ಮಂಗಳೂರು, ಸೆ.20: ಮಂಗಳೂರು ಪಂಪ್ವೆಲ್ನ ಫಯರ್ ಆಂಡ್ ಸೇಫ್ಟಿ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳ ಮೇಲೆ ಭಜರಂಗ ದಳದ ಸುಮಾರು 20ಕ್ಕೂ ಅಧಿಕ ಗೂಂಡಾಗಳು ನಿನ್ನೆ ನಡೆಸಿದ ದಾಳಿಯನ್ನು ಖಂಡಿಸಿ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ, ಮಂಗಳೂರು ವಲಯ ಸಮಿತಿಯ ವತಿಯಿಂದ ಇಂದು ಮಧ್ಯಾಹ್ನ 2.00 ಗಂಟೆಗೆ ಪಂಪ್ವೆಲ್ ಬಳಿ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು.
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ರಾಜ್ಯ ಸಮಿತಿ ಸದಸ್ಯ ಮಹಮ್ಮದ್ ತುಫೈಲ್ರವರು ಜಿಲ್ಲೆಯಲ್ಲಿ ಗೂಂಡಾಗಿರಿ ಪ್ರವೃತ್ತಿಗಳು ಅಧಿಕವಾಗುತ್ತಿದ್ದು, ಪಂಪವೆಲ್ ಘಟನೆಯು ಇದರ ಪುನರಾವರ್ತನೆಯಾಗಿದೆ. ಧರ್ಮದ ಆಧಾರದಲ್ಲಿ ಇಲ್ಲಿ ವಿದ್ಯಾರ್ಥಿಗಳನ್ನು ಭಜರಂಗದಳದಂತಹ ಮತೀಯ ಸಂಘಟನೆಗಳು ವಿಭಜಿಸುತ್ತಿದ್ದು ಒಂದು ಕೋಮಿನ ವಿದ್ಯಾರ್ಥಿಗಳನ್ನು ಇನ್ನೊಂದು ಕೋಮಿನ ವಿದ್ಯಾರ್ಥಿಗಳನ್ನು ಎತ್ತಿಕಟ್ಟಲಾಗುತ್ತಿದೆ, ಇಂತಹವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದರು.
ನಂತರ ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದ ದ.ಕ ಜಿಲ್ಲಾ ಸಮಿತಿ ಸದಸ್ಯ ರಿಯಾಝ್ ಇವರು ಪಂಪ್ವೆಲ್ ಪರಿಸರದಲ್ಲಿ ನಿರಂತರವಾಗಿ ಗೂಂಡಾಗಿರಿಯ ಪ್ರವೃತ್ತಿಗಳು ಮರುಕಳಿಸುತ್ತಿದ್ದು ಇದಕ್ಕೆ ಇಲ್ಲಿರುವ ಕೆಲವು ದುಷ್ಟ ಶಕ್ತಿಗಳು ಪ್ರಚೋದನೆಯನ್ನು ನೀಡುತ್ತಿವೆ. ಪಂಪ್ವೆಲ್ ವಿದ್ಯಾರ್ಥಿಗಳ ಮೇಲೆ ದಾಳಿ ನಡೆಸಿದ ಎಲ್ಲಾ ಕಿಡಿಗೇಡಿಗಳನ್ನು ಬಂಧಿಸಿ ಅವರ ಮೇಲೆ ಗೂಂಡಾ ಕಾಯ್ದೆ ಹಾಕಬೇಕು ಎಂದು ಆಗ್ರಹಿಸಿದರು.