ಉಫಾ (ರಷ್ಯಾ), ಜು.10- ಮುಂದಿನ ವರ್ಷ ಸಾರ್ಕ್ ಶೃಂಗಸಭೆಯಲ್ಲಿ ಭಾಗವಹಿಸಲು ಪಾಕಿಸ್ಥಾನಕ್ಕೆ ಬರುವಂತೆ ಪಾಕ್ ಪ್ರಧಾನಿ ನವಾಜ್ ಷರೀಫ್ ಅವರು ನೀಡಿದ ಆಹ್ವಾನವನ್ನು ನರೇಂದ್ರಮೋದಿ ಸ್ವೀಕರಿಸಿದ್ದಾರೆ. ಬ್ರಿಕ್ಸ್ ಸಭೆಗೂ ಮುನ್ನ ಒಂದು ಗಂಟೆ ಕಾಲ ನಡೆದ ಉಭಯ ನಾಯಕರ ಮಹತ್ವದ ಮಾತುಕತೆಗಳ ಬಳಿಕ ಷರೀಫ್ ಈ ಆತ್ಮೀಯ ಆಹ್ವಾನ ನೀಡಿದ್ದಾರೆ.
ಷರೀಫ್ರ ಆಹ್ವಾನವನ್ನು ಪ್ರಧಾನಿ ಮೋದಿ ಹರ್ಷದಿಂದಲೇ ಸ್ವೀಕರಿಸಿದ್ದಾರೆ. ಮಾತುಕತೆ ವೇಳೆ ಪ್ರಧಾನಿ ಮೋದಿಯವರು 26/11ರ ಮುಂಬೈ ದಾಳಿ ರೂವಾರಿ ಝಾಕಿ-ಉರ್-ರೆಹ್ಮಾನ್ ಲಖ್ವಿ ವಿಚಾರಣೆಗೆ ಸಂಬಂಧಿಸಿದಂತೆ ಚರ್ಚೆ ನಡೆದಿದ್ದು, ಉಗ್ರನ ಧ್ವನಿ ಮುದ್ರಿಕೆ ಸೇರಿದಂತೆ ಅಗತ್ಯ ಪುರಾವೆಗಳನ್ನು ಪಾಕಿಸ್ಥಾನಕ್ಕೆ ಕಳುಹಿಸಿಕೊಡಲಾಗುವುದು ಎಂದು ಮಾತುಕತೆಯ ನಂತರ ವಿದೇಶಾಂಗ ಕಾರ್ಯದರ್ಶಿ ಜೈ ಶಂಕರ್ ಹೇಳಿದ್ದಾರೆ.
ಇದುವರೆಗೆ ಭಾರತ ಪೂರೈಸಿರುವ ಮಾಹಿತಿಗಳು ವಿಚಾರಣೆಗೆ ಸಾಕಾಗುತ್ತಿಲ್ಲ ಎಂದು ನವಾಜ್ ಷರೀಫ್ ಹೇಳಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಲಖ್ವಿ ಬಿಡುಗಡೆ ಮಾಡಿರುವ ಪಾಕ್ ಕ್ರಮದ ಬಗ್ಗೆ ಭಾರತಕ್ಕೆ ಆತಂಕವಿದೆ ಎಂಬುದನ್ನು ಮೋದಿ ಅವರು ಷರೀಫ್ ಎದುರು ಸ್ಪಷ್ಟಪಡಿಸಿದ್ದರೆ. ಭಯೋತ್ಪಾದನೆ ನಿಗ್ರಹ ಕುರಿತಂತೆ ಎರಡ ದೇಶಗಳ ವಿದೇಶಾಂಗ ಖಾತೆ ಅಧಿಕಾರಿಗಳು ನವದೆಹಲಿಯಲ್ಲಿ ಮಾತುಕತೆ ನಡೆಸುವ ಬಗ್ಗೆಯೂ ತೀರ್ಮಾನಿಸಲಾಗಿದೆ. ಜಮ್ಮು-ಕಾಶ್ಮೀರದ ಗಡಿಯಲ್ಲಿ ನಿರಂತರ ಭಯೋತ್ಪಾದಕ ಚಟುವಟಿಕೆಗಳು ನಡೆಯುತ್ತಿದ್ದು, ಅದನ್ನು ತಡೆಗಟ್ಟುವ ಬಗ್ಗೆಯೂ ಚರ್ಚೆ ನಡೆಯಲಿದೆ. ಆಗಸ್ಟ್ನಲ್ಲಿ ಈ ಎಲ್ಲ ವಿಷಯ ಕುರಿತಂತೆ ವಿದೇಶಾಂಗ ಕಾರ್ಯದರ್ಶಿಗಳ ಮಟ್ಟದ ಮಾತುಕತೆಗಳು ನಡೆಯಲಿವೆ ಎಂದು ಜೈ ಶಂಕರ್ ಹೇಳಿದ್ದಾರೆ.