ಮಂಗಳೂರು, ಸೆ.15: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಶನಿವಾರ ತಡರಾತ್ರಿ ಸ್ಫೋಟಕ ಸಾಮಗ್ರಿಗಳನ್ನು ಸಾಗಿಸುತ್ತಿದ್ದಾರೆ ಎಂಬ ಶಂಕೆಯು ಉಪ್ಪಳ ನಿವಾಸಿ ಅಬ್ದುಲ್ ಖಾದರ್ರ ಮೇಲೆ ಮೂಡಲು ಕಾರಣ ಆದ ಸಂಗತಿ ಮತ್ತು ಅದರಲ್ಲಾಗಿರುವ ಲೋಪಗಳ ಬಗ್ಗೆ ಸಮಗ್ರ ತನಿಖೆ ನಡೆಸಬೇಕಾಗಿದೆ. ಈ ಬಗ್ಗೆ ಕೇಂದ್ರ ಸರಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದು ಆರೋಗ್ಯ ಸಚಿವ ಯು.ಟಿ. ಖಾದರ್ ತಿಳಿಸಿದ್ದಾರೆ.
ಅಬ್ದುಲ್ ಖಾದರ್ ಬಳಿ ಅಪಾಯಕಾರಿ ಸಾಮಗ್ರಿಗಳು ಇರಲಿಲ್ಲ ಎಂಬುದು ಮೇಲ್ನೋಟಕ್ಕೆ ಕಾಣುವಂತಿದ್ದರೂ ಪೂರ್ವಾಪರ ಯೋಚಿಸದೆ ಸ್ಪೋಟಕ ಸಾಮಗ್ರಿಗಳು ಇವೆ ಎಂಬಂತೆ ಮಾಧ್ಯಮಗಳಲ್ಲಿ ಬಿಂಬಿತವಾಗುವಂತೆ ಮಾಡಿದ್ದು ಯಾರು?. ಇದರಲ್ಲಿ ಲೋಪ ಯಾರಿಂದ ಆಗಿದೆ? ಎಂಬುದು ಸಂತ್ರಸ್ತರು ಮತ್ತು ಜನರು ತಿಳಿಯ ಬಯಸಿದ್ದಾರೆ. ಇಂತಹ ಘಟನೆಗಳು ಮರುಕಳಿಸದಂತಾಗಬೇಕಿದ್ದರೆ ಸೂಕ್ತ ರೀತಿಯಲ್ಲಿ ತನಿಖೆಯಾಗಬೇಕಾಗಿದೆ. ಜೆಟ್ಏರ್ವೇಸ್ ವಿಮಾನದ ಸಿಬ್ಬಂದಿಯ ನಿರ್ಲಕ್ಷ್ಯವೂ ಇದರಲ್ಲಿ ಎದ್ದು ಕಾಣುತ್ತಿದೆ. ಸುರಕ್ಷಾ ಸಿಬ್ಬಂದಿಯೂ ಆತುರತೆ ತೋರಿದಂತೆ ಕಾಣುತ್ತಿದೆ ಎಂದು ಸಚಿವ ಯು.ಟಿ. ಖಾದರ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.