ಮಂಗಳೂರು: ಪುತ್ತೂರು ನಗರ, ಗ್ರಾಮಾಂತರ ಪೊಲೀಸರು ನಡೆಸಿದ ವಿಶೇಷ ಕಾರ್ಯಚರಣೆಯೊಂದರಲ್ಲಿ ಮನೆ ಮನೆಗಳಿಗೆ ನುಗ್ಗಿ ಕಳತನ ಮಾಡುತ್ತಿದ್ದ ತಂಡವೊಂದನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮನೆಗಳಿಗ್ಗೆ ಕನ್ನ ಹಾಕುತ್ತಿದ್ದ ಇಬ್ಬರನ್ನು ಬಂಧಿಸಿ 8.50 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ.
ಕಾಸರಗೋಡು ಚಟ್ಟಂಚಾಲ್ ಸಮೀಪದ ನಿವಾಸಿ ಕಬೀರ್ ಯಾನೆ ಪಿ. ಎ. ಅಹಮ್ಮದ್ ಕಬೀರ್ (23) ಹಾಗೂ ಕಾಸರಗೋಡು ಮಾಂಗಾಡ್ನ ಸಾಜುದ್ದೀನ್ ಯಾನೆ ಫಾರೂಕ್ (30) ಎಂಬವರನ್ನು ಬಂಧಿಸುವ ಮೂಲಕ ಮನೆಗಳ್ಳತನದ ಬಹುದೊಡ್ಡ ಪ್ರಕರಣವನ್ನು ಭೇದಿಸಿದ್ದಾರೆ ಎಂದು ದ. ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಶರಣಪ್ಪ ತಿಳಿಸಿದ್ದಾರೆ.
ಮಂಗಳವಾರ ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸೆ. 23ರಂದು ಬೆಳಿಗ್ಗೆ ಸುಮಾರು 5.30ರ ವೇಳೆಗೆ ಪುತ್ತೂರು ಆರ್ಲಪದವಿನಲ್ಲಿ ಪೊಲೀಸರು ಮಾಹಿತಿ ಆಧರಿಸಿ ವಾಹನ ತಪಾಸಣೆ ನಡೆಸುತ್ತಿದ್ದಾಗ ಕೇರಳದ ಸ್ವರ್ಗ ಕಡೆಯಿಂದ ಆರ್ಲಪದವು ಕಡೆಗೆ ಬೈಕಿನಲ್ಲಿ ಬಂದ ಇಬ್ಬರನ್ನು ವಿಚಾರಿಸಲು ನಿಲ್ಲಿಸಲು ಹೇಳಿದಾಗ ಅವರು ಸಮವಸ್ತ್ರದಲ್ಲಿದ್ದ ಪೊಲೀಸರನ್ನು ಕಂಡು ಪರಾರಿಯಾಗಲು ಯತ್ನಿಸಿದರು. ಈ ಸಂದರ್ಭದಲ್ಲಿ ಅವರನ್ನು ಬೆನ್ನಟ್ಟಿ ಹಿಡಿದು ವಿಚಾರಿಸಿದಾಗ ಕಳ್ಳತನ ಪ್ರಕರಣ ಬೆಳಕಿಗೆ ಬಂದಿದೆ ಎಂದು ಅವರು ತಿಳಿಸಿದರು.
ಆರೋಪಿಗಳು ಪುತ್ತೂರು ನಗರ ಠಾಣೆಯಲ್ಲಿ 4, ಗ್ರಾಮಾಂತರ ಠಾಣೆಯಲ್ಲಿ 3 ಹಾಗೂ ಸುಳೈ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ 2 ಪ್ರಕರಣಗಳು ಸೇರಿದಂತೆ ಹಗಲು ಮತ್ತು ರಾತ್ರಿ ನಡೆದ ಒಟ್ಟು 9 ಕಳವು ಪ್ರಕರಣಗಳಲ್ಲಿ ಭಾಗಿಯಾಗಿದ್ದು, 304 ಗ್ರಾಂ. ತೂಕದ 8.50 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ಒಂದು ಬೈಕ್ ಸೇರಿದಂತೆ ಒಟ್ಟು 9 ಲಕ್ಷ ಮೌಲ್ಯದ ಸೊತ್ತುಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.
ಬಂಧಿತ ಆರೋಪಿಗಳು ಮಂಗಳೂರಿನ ಕದ್ರಿ, ಕಾಸರಗೋಡು, ಬದಿಯಡ್ಕ, ಬೇಕಲದಲ್ಲಿ ನಡೆದ ಮನೆ ಕಳವು ಪ್ರಕರಣಗಳಲ್ಲೂ ಭಾಗಿಯಾಗಿದ್ದು, ಆರೋಪಿ ಕಬೀರ್ ಶ್ರೀ ಗಂಧ ಸಾಗಾಟ ಪ್ರಕರಣದಲ್ಲೂ ಆರೋಪಿಯಾಗಿದ್ದಾರೆ ಎಂದು ಅವರು ವಿವರಿಸಿದರು.
ಈ ವಿಶೇಷ ಕಾರ್ಯಾಚರಣೆಯಲ್ಲಿ ಪುತ್ತೂರು ನಗರ ಠಾಣೆಯ ಪೊಲೀಸ್ ನಿರೀಕ್ಷಕ ಬಿ. ಕೆ. ಮಂಜಯ್ಯ ನೇತೃತ್ವದಲ್ಲಿ ಗ್ರಾಮಾಂತರ ಠಾಣಾ ಪೊಲೀಸ್ ಉಪ ನಿರೀಕ್ಷಕ ಅಬ್ದುಲ್ ಖಾದರ್ ಮತ್ತು ಸಿಬ್ಬಂದಿಗಳಾದ ಸಹಾಯಕ ಪೊಲೀಸ್ ಉಪ ನಿರೀಕ್ಷಕರಾದ ರಾಮ ನಾಯ್ಕ್, ಪೊಲೀಸ್ ಕಾನ್ಸ್ಸ್ಟೇಬಲ್ಗಳಾದ ಭಾಸ್ಕರ ಅಡ್ಯಾರ್, ಜಯರಾಮ, ಪ್ರಶಾಂತ್, ಸುಜು, ಸಂತೋಷ್, ಶಿವರಾಮ, ಮಮತಾ, ದಿವ್ಯ, ದಾಮೋದರ, ಕೃಷ್ಣಪ್ಪ, ನಾರಾಯಣ, ಮೋಹನ, ಲಕ್ಷ್ಮೀನಾರಾಯಣ, ಸಂಗಪ್ಪ, ರಾಧಕೃಷ್ಣ, ಉದಯ ಕುಮಾರ್, ಧನೇಶ್, ಚಾಲಕರಾದ ದಯಾನಂದ ಡಿ., ಲಿಂಗಪ್ಪ ಗೌಡ, ಮಂಜುನಾಥ, ಪ್ರಶಾಂತ್, ದಿವಾಕರ ಮುಂತಾದವರು ಪಾಲ್ಗೊಂಡಿದ್ದರು ಎಂದು ಎಸ್ಪಿಯವರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಟಿ. ಪಿ. ಶಿವಕುಮಾರ್, ಪುತ್ತೂರು ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕ ಹೆಚ್. ಡಿ. ಮೆಂಡೋನ್ಸಾ ಉಪಸ್ಥಿತರಿದ್ದರು.