ಕರಾವಳಿ

ಕ್ಷುಲ್ಲಕ ವಿಚಾರ: ಬಂಟ್ವಾಳದ ನಾಲ್ವರು ಪ್ರವಾಸಿಗರ ಮೇಲೆ ಹಲ್ಲೆ ಮಹಿಳೆಯರಿಗೆ ಬಿಸಿಎಣ್ಣೆ ಎರಚಿ, ಯುವಕನೊಬ್ಬನಿಗೆ ಕತ್ತಿಯಿಂದ ಕಡಿದ ಹೊಟೇಲ್ ಸಿಬ್ಬಂದಿ

Pinterest LinkedIn Tumblr

ATTACK

ಹುಣಸೂರು, ಸೆ.15: ಪ್ರವಾಸ ಬಂದಿದ್ದ ದ.ಕ. ಜಿಲ್ಲೆಯ ಬಂಟ್ವಾಳ ತಾಲೂಕಿನ ಮೂವರು ಮಹಿಳೆಯರ ಮೇಲೆ ಕ್ಷುಲ್ಲಕ ವಿಚಾರಕ್ಕೆ ಸಂಬಂಧಿಸಿ ಹೊಟೇಲ್‌ನ ಅಡುಗೆ ಸಿಬ್ಬಂದಿಯೊಬ್ಬ ಬಿಸಿ ಎಣ್ಣೆ ಎರಚಿ, ಯುವಕನೊಬ್ಬನಿಗೆ ಕತ್ತಿಯಿಂದ ಕಡಿದು ಹಲ್ಲೆ ನಡೆಸಿದ ಘಟನೆ ಮಡಿಕೇರಿ ಹೆದ್ದಾರಿ ಬದಿಯಲ್ಲಿರುವ ಹೊಟೇಲೊಂದರಲ್ಲಿ ಸೋಮವಾರ ಬೆಳಗ್ಗೆ ನಡೆದಿದೆ.

ಘಟನೆಯಲ್ಲಿ ಬಲಗೈಯ ನರ ತುಂಡರಿಸಲ್ಪಟ್ಟ ಅನ್ಸಾರ್(24) ಎಂಬವರನ್ನು ಮೈಸೂರಿನ ಕೆ.ಆರ್.ಆಸ್ಪತ್ರೆಗೆ ದಾಖಲಿಸಲಾಗಿದೆ. ಬಿಸಿ ಎಣ್ಣೆ ಎರಚಲ್ಪಟ್ಟ ಪರಿಣಾಮ ಗಾಯಗೊಂಡಿರುವ ಮೂವರು ಮಹಿಳೆಯರನ್ನು ಪಟ್ಟಣದ ಆಸ್ಪತ್ರೆಗೆ ದಾಖಲಿಸಲಾಗಿದೆ.

ಘಟನೆ ವಿವರ: ಬಂಟ್ವಾಳ ತಾಲೂಕಿನ ನೇರಳಕಟ್ಟೆಯ ಕುಟುಂಬವೊಂದು ಮಡಿಕೇರಿ ಪ್ರವಾಸ ಮುಗಿಸಿ ಇಂದು ಮುಂಜಾವ ಹುಣಸೂರು ಕಡೆಗೆ ಬಸ್‌ನಲ್ಲಿ ತೆರಳುತ್ತಿತ್ತು. ದಾರಿ ಮಧ್ಯೆ ಯಶೋಧಪುರದ ಬಳಿ ‘ಹೊಟೇಲ್ ಅತಿಥಿ’ಯಲ್ಲಿ ಉಪಾಹಾರ ಸೇವಿಸಲೆಂದು ಇಳಿದಿದ್ದರು. ಈ ವೇಳೆ ತಿಂಡಿ ನೀಡದೆ ಸುಮಾರು ಮುಕ್ಕಾಲು ತಾಸು ಸತಾಯಿಸಿದ ಹೊಟೇಲ್ ಸಿಬ್ಬಂದಿ ಧೋರಣೆಯನ್ನು ಪ್ರವಾಸಿಗರು ಆಕ್ಷೇಪಿಸಿದರು. ಈ ವೇಳೆ ಮಾತಿನ ಚಕಮಕಿ ನಡೆದಾಗ ಹೊಟೇಲ್‌ನ ಅಡುಗೆ ಸಿಬ್ಬಂದಿಯೊಬ್ಬ ಮೂವರು ಮಹಿಳೆಯರ ಮೇಲೆ ಬಿಸಿಎಣ್ಣೆ ಎರಚಿದನಲ್ಲದೆ, ಅನ್ಸಾರ್ ಎಂಬವರ ಮೇಲೆ ಕತ್ತಿಯಿಂದ ಕಡಿದನೆನ್ನಲಾಗಿದೆ.

ಈ ಬಗ್ಗೆ ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Write A Comment