ವಾಷಿಂಗ್ಟನ್ (ಪಿಟಿಐ): ಭೂಕಂಪ ದಿಂದ ನಲುಗಿರುವ ನೇಪಾಳದಲ್ಲಿ ಮುಂದಿನ ದಿನಗಳಲ್ಲಿ ಭೂಕುಸಿತ ಉಂಟಾಗುವ ಅಪಾಯ ಇದೆ ಎಂದು ವಿಜ್ಞಾನಿಗಳು ಎಚ್ಚರಿಸಿದ್ದಾರೆ.
ನೇಪಾಳ–ಟಿಬೆಟ್ ಗಡಿ, ಉತ್ತರ ಕಠ್ಮಂಡು ಹಾಗೂ ಮೌಂಟ್ ಎವರೆಸ್ಟ್ನ ಪಶ್ಚಿಮ ಭಾಗದಲ್ಲಿ ಈ ಅಪಾಯ ಇದೆ. ಮುಂಗಾರು ಮಳೆ ಶುರುವಾದ ಕೂಡಲೇ ಈ ಅಪಾಯ ಇನ್ನೂ ಹೆಚ್ಚಾಗಲಿದೆ ಎಂದು ಮಿಷಿಗನ್್ ವಿಶ್ವವಿದ್ಯಾಲಯದ ಸಂಶೋಧಕರು ಮುನ್ಸೂಚನೆ ನೀಡಿ
ದ್ದಾರೆ. ಕಂಪನ, ಇಳಿಜಾರು ಪ್ರದೇಶ, ಬಂಡೆಗಳ ಮಾದರಿಯ ವಿಶ್ಲೇಷಣೆಯನ್ನು ಆಧರಿಸಿ ತಜ್ಞರು ಈ ಅಂದಾಜು ಮಾಡಿದ್ದಾರೆ.
ಕುಗ್ರಾಮಗಳಿಗೆ ತೆರಳಲು ಪ್ರಯಾಸ: ರಕ್ಷಣಾ ತಂಡಗಳು ನೇಪಾಳದ ಕುಗ್ರಾಮಗಳಿಗೆ ತೆರಳುವುದಕ್ಕೆ ಪ್ರಯಾಸಪಡುತ್ತಿವೆ. ಭಾರಿ ಮಳೆ ಸುರಿಯುತ್ತಿರುವುದರಿಂದ ರಕ್ಷಣಾ ಕಾರ್ಯಕ್ಕೆ ತೊಡಕಾಗಿದೆ. ಹೆಲಿಕಾಪ್ಟರ್ಗಳು ಕುಗ್ರಾಮಗಳಲ್ಲಿ ಟೆಂಟ್, ಘನ ಆಹಾರ ಪದಾರ್ಥ ಹಾಗೂ ಔಷಧಗಳನ್ನು ಎಸೆಯುತ್ತಿವೆ. ಆದರೆ ಕೆಲವರಿಗೆ ಇವುಗಳು ಇನ್ನೂ ಲಭ್ಯವಾಗಿಲ್ಲ.
ನವದೆಹಲಿ ವರದಿ: ಭೂಕಂಪದ ಮುನ್ಸೂಚನೆ ನೀಡುವ ತಂತ್ರಜ್ಞಾನ ಇನ್ನೂ ಅಭಿವೃದ್ಧಿಯಾಗಿಲ್ಲ ಎಂದು ಸರ್ಕಾರ ಲೋಕಸಭೆಗೆ ಬುಧವಾರ ತಿಳಿಸಿತು. ನೇಪಾಳದಲ್ಲಿ ಸಂಭವಿಸಿದ ಭೂಕಂಪದ ಬಗ್ಗೆ ಸದಸ್ಯರೆಲ್ಲ ಕಳವಳ ವ್ಯಕ್ತಪಡಿಸಿದಾಗ ಸರ್ಕಾರ ಈ ಮಾಹಿತಿ ನೀಡಿತು.
ಭಾರತವು ಬಾಹ್ಯಾಕಾಶ ತಂತ್ರಜ್ಞಾನದಲ್ಲಿ ವಿಶ್ವದಲ್ಲಿಯೇ ಎರಡನೇ ಸ್ಥಾನದಲ್ಲಿದೆ. ಆದರೆ ಭೂಕಂಪ ಮುನ್ಸೂಚನೆ ತಂತ್ರಜ್ಞಾನ ಇನ್ನಷ್ಟೇ ಅಭಿವೃದ್ಧಿಯಾಗಬೇಕಿದೆ ಎಂದು ಅಣು ಇಂಧನ ಹಾಗೂ ಬಾಹ್ಯಾಕಾಶ ಖಾತೆ ರಾಜ್ಯ ಸಚಿವ ಜಿತೇಂದ್ರ ಸಿಂಗ್ ಹೇಳಿದರು.
ವಿಪತ್ತು ನಿರ್ವಹಣೆಯಲ್ಲಿ ಭಾರತ ಮುಂದೆ: ವಿಪತ್ತು ನಿರ್ವಹಣೆಯಲ್ಲಿ ಭಾರತವು ಮುಂಚೂಣಿ ರಾಷ್ಟ್ರವಾಗಿ ಹೊರಹೊಮ್ಮಿದೆ ಎಂದು ಗೃಹ ಖಾತೆ ರಾಜ್ಯ ಸಚಿವ ಕಿರಣ್ ರಿಜಿಜು ರಾಜ್ಯಸಭೆಗೆ ತಿಳಿಸಿದರು.
ಲಖನೌ ವರದಿ: ಉತ್ತರಪ್ರದೇಶದ ಮಹಾರಾಜಾಗಂಜ್್ ಜಿಲ್ಲೆಯ ಗಡಿ ಪಟ್ಟಣ ಸೋನೌಲಿಗೆ ಕಠ್ಮಂಡುವಿನಿಂದ ಈವರೆಗೆ ಸುಮಾರು ನಾಲ್ಕು ಸಾವಿರ ಮಂದಿ ಬಂದಿದ್ದಾರೆ. ಇವರಲ್ಲಿ ವಿದೇಶಿಯರೂ ಇದ್ದಾರೆ.
-ಕೃಪೆ: ಪ್ರಜಾವಾಣಿ