ಅಂತರಾಷ್ಟ್ರೀಯ

ಪಾಕಿಸ್ತಾನಕ್ಕೆ ಅಪಾಯ ಕಾದಿದೆ; ನಾನಿಲ್ಲದಿದ್ದರೆ ನನ್ನವರಿಗೆ ಭಯವಿಲ್ಲ: ಮೌಲಾನಾ ಮಸೂದ್ ಅಜರ್

Pinterest LinkedIn Tumblr

maulana-masoodಇಸ್ಲಾಮಾಬಾದ್: ಜೈಶ್ ಎ ಮೊಹಮ್ಮದ್ ಸಂಘಟನೆಯನ್ನು ಹತ್ತಿಕ್ಕಲು ಪಾಕಿಸ್ತಾನ ತೆಗೆದುಕೊಂಡಿರುವ ಕ್ರಮ ಅದಕ್ಕೇ ಅಪಾಯಕಾರಿಯಾಗಿದೆ. ಪಾಕಿಸ್ತಾನ ಸರ್ಕಾರ ಮಸೀದಿ, ಮದ್ರಸಾ ಮತ್ತು ಜಿಹಾದಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಲು ಮುಂದಾದರೆ ಅದು ದೇಶದ ಏಕತೆ, ಸಮಗ್ರತೆಗೆ ತೊಂದರೆಯುಂಟಾಗುತ್ತದೆ ಎಂದು ಜೈಶ್ ಎ ಮೊಹಮ್ಮದ್ ಉಗ್ರಗಾಮಿ ಸಂಘಟನೆ ಮುಖ್ಯಸ್ಥ ಮೌಲಾನಾ ಮಸೂದ್ ಅಜರ್ ಹೇಳಿದ್ದಾನೆ.

ಸೈದಿ ಎಂಬ ಕಾವ್ಯನಾಮದಡಿ ಮೌಲಾನಾ ಮಸೂದ್ ಬರಹಗಳು ಪ್ರಕಟಗೊಂಡಿದ್ದು, ಜೈಶೆ ಸಂಘಟನೆಯ ಆನ್ ಲೈನ್ ಮುಖವಾಣಿ ಅಲ್ ಖಲಮ್ ನಲ್ಲಿ ಪ್ರಕಟವಾಗಿದೆ.

ಮೌಲಾನಾ ಬಂಧನ ಸುದ್ದಿ ಹೊರಬಿದ್ದ ಕೂಡಲೇ ಆತ ಸಂಘಟನೆಯ ಮುಖವಾಣಿಯಲ್ಲಿ ಬರೆದುಕೊಂಡ ಬರಹದ ಸಾರಾಂಶಗಳು ಜಾಲತಾಣಗಳಲ್ಲಿ ಹರಿದಾಡುತ್ತಿವೆ. ”ನಾನು ನನ್ನ ಬಂಧನಕ್ಕಾಗಲಿ, ಸಾವಿಗಾಗಲಿ ಭಯಪಡುತ್ತಿಲ್ಲ. ನಾನು ಸತ್ತರೆ ನನ್ನ ಸ್ನೇಹಿತರಾಗಲಿ, ನನ್ನ ಶತ್ರುಗಳಾಗಲಿ, ಸೇನೆಯಾಗಲಿ ನನ್ನನ್ನು ಕಳೆದುಕೊಳ್ಳುವುದಿಲ್ಲ.ಅಲ್ಲಾ ದೇವರ ದಯೆ ನಮ್ಮ ಮೇಲಿದೆ. ನಮ್ಮನ್ನು ಸೆರೆಹಿಡಿದರೆ ನಮ್ಮ ಶತ್ರುಗಳು ಹೆಚ್ಚು ಸಮಯದವರೆಗೆ ಖುಷಿ ಪಡಲು ಸಾಧ್ಯವಿಲ್ಲ. ನಾನಿಲ್ಲದಿದ್ದರೆ ನಮ್ಮ ಸಂಘಟನೆಯೇನು ಭಯಪಡುವುದಿಲ್ಲ. ನನ್ನ ಸಾವು ಬಂದರೆ ಬರಲಿ, ಈಡೇರದೆ ಇರುವ ಆಸೆಗಳು ನನಗೆ ಯಾವುದೂ ಇಲ್ಲ. ನನ್ನ ಹೆಂಡತಿ, ಮಕ್ಕಳನ್ನು ಅಲ್ಲಾ ದೇವರು ಚೆನ್ನಾಗಿ ನೋಡಿಕೊಳ್ಳುತ್ತಾನೆ ಎಂಬ ನಂಬಿಕೆ ನನಗಿದೆ ಎಂದು ಬರೆದುಕೊಂಡಿದ್ದಾನೆ.

ಪಾಕ್ ಸರ್ಕಾರವನ್ನು ಅಪಹಾಸ್ಯ ಮಾಡಿ ಬರೆದಿದ್ದು, ನಮ್ಮ ಬಗ್ಗೆ ಭಾರತ ದೇಶದಿಂದ ಭಾರೀ ಅಪಸ್ವರ ಕೇಳಿಬರುತ್ತಿದೆ. ನಮ್ಮನ್ನು ಬಂಧಿಸುವಂತೆ, ಕೊಲ್ಲುವಂತೆ ಒತ್ತಾಯಪಡಿಸುತ್ತಿದೆ. ಬಹುಶಃ ಪಾಕಿಸ್ತಾನ-ಭಾರತ ದೇಶಗಳ ಸ್ನೇಹ ಬಾಂಧವ್ಯಕ್ಕೆ ನಾವು ಅಡ್ಡಿಪಡಿಸುತ್ತಿದ್ದೆವೇನೋ? ನಮ್ಮ ಹೋರಾಟ, ಆಶಯ ಯಾವತ್ತೂ ಪಾಕಿಸ್ತಾನದ ಪರವಾಗಿಯೇ ಇರುತ್ತದೆ. ಮುಸಲ್ಮಾನರ ಮತ್ತು ಜಿಹಾದಿಗಳ ಪರ ನಮ್ಮ ಹೋರಾಟ ಎಂದಿದ್ದಾನೆ.

ಆದರೆ ಪಾಕ್ ಸರ್ಕಾರದ ಆಡಳಿತಗಾರರು ನಮ್ಮ ಮಾತನ್ನು ಗೌರವಿಸುತ್ತಿಲ್ಲ. ಸರ್ಕಾರದ ಜನಪ್ರತಿನಿಧಿಗಳು ದೇಶವನ್ನು ಮತ್ತು ಜನರನ್ನು ಸಾವಿನ ಕೂಪಕ್ಕೆ ತಳ್ಳುತ್ತಿದ್ದಾರೆ. ನಾನು ಪಾಕಿಸ್ತಾನಕ್ಕೆ ಇದುವರೆಗೆ ಯಾವುದೇ ತೊಂದರೆನ್ನುಂಟು ಮಾಡುತ್ತಿಲ್ಲ. ಇಡೀ ದೇಶದಲ್ಲಿ ಯಾವುದೇ ಪೊಲೀಸ್ ಠಾಣೆಯಲ್ಲಿ ನನ್ನ ವಿರುದ್ಧ ಪ್ರಕರಣ ದಾಖಲಾಗಿಲ್ಲ. ನಾನು ಬಹವಲ್ಪುರ್ ಕೇಂದ್ರ ಕಾರಾಗೃಹದಲ್ಲಿ ಸೆರೆಯಲ್ಲಿದ್ದಾಗ ನನ್ನ ಸ್ನೇಹಿತರು ಮತ್ತು ಅನುಯಾಯಿಗಳು ದಾಳಿ ಮಾಡಬಹುದು ಎಂದು ಜೈಲಿನ ಅಧಿಕಾರಿಗಳು ಭಯಪಟ್ಟುಕೊಳ್ಳುತ್ತಿದ್ದರು. ನನ್ನನ್ನು ದೇರ ಗಾಜಿ ಖಾನ್ ಗೆ ಹಸ್ತಾಂತರಿಸಿದರು. ಆಗ ನಾನವರಲ್ಲಿ ಹೇಳುತ್ತಿದ್ದೆ, ಇದು ನನ್ನ ದೇಶ. ಅಲ್ಲಾ ದೇವರು ನನಗೆ ಸಹಾಯ ಮಾಡಿದ್ದಾನೆ. ನನ್ನ ಸ್ವಂತ ಮನೆಯೇ ನನಗೆ ಉಪ ಕಾರಾಗೃಹವಾಗಿದೆ. ನನ್ನನ್ನು ಅಲ್ಲಿ ಬಂಧಿಸಿಡಲಾಗಿದೆ.

ಹೀಗೆ ಬರೆಯುತ್ತಾ ಹೋಗಿರುವ ಮೌಲಾನಾ ತಾನು ಜಮ್ಮು ಜೈಲಿನಲ್ಲಿ ಕಳೆದ ದಿನಗಳನ್ನ ಸಹ ನೆನಪಿಸಿಕೊಂಡಿದ್ದಾನೆ. ತನ್ನನ್ನು ಬೇರೆ ಜೈಲಿಗೆ ಕಳುಹಿಸಲು ಕಾಶ್ಮೀರಿ ಮುಜಾಹಿದ್ದೀನ್ ಗಳು ತಡೆದು ನಿಂತಿದ್ದರು ಎಂದು ಮೌಲಾನಾ ನೆನಪಿಸಿಕೊಳ್ಳುತ್ತಾನೆ.

ಜೈಶ್ ಸಂಘಟನೆಯಿಂದ ದಾಳಿಯ ಬೆದರಿಕೆ: ಮೌಲಾನಾ ಮಸೂದ್ ಅಜರ್ ನನ್ನು ಬಂಧಿಸಿರುವುದಕ್ಕೆ ಜೈಶ್ ಸಂಘಟನೆ ಭಾರತ ಮತ್ತು ಪಾಕಿಸ್ತಾನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿವೆ. ಅಜರ್ ನನ್ನು ಬಂಧಿಸಿರುವುದಕ್ಕೆ ಕಿಡಿಕಾರಿರುವ ಜೈಶ್ ಸಂಘಟನೆ, ಶತ್ರುಗಳ ಸಂತೋಷ ಹೆಚ್ಚು ದಿನ ಇರಲು ಬಿಡಲ್ಲ. ಭಾರತ ಮತ್ತು ಪಾಕಿಸ್ತಾನದಲ್ಲಿ ಮತ್ತೆ ದಾಳಿ ನಡೆಸುತ್ತೇವೆ ಎಂದು ಜೈಶ್ ಉಗ್ರಗಾಮಿ ಸಂಘಟನೆ ಬಿಡುಗಡೆ ಮಾಡಿರುವ ಆಡಿಯೋದಲ್ಲಿ ಎಚ್ಚರಿಕೆ ನೀಡಿದೆ.

ನಮ್ಮ ಕಚೇರಿಗೆ ಬೀಗ ಹಾಕಿ, ಸಂಘಟನೆಯ ಸದಸ್ಯರನ್ನು ಸೆರೆ ಹಿಡಿದಿರುವುದಕ್ಕೆ ಪಾಕ್ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಜೈಶ್ ಉಗ್ರರು ಪಾಕ್ ನಲ್ಲಿಯೂ ದಾಳಿ ನಡೆಸುವುದಾಗಿ ಬೆದರಿಕೆ ಹಾಕಿದೆ.

Write A Comment