ಕರಾವಳಿ

ಮಾನವ ಕುಲದ ಉಳಿವಿಗೆ ಕಾಡಿನ ಉಳಿವು ಅಗತ್ಯ- ರಮಾನಾಥ ರೈ

Pinterest LinkedIn Tumblr

rai_innogratin_photo_1

ಬಂಟ್ವಾಳ: ಪರಿಸರ ರಕ್ಷಣೆ ಪ್ರತಿಯೊಬ್ಬರ ಹೊಣೆಗಾರಿಕೆಯಾಗಿದೆ. ವಿದ್ಯಾರ್ಥಿಗಳಿಗೆ ಬಾಲ್ಯದಲ್ಲೇ ಪರಿಸರದ ಮಹತ್ವ ತಿಳಿಸುವ ಮೂಲಕ ಅರಣ್ಯ, ಪರಿಸರ ಹಾಗೂ ವನ್ಯಜೀವಿ ಸಂರಕ್ಷಣೆಯ ಕಾಳಜಿ ಬೆಳೆಸಬೇಕಾಗಿದೆ. ಪ್ರಾಕೃತಿಕ ಸಮತೋಲನ ಸಹಿತ ಮುಂದಿನ ಮಾನವ ಸಂಕುಲ ನೆಮ್ಮದಿಯಿಂದ ಬದುಕುವಂತಾಗಲು ನಾವೇ ಇಂದೇ ಕಾಡನ್ನು ಉಳಿಸುವ ಸಂಕಲ್ಪ ತೊಡಬೇಕಾಗಿದೆ ಎಂದು ರಾಜ್ಯ ಅರಣ್ಯ, ಪರಿಸರ ಸಚಿವ ಬಿ. ರಮಾನಾಥ ರೈ ಹೇಳಿದರು.

ಸೋಮವಾರ ಸಿದ್ಧಕಟ್ಟೆ ಸಂತಪ್ಯಾಟ್ರಿಕ್ ಹಿ.ಪ್ರಾ.ಶಾಲೆಯ ಅಕ್ಷರ ದಾಸೋಹ ಅಡುಗೆ ಕೊಠಡಿ, ನೀರಿನ ಸರಬರಾಜು ವ್ಯವಸ್ಥೆ ಹಾಗೂ ವನಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಶುದ್ಧ ನೀರು, ಶುದ್ದ ಪರಿಸರ ಮತ್ತು ಶುದ್ಧ ಗಾಳಿ ದೊರೆತರೆ ಮಾತ್ರ ಮಾನವ ಬದುಕಲು ಸಾಧ್ಯ. ಇದರ ಮೂಲವಾದ ಕಾಡಿನ ಸಂರಕ್ಷಣೆ ಪವಿತ್ರ ಕಾರ್‍ಯವಾಗಬೇಕು ಎಂದರು.ಇದೇ ಸಂದರ್ಭ ಶಾಲೆಯ ಹಳೇ ವಿದ್ಯಾರ್ಥಿ, ರಾಷ್ಟ್ರಮಟ್ಟದ ಉತ್ತಮ ಶಿಕ್ಷಕ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಕೆದ್ದಳಿಕೆ ಹಿ.ಪ್ರಾ.ಶಾಲಾ ಮುಖ್ಯ ಶಿಕ್ಷಕ ರಮೇಶ್ ನಾಯಕ್ ರಾಯಿ ಅವರನ್ನು ಸಚಿವರು ಸನ್ಮಾನಿಸಿದರು.

ರಾಜ್ಯಕ್ಕೆ ಮಾದರಿಯಾಗಿ ಶಾಲೆಯನ್ನು ಮುನ್ನಡೆಸಿದ ರಮೇಶ್ ನಾಯಕ್ ಅವರಿಗೆ ರಾಷ್ಟ್ರಪ್ರಶಸ್ತಿ ದೊರೆತಿರುವುದು ನಮ್ಮ ಜಿಲ್ಲೆಗೆ ಗೌರವ ತಂದಿದೆ. ಅವರ ಸೇವಾ ದಕ್ಷತೆ ಶಿಕ್ಷಕ ವೃಂದಕ್ಕೆ ಮಾದರಿ ಆಗಿದೆ ಎಂದು ಸಚಿವರು ಹೇಳಿದರು.

ಕೆಥೋಲಿಕ್ ಶಿಕ್ಷಣ ಮಂಡಳಿ ಕಾರ್ಯದರ್ಶಿ ಫಾ| ಜೆರಾಲ್ಡ್ ಡಿಸೋಜ ಆಶೀರ್ವಚನ ನೀಡಿ ಶಾಲೆ ಎಂಬುವುದು ದೇಗುಲವಿದ್ದಂತೆ. ಮಕ್ಕಳ ಸೇವೆ ದೇವರ ಸೇವೆಯಂತೆ. ಶಾಲೆಗೆ ಎಲ್ಲರನ್ನೂ ಒಗ್ಗೂಡಿಸುವ ಶಕ್ತಿ ಇದ್ದು ಸಮಾಜದ ಅಭಿವೃದ್ದಿಯಲ್ಲು ಅದು ಪ್ರಮುಖ ಪಾತ್ರವಹಿಸುತ್ತದೆ. ಇಂತಹ ಸ್ಥಳಗಳಲ್ಲಿ ಎಲ್ಲರೂ ಭೇದ ಭಾವ ಮರೆತು ಸೇವೆ ಸಲ್ಲಿಸುವುದು ಶ್ಲಾಘನೀಯ ಅಂಶ ಎಂದರು.

ಬಂಟ್ವಾಳ ತಾ.ಪಂ. ಅಧ್ಯಕ್ಷ ಯಶವಂತ ಡಿ. ಅಧ್ಯಕ್ಷತೆ ವಹಿಸಿದ್ದರು. ಶಾಲಾ ಸಂಚಾಲಕ ಫಾ|ಆಂಟನಿ ಲಸ್ರಾದೊ, ಜಿ.ಪಂ.ಸದಸ್ಯೆ ನಳಿನಿ ಬಿ.ಶೆಟ್ಟಿ , ತಾ.ಪಂ.ಸದಸ್ಯೆ ರೇವತಿ ಆರ್. ಪೂಜಾರಿ, ಪಂಚಾಯತು ಅಧ್ಯಕ್ಷೆ ಸುಶೀಲ, ಕ್ಷೇತ್ರ ಶಿಕ್ಷಣಾಽಕಾರಿ ಶೇಷಶಯನ ಕಾರಿಂಜ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಶ್ರೀಕಾಂತ್, ಕೆರೆಬಳಿ ಕ್ಲಸ್ಟರ್ ಸಿ‌ಆರ್‌ಪಿ ಕುಮಾರ್ ಡಿ., ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಆಂಟನಿ ಡಿಸೋಜ, ಎಪಿ‌ಎಂಸಿ ಸದಸ್ಯ ರತ್ನಕುಮಾರ್ ಚೌಟ ಉಪಸ್ಥಿತರಿದ್ದರು.

ಶಾಲಾ ಮುಖ್ಯಶಿಕ್ಷಕಿ ರೀಟಾ ತಾವ್ರೊ ಸ್ವಾಗತಿಸಿದರು. ಸಿಸ್ಟರ್ ಲೀನಾ ವಂದಿಸಿದರು. ಶಿಕ್ಷಕಿ ಆಗ್ನೆಸ್ ಡಿಸೋಜ ಕಾರ್ಯಕ್ರಮ ನಿರೂಪಿಸಿದರು.

Write A Comment