ನವದೆಹಲಿ: ನಿರ್ಭಯಾ ಗ್ಯಾಂಗ್ರೇಪ್ ಮತ್ತು ಕೊಲೆ ಅಪರಾಧಿಗಳ ಗಲ್ಲುಶಿಕ್ಷೆಗೆ ಇನ್ನು ಒಂದು ವಾರಗಳಷ್ಟೇ ಬಾಕಿ ಇದೆ. ನಾಲ್ವರು ಆರೋಪಿಗಳನ್ನು ಜನವರಿ 22ರಂದು ತಿಹಾರ್ ಜೈಲಿನಲ್ಲಿ ಹ್ಯಾಂಗ್ಮನ್ ಪವನ್ ಜಲ್ಲಾದ್ ನೇಣಿಗೇರಿಸಲಿದ್ದಾರೆ. ಈ ಕ್ಷಣಕ್ಕಾಗಿ ಇಡೀ ದೇಶವೆ ಎದುರು ನೋಡುತ್ತಿದ್ದು, ಅತ್ಯಾಚಾರಿಗಳಿಗೆ ಇದೊಂದು ಎಚ್ಚರಿಕೆಯ ಪಾಠವಾಗಬೇಕೆಂಬುದು ಎಲ್ಲರ ಆಶಯವಾಗಿದೆ. ಇದರ ನಡುವೆ ನಿರ್ಭಯಾ ಅಪರಾಧಿಗಳ ಜೈಲು ಜೀವನದ ಕೆಲವು ಆಸಕ್ತಿ ವಿಷಯಗಳು ಬಹಿರಂಗವಾಗಿವೆ.
ನಾಲ್ವರು ಅಪರಾಧಿಗಳಾದ ಅಕ್ಷಯ್ ಠಾಕೂರ್ ಸಿಂಗ್, ಮುಕೇಶ್, ಪವನ್ ಗುಪ್ತ ಮತ್ತು ವಿನಯ್ ಶರ್ಮ ಒಟ್ಟು ತಮ್ಮ ಜೈಲು ವಾಸದ ಅವಧಿಯಲ್ಲಿ 1,37,000 ರೂ. ಸಂಪಾದನೆ ಮಾಡಿದ್ದಾರೆ. ಅಲ್ಲದೆ, 23 ಬಾರಿ ಜೈಲು ನಿಯಮವನ್ನು ಉಲ್ಲಂಘನೆ ಮಾಡಿದ್ದಾರೆ ಎಂಬ ಮಾಹಿತಿಯನ್ನು ಜೈಲು ಮೂಲಗಳು ತಿಳಿಸಿವೆ.
ಅಪರಾಧಿ ವಿನಯ್ ಜೈಲು ನಿಯಮ ಉಲ್ಲಂಘನೆ ಅಡಿಯಲ್ಲಿ 11 ಬಾರಿ ಶಿಕ್ಷೆಗೆ ಗುರಿಯಾಗಿದ್ದಾರೆ. ಅಕ್ಷಯ್ ಒಂದು ಬಾರಿಯಾದರೆ, ಮುಕೇಶ್ 3 ಹಾಗೂ ಪವನ್ 8 ಬಾರಿ ಜೈಲು ನಿಯಮವನ್ನು ಉಲ್ಲಂಘಿಸಿದ್ದಾರೆ.
ಇನ್ನು ಕಳೆದ 7 ವರ್ಷಗಳ ಜೈಲು ವಾಸದ ಅವಧಿಯಲ್ಲಿ ಮುಕೇಶ್ ಯಾವುದೇ ಕೂಲಿ ಕೆಲಸವನ್ನು ಆಯ್ದುಕೊಂಡಿಲ್ಲ. ಇದನ್ನು ಹೊರತುಪಡಿಸಿದರೆ, ಅಕ್ಷಯ್ 69,000 ರೂ., ಪವನ್ 29,000 ರೂ. ಮತ್ತು ವಿನಯ್ 39,000 ರೂ. ಸಂಪಾದಿಸಿದ್ದಾನೆ ಎಂದು ಜೈಲು ಮೂಲಗಳು ಮಾಹಿತಿ ನೀಡಿವೆ.
2016ರಲ್ಲಿ ಮುಕೇಶ್, ಪವನ್ ಮತ್ತು ಅಕ್ಷಯ್ 10ನೇ ತರಗತಿಗೆ ಪ್ರವೇಶ ಪಡೆದು ಎಸ್ಎಸ್ಎಲ್ಸಿ ಪರೀಕ್ಷೆ ಎದುರಿಸಿದ್ದರೂ ಉತ್ತೀರ್ಣರಾಗಿಲ್ಲ. ವಿನಯ್ 2015ರಲ್ಲಿ ಸ್ನಾತಕೋತ್ತರ ಪದವಿಗೆ ಪ್ರವೇಶ ನೀಡಿದರೂ ಅದನ್ನು ಪೂರ್ಣಗೊಳಿಸಲಾಗುವುದಿಲ್ಲ.
ಅಪರಾಧಿಗಳನ್ನು ನೇಣಿಗೇರಿಸುವ ಮುನ್ನ ಎರಡು ಬಾರಿ ಅವರನ್ನು ಭೇಟಿ ಮಾಡಲು ಕುಟುಂಬಕ್ಕೆ ಅವಕಾಶ ಮಾಡಿಕೊಡಲಾಗುತ್ತದೆ. ಮಂಗಳವಾರವಷ್ಟೇ ವಿನಯ್ ತಂದೆ ಭೇಟಿ ಮಾಡಿ ಹೋಗಿದ್ದಾರೆ.
Comments are closed.