ಕಠ್ಮಂಡು, ಮೇ 14- ಹಿಮಾಲಯಗಳ ನಾಡು ನೇಪಾಳದಲ್ಲಿ ಇಂದು ಬೆಳಗ್ಗೆ ಪುನಃ ಭೂಮಿ ನಡುಗಿದ್ದು, ಜನತೆ ಇನ್ನಷ್ಟು ಭಯಭೀತರಾಗಿದ್ದಾರೆ. ರಾಜಧಾನಿ ಕಠ್ಮಂಡು ಸೇರಿದಂತೆ ಕೆಲ ಭಾಗಗಳಲ್ಲಿ ಇಂದು ಬೆಳಗ್ಗೆ ಕೆಲ ಕಾಲ ಭೂಮಿ ನಡುಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ರಿಕ್ಟರ್ ಮಾಪಕದಲ್ಲಿ ಕಂಪನದ ತೀವ್ರತೆ 4ರಷ್ಟು ದಾಖಲಾಗಿದೆ. ದೊಲಾಖ ಮತ್ತು ಸಿಂಧುಪಲ್ಚೌಕ್ ಕಂಪನದ ಕೇಂದ್ರ ಬಿಂದುವಾಗಿದೆ. ಇಂದು ಮುಂಜಾನೆ ಇದ್ದಕ್ಕಿದ್ದಂತೆ ಕೆಲ ಸೆಕೆಂಡ್ಗಳ ಕಾಲ ನಡುಗಿದ್ದರಿಂದ ಭಯಭೀತರಾದ ಜನ ಪ್ರಾಣ
ರಕ್ಷಣೆಗಾಗಿ ಮನೆಯಿಂದ ಹೊರಗೋಡಿಬಂದಿದ್ದಾರೆ. ಮಕ್ಕಳು, ಮಹಿಳೆಯರು, ವೃದ್ಧರು, ವಯೋವೃದ್ಧರು ಕಳೆದ ಹಲವು ದಿನಗಳಿಂದ ಯಾವ ಸಂದರ್ಭದಲ್ಲಿ ಭೂಮಿ ಕಂಪಿಸಲಿದೆಯೋ ಎಂಬ ಭಯದಿಂದ ರಸ್ತೆಯಲ್ಲೇ ವಾಸ ಮಾಡುತ್ತಿದ್ದಾರೆ. ಸದ್ಯಕ್ಕೆ ಕಠ್ಮಂಡು ಸೇರಿದಂತೆ ಮತ್ತಿತರ ಭಾಗಗಳಲ್ಲಿ ವಾಸಮಾಡುತ್ತಿರುವವರಿಗೆ ಬಯಲೇ ಮನೆಯಾಗಿದೆ. ಯಾರೊಬ್ಬರೂ ಮನೆಗೆ ಹೋಗಲು ಮನಸ್ಸು ತೋರಿತ್ತಿಲ್ಲ.
ಪದೇ ಪದೇ ಭೂಮಿ ಕಂಪಿಸುತ್ತಿರುವುದರಿಂದ ಮಳೆ, ಗಾಳಿ, ಬಿಸಿಲು, ಚಳಿ ಲೆಕ್ಕಿಸದೆ ಬೀದಿಯಲ್ಲೇ ಜೀವನ ಸಾಗಿಸುತ್ತಿರುವ ದೃಶ್ಯ ಎಲ್ಲೆಡೆ ಕಂಡು ಬರುತ್ತಿದೆ. ಕಳೆದ ಏಪ್ರಿಲ್ 25ರಂದು ಕಠ್ಮಂಡು ಮತ್ತಿತರ ಕಡೆ ಭೂಮಿ ನಡುಗಿದ ಪರಿಣಾಮ 8ಸಾವಿರ ಮಂದಿ ಅಸುನೀಗಿ ಸಾವಿರಾರು ಜನ ಗಾಯಗೊಂಡಿದ್ದರು. ಈ ಆಘಾತದಿಂದ ಹೊರ ಬರುವ ಮುನ್ನವೇ ಮಂಗಳವಾರ ಭೂ ಕಂಪ ಸಂಭವಿಸಿ 75ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದರು. ಇದೀಗ ಪುನಃ ಭೂಮಿ ನಡುಗಿರುವುದರ ಪರಿಣಾಮ ನೇಪಾಳದ ಜನತೆ ಯಾವ ಸಂದರ್ಭದಲ್ಲಿ ಏನಾಗುತ್ತದೆಯೋ ಎಂದು ತಲೆ ಮೇಲೆ ಕೈಹೊತ್ತು ಕಾಲ ನೂಕುತ್ತಿದ್ದಾರೆ. ಗಿರಿಶಿಖರ ನಾಡಿನಲ್ಲಿ ಭೂಕಂಪವಾಗುತ್ತಿರುವುದರಿಂದ ವ್ಯಾಪಾರ, ವಾಣಿಜ್ಯ ವಹಿವಾಟು ಸಂಪೂರ್ಣವಾಗಿ ಕುಸಿದುಬಿದ್ದಿದೆ. ಭೂಮಿ ಬಾಯ್ದೆರೆದಿರುವ ಪರಿಣಾಮ ವಾಹನಗಳ ಸಂಚಾರವೂ ಸ್ಥಗಿತಗೊಂಡು ಹಲವು ದಿನಗಳೇ ಕಳೆದಿವೆ. ಸರ್ಕಾರಿ ಕಚೇರಿ, ಖಾಸಗಿ ಕಟ್ಟಡಗಳು, ಶಾಲಾ-ಕಾಲೇಜುಗಳಿಗೆ ರಜೆ ನೀಡಲಾಗಿದೆ. ಸದ್ಯಕ್ಕೆ ಕಠ್ಮಂಡುವಿನಲ್ಲಿ ಎಲ್ಲಿ ನೋಡಿದರೂ ನೀರವಮೌನ ಕಾಣುತ್ತಿದ್ದು, ಯಾರೊಬ್ಬರಲ್ಲೂ ಬದುಕುಳಿಯುತ್ತೇವೆ ಎಂಬ ಭರವಸೆ ಇಲ್ಲದಂತಾಗಿದೆ.