ಮಂಗಳೂರು: ವಿದ್ಯಾರ್ಥಿಯೊಬ್ಬನಿಗೆ ಶಿಕ್ಷಕರು ಅವಾಚ್ಯ ಶಬ್ದಗಳಿಂದ ನಿಂದಿಸಿದ ಆರೋಪದಿಂದ ಕೆರಳಿದ ಕಾಲೇಜಿನ ಇತರ ವಿದ್ಯಾರ್ಥಿಗಳು ದಿಢೀರ್ ಪ್ರತಿಭಟನೆ ನಡೆಸಿದ ಘಟನೆ ಮಂಗಳವಾರ ನಗರದ ಕೆನರಾ ಪಿಯು ಕಾಲೇಜಿನಲ್ಲಿ ನಡೆಯಿತು.
ಕೆನಾರ ಪಿಯು ಕಾಲೇಜಿನ ಈ ವಿದ್ಯಾರ್ಥಿ ಎಬಿವಿಪಿ ಸಂಘಟನೆಯ ಪದಾಧಿಕಾರಿಯಾಗಿದ್ದು, ಈತನನ್ನು ಶಿಕ್ಷಕರು ಸಾರ್ವಜನಿಕವಾಗಿ ನಿಂದನೆ ಮಾಡುವ ಮೂಲಕ ಅವಮಾನಿಸಿರುವುದರಿಂದ ಆಕ್ರೋಷಗೊಂಡ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದಾರೆ. ಕೂಡಲೇ ಸ್ಥಳಕ್ಕಾಗಮಿಸಿದ ಪೊಲೀಸರು ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ಕ್ರಮಕೈಗೊಂಡರು.
ಈ ಬಗ್ಗೆ ನಗರದ ಬಂದರು ಠಾಣೆಯಲ್ಲಿ ವಿದ್ಯಾರ್ಥಿಗಳು ದೂರು ದಾಖಲಿಸಿದ್ದಾರೆ ಎಂದು ತಿಳಿದು ಬಂದಿದೆ. ಪ್ರಕರಣದ ಕುರಿತ ಹೆಚ್ಚಿನ ಮಾಹಿತಿ ತಕ್ಷಣಕ್ಕೆ ಲಭ್ಯವಾಗಿಲ್ಲ.