ್ವದ ನಂಬರ್ ವನ್ ವೀಕ್ಷಕ ವಿವರಣೆಕಾರ- ಬಿಸಿಸಿಐ ನಿರ್ದೇಶಕ ರವಿಶಾಸ್ತ್ರಿಗೂ ನಾಗಬ್ರಹ್ಮನಿಗೂ ಭಾರೀ ಸಂಬಂಧವಿದೆ. ಅವರ ವೃತ್ತಿ ಜೀವನಕ್ಕೆ ಕ್ರಿಕೆಟ್ ಕೈ ಹಿಡಿದ್ರೆ ಸಾಂಸಾರಿಕಾ ಜೀವನದ ಕೈ ಹಿಡಿದದ್ದು ದೇವರ ಮೇಲಿನ ನಂಬಿಕೆ. ಮದುವೆಯಾಗಿ ೧೭ ವರ್ಷ ಸಂತಾನ ಭಾಗ್ಯ ಇಲ್ಲದೇ ಇದ್ದಾಗ ರವಿಶಾಸ್ತ್ರಿ ಎರ್ಲಪ್ಪಾಡಿ ಕ್ಷೇತ್ರಕ್ಕೆ ಭೇಟಿಕೊಟ್ಟು ಹರಕೆ ಹೊತ್ತಿದ್ದರು. ನಂತರ ರವಿ ಕುಟುಂಬದ ಸಂತಾನಭಾಗ್ಯ ದಕ್ಕಿತು.
ರವಿಶಾಸ್ತ್ರಿ ಪೂರ್ವಿಕರು ಕಾರ್ಕಳ ತಾಲೂಕಿನ ಎರ್ಲಪ್ಪಾಡಿಯಲ್ಲಿ ನೆಲೆಸಿದ್ದರು. ಇಲ್ಲಿನ ಕಾರಣಿಕ ತಿಳಿದ ನಂತರ ಶಾಸ್ತ್ರಿ ವರ್ಷಕ್ಕೊಮ್ಮೆಯಾದ್ರೂ ಇಲ್ಲಿಗೆ ಭೇಟಿ ಕೊಡುವ ಪರಿಪಾಠ ಬೆಳೆಸಿದ್ದಾರೆ. ವೇಳೆ ಮಾತನಾಡಿದ ಶಾಸ್ತ್ರಿ, ವಿಷ್ಟುಮೂರ್ತಿ ದೇವಸ್ಥಾನ ಮತ್ತು ನಾಗಬನದಲ್ಲಿ ತಾನು ಮನಶಾಂತಿ ಪಡೆಯುತ್ತೇನೆ. ಎಲ್ಲಾ ಟೆನ್ಶನ್ ಮರೆತು ಮನಸ್ಸಿಗೆ ನೆಮ್ಮದಿ ಪಡೆದುಕೊಳ್ಳುತ್ತೇನೆ ಎಂದರು. ಭಾರತ ತಂಡ ೨೪ ವರ್ಷಗಳ ಬಳಿಕ ಇಂಗ್ಲೆಂಡ್ ನೆಲದಲ್ಲಿ ಉತ್ತಮ ಪ್ರದರ್ಶನ ನೀಡಿತು. ಕೋಹ್ಲಿ ಫಾರ್ಮ್ ಪಡೆದು ಮತ್ತೆ ಪುಟಿದೇಳುತ್ತಾರೆ. ಅವರಲ್ಲಿ ಸಾಕಷ್ಟು ಕ್ರಿಕೆಟ್ ಬಾಕಿಯಿದೆ. ಆಟಗಾರರಿಗೆ ಏಳುಬೀಳು ಸಹಜ ಎಂದರು.
ರವಿಶಾಸ್ತ್ರಿ ಕರ್ವಾಲು ದೇವಸ್ಥಾನಕ್ಕೆ ಆಗಮಿಸುವುದೆಂದರೆ ಗ್ರಾಮಸ್ಥರಿಗೆ ಹಬ್ಬವಿದ್ದಂತೆ. ರವಿಶಾಸ್ತ್ರಿ ಬಂದ್ರೆ ದೇವಸ್ಥಾನದಲ್ಲಿ ಹಬ್ಬದೂಟ ಏರ್ಪಾಟಾಗುತ್ತದೆ. ಶಾಸ್ತ್ರಿ ಸಾಮಾನ್ಯ ಜನರಂತೆ ಸಹಭೋಜನದಲ್ಲಿ ಪಾಲ್ಗೊಂಡರು. ರವಿಶಾಸ್ತ್ರಿಯನ್ನು ಜನ ಸನ್ಮಾನಿಸಿದರು. ಶಾಸ್ತ್ರಿಗೂ ಈ ಊರಿನ ಜೊತೆ ಅವಿನಾಭಾವ ಸಂಬಂಧವಿದೆ. ಶಾಲೆಗೆ- ದೇವಸ್ಥಾನಕ್ಕೆ ಆರ್ಥಿಕ ಸಹಾಯ ಮಾಡಿದ್ದಾರೆ.
ಕೊಲ್ಲೂರಿಗೆ ಭೇಟಿ: ಮಂಗಳವಾರ ಸಂಜೆ ವೇಳೆಗೆ ರವಿಶಾಸ್ತ್ರೀ ಕೊಲ್ಲೂರಿನ ಶ್ರೀ ಮೂಕಾಂಬಿಕಾ ದೇವಳಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ದೇವಳದ ವತಿಯಿಂದ ರವಿಶಾಸ್ತ್ರಿ ಅವರನ್ನು ಸ್ವಾಗತಿಸಿ ಗೌರವಿಸಲಾಯಿತು.