ಕುಂದಾಪುರ: ಪಿಎಸ್ಎಲ್ವಿಯಿಂದ ಬುಧವಾರ ಬೆಳಿಗ್ಗೆ ಉಡ್ಡಯನಗೊಳ್ಳಲಿರುವ ಮಂಗಳ ಬಾಹ್ಯಾಕಾಶ ನೌಕೆಯು ಯಶಸ್ವಿಯಾಗಿ ಮಂಗಳ ಗ್ರಹ ಕಕ್ಷೆ ಸೇರಲೆಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸದಸ್ಯರು ಮಂಗಳವಾರ ಗಂಗೊಳ್ಳಿಯಲ್ಲಿ ವಿಶೇಷ ಪೂಜೆ ಪುನಸ್ಕಾರಗಳನ್ನು ಸಲ್ಲಿಸಲಾಯಿತು.
ಗಂಗೊಳ್ಳಿಯ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಧರ್ಮಸ್ಥಳ ಪ್ರಗತಿಬಂಧು ಸ್ವಸಹಾಯ ಸಂಘಗಳ ಮೇಲ್ಗಂಗೊಳ್ಳಿ ಮತ್ತು ಪಂಚಗಂಗಾವಳಿ ಒಕ್ಕೂಟದ ವತಿಯಿಂದ ಗಂಗೊಳ್ಳಿಯ ಶ್ರೀ ವೀರೇಶ್ವರ ದೇವಸ್ಥಾನದಲ್ಲಿ ದೇವಳದ ಪ್ರಧಾನ ಅರ್ಚಕ ವೇದಮೂರ್ತಿ ವೀರೇಶ ಭಟ್ ನೇತೃತ್ವದಲ್ಲಿ ಈ ಬಗ್ಗೆ ವಿಶೇಷ ಪೂಜೆ ಸಲ್ಲಿಸಿದ ಸಂಘದ ಸದಸ್ಯರು ಹಾಗೂ ಗ್ರಾಮಸ್ಥರು, ಮಂಗಳ ಬಾಹ್ಯಾಕಾಶ ನೌಕೆಯು ಯಶಸ್ವಿಯಾಗಿ ಮಂಗಳ ಗ್ರಹ ಕಕ್ಷೆ ಸೇರಬೇಕೆಂದು ಹಾಗೂ ಇಸ್ರೋ ಸಂಸ್ಥೆಯಲ್ಲಿ ದುಡಿದ ಎಲ್ಲಾ ಸಿಬ್ಬಂದಿಗಳ ಶ್ರೇಯೋಭಿವೃದ್ಧಿಗಾಗಿ ಪ್ರಾರ್ಥನೆ ಸಲ್ಲಿಸಿದರು.
ಮಾಜಿ ಮಂಡಲ ಪ್ರಧಾನ ಬಿ.ಸದಾನಂದ ಶೆಣೈ, ಮೇಲ್ಗಂಗೊಳ್ಳಿ ಒಕ್ಕೂಟದ ಅಧ್ಯಕ್ಷ ಬಿ.ನಾಗರಾಜ ಖಾರ್ವಿ, ಪಂಚಗಂಗಾವಳಿ ಒಕ್ಕೂಟದ ಅಧ್ಯಕ್ಷ ಇಂದಿರಾ ಪೂಜಾರಿ, ಪ್ರಗತಿಬಂಧು ಸ್ವಸಹಾಯ ಸಂಘಗಳ ತ್ರಾಸಿ ವಲಯಾಧ್ಯಕ್ಷ ಕೃಷ್ಣ ಪೂಜಾರಿ, ಪತ್ರಕರ್ತ ಬಿ.ರಾಘವೇಂದ್ರ ಪೈ, ಉಪಾಧ್ಯಕ್ಷ ಕೃಷ್ಣ ಬಾವಿಕಟ್ಟೆ, ಕೋಶಾಧಿಕಾರಿ ವಿವೇಕ, ಹಿಂದು ಜಾಗರಣ ವೇದಿಕೆಯ ಸತೀಶ್ ಜಿ., ಶ್ರೀಕುಮಾರ್ ಮೊದಲಾದವರು ಉಪಸ್ಥಿತರಿದ್ದರು.