ಮಂಗಳೂರು : ಶನಿವಾರ ತಡರಾತ್ರಿ ದುಬಾಯಿಗೆ ತೆರಳುತ್ತಿದ್ದ ವಿಮಾನದಲ್ಲಿ ಪ್ರಯಾಣಿಸಬೇಕಿದ್ದ ಕಾಸರಗೋಡು ಮೂಲದ ವ್ಯಕ್ತಿಯೊಬ್ಬರ ಬ್ಯಾಗಿನಲ್ಲಿ ಪತ್ತೆಯಾದ ವಸ್ತುಗಳು ಸ್ಪೋಟಕ ತಯಾರಿ ವಸ್ತುಗಳಾಗಿರದೆ, ಬರಿಯ ಎಲೆಕ್ಟ್ರಾನಿಕ್ ವಸ್ತುಗಳಾಗಿದ್ದುವು ಎಂಬ ಅಂಶ ಇದೀಗ ತನಿಖೆಯಿಂದ ಬೆಳಕಿಗೆ ಬಂದಿದೆ ಎಂದು ಖಚಿತ ಮೂಲಗಳಿಂದ ತಿಳಿದುಬಂದಿದೆ.
ಇದನ್ನು ರಿಪೇರಿ ಉದ್ದೇಶದಿಂದ ಗಲ್ಫ್ ಗೆ ಸಾಗಿಸಲಾಗುತ್ತಿತ್ತು ಎಂಬ ಮಾಹಿತಿಯೂ ಲಭ್ಯವಾಗಿದೆ.
ಅಬ್ದುಲ್ ಖಾದರ್ ಅವರ ಒಂದು ಟೇಪ್ ರೆಕಾರ್ಡರ್, ಅದಕ್ಕೆ ಜೋಡಿಸಿದ್ದ ಕೆಲವು ವಯರ್ಗಳು ಒಂದು ಬ್ಯಾಟರಿ ಮತ್ತು ಅಮೋನಿಯಂ ನೈಟ್ರೇಟ್ ವಸ್ತುಗಳು ವಿಮಾನ ನಿಲ್ದಾಣದಲ್ಲಿ ಕೇಂದ್ರೀಯ ಕೈಗಾರಿಕಾ ಭದ್ರತಾ ದಳದ ಸಿಬ್ಬಂದಿಗಳು ತಪಾಸಣೆ ನಡೆಸುತ್ತಿದ್ದ ಸಂದರ್ಭದಲ್ಲಿ ಸಿಕ್ಕಿದ್ದ ಕಾರಣ ಅವರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆಗೊಳಪಡಿಸಲಾಗಿತ್ತು.
ಖಾದರ್ ಅವರು ತಮ್ಮೊಂದಿಗೆ ಒಯ್ಯುತ್ತಿದ್ದ ವಸ್ತುಗಳು ಅವರ ನೆರಹೊರೆಯವರು ರಿಪೇರಿಗೆಂದು ನೀಡಿದ್ದ ವಸ್ತುಗಳಾಗಿದ್ದುವು ಎಂಬ ಅಂಶ ವಿಚಾರಣೆಯ ವೇಳೆ ಬೆಳಕಿಗೆ ಬಂದಿದೆ.
ಈ ಎಲೆಕ್ಟ್ರಾನಿಕ್ ವಸ್ತುಗಳು ವಾರಂಟಿ ಅಂಶಗಳ ಕಾರಣದಿಂದ ಇಲ್ಲಿ ದುರಸ್ತಿಯಾಗದೇ ಇದ್ದುದರಿಂದ ಅವರು ಇದನ್ನು ಖಾದರ್ ಅವರ ಬಳಿ ನೀಡಿದ್ದರು. ಈ ವಸ್ತುಗಳನ್ನು ಖಾದರ್ ಅವರಿಗೆ ನೀಡಿದ್ದವರು ಇವುಗಳನ್ನು ತಿಂಡಿ ಪೊಟ್ಟಣಗಳ ಜೊತೆ ಕಟ್ಟಿ ನೀಡಿದ್ದರು ಪ್ರಕರಣದ ಬಗ್ಗೆ ಹೆಚ್ಚಿನ ವಿವರಗಳು ಇನ್ನಷ್ಟೇ ಲಭ್ಯವಾಗಬೇಕಾಗಿದೆ.