ರಾಷ್ಟ್ರೀಯ

ರಾಮ ಮಂದಿರ: ಟ್ರಸ್ಟ್​​​ ಪ್ರಕ್ರಿಯೆ ಆರಂಭಿಸಿದ ಕೇಂದ್ರ

Pinterest LinkedIn Tumblr


ನವದೆಹಲಿ(ನ.11): ಶತಮಾನಗಳ ಹಿಂದಿನ ಅಯೋಧ್ಯೆ ಬಾಬರಿ ಮಸೀದಿ-ರಾಮ ಜನ್ಮಭೂಮಿ ವಿವಾದಕ್ಕೆ ಕೊನೆಗೂ ತೆರೆ ಬಿದ್ದಿದೆ. ಈ ಪ್ರಕರಣ ಸಂಬಂಧ ಐತಿಹಾಸಿಕ ತೀರ್ಪು ನೀಡಿರುವ ಸುಪ್ರೀಂಕೋರ್ಟ್​​, ವಿವಾದಿತ 2.77 ಎಕರೆ ಜಾಗವನ್ನು ಟ್ರಸ್ಟ್‌ಗೆ ನೀಡಿದೆ. ಹಾಗೆಯೇ ಇನ್ನು ಮೂರು ತಿಂಗಳಿನಲ್ಲಿ ಟ್ರಸ್ಟ್‌ ರಚನೆ ಮಾಡಬೇಕು ಎಂದು ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ. ಇಂದು ಸುಪ್ರೀಂಕೋರ್ಟ್​ ಆದೇಶದಂತೆಯೇ ಕೇಂದ್ರ ಸರ್ಕಾರ ಟ್ರಸ್ಟ್​​ ಪ್ರಕ್ರಿಯೆ ಆರಂಭಿಸಿದೆ. ಟ್ರಸ್ಟ್ ಕಾರ್ಯಸೂಚಿ ರೂಪಿಸಲೆಂದೇ ಅಧಿಕಾರಿಗಳ ತಂಡ ರಚನೆ ಮಾಡಿದೆ. ಈ ಸಂಬಂಧ ಕಾನೂನಿನ ಆಯಾಮಗಳ ಸಲಹೆ ನೀಡುವಂತೆ ಅಡ್ವೊಕೇಟ್ ಜನರಲ್ ಮತ್ತು ಕಾನೂನು ಇಲಾಖೆಗೆ ಕೇಂದ್ರ ಗೃಹ ಸಚಿವಾಲಯ ಪತ್ರ ಬರೆದಿದೆ ಎಂದು ನ್ಯೂಸ್​​-18 ಕನ್ನಡಕ್ಕೆ ಎಕ್ಸ್​​ಕ್ಲೂಸಿವ್​​ ಮಾಹಿತಿ ಲಭ್ಯವಾಗಿದೆ.

ಇಡೀ ದೇಶವೇ ಕುತೂಹಲದಿಂದ ಕಾಯುತ್ತಿದ್ದ ವಿವಾದಿತ ರಾಮ ಜನ್ಮಭೂಮಿ ಪ್ರಕರಣದ ವಿಚಾರದಲ್ಲಿ ಸುಪ್ರೀಂಕೋರ್ಟ್​ ಶನಿವಾರ ತೀರ್ಪು ಪ್ರಕಟ ಮಾಡಿತ್ತು. ಎಲ್ಲ ಧರ್ಮವನ್ನೂ ಗೌರವಿಸುವುದಾಗಿ ಹೇಳಿದ ಸುಪ್ರೀಂಕೋರ್ಟ್​ನ ಸಾಂವಿಧಾನಿಕ ಪೀಠ ಹಿಂದೂಗಳಿಗೆ ಕೆಲವು ಷರತ್ತುಗಳನ್ನು ವಿಧಿಸಿ ಅಯೋಧ್ಯೆಯಲ್ಲಿ ಜಾಗವನ್ನು ನೀಡಿ ಆದೇಶ ಹೊರಡಿಸಿತ್ತು. ಮುಸ್ಲಿಂ ಸಮುದಾಯಕ್ಕೆ 5 ಎಕರೆ ಬದಲಿ ಜಾಗವನ್ನು ನೀಡಲು ಸುಪ್ರೀಂಕೋರ್ಟ್​ ಆದೇಶಿಸಿತ್ತು.

ನವೆಂಬರ್​​​ 9ನೇ ತಾರೀಕಿನಂದು ರಾಮ ಜನ್ಮಭೂಮಿ ಪ್ರಕರಣದ ತೀರ್ಪು ಓದಲು ಆರಂಭಿಸಿದ ನ್ಯಾಯಮೂರ್ತಿಗಳು ಕೆಲವು ವಿಚಾರಗಳನ್ನು ಸ್ಪಷ್ಟಪಡಿಸಿದರು. ನ್ಯಾಯಾಲಯ ದೇಶದ ಸಮತೋಲನ ಕಾಪಾಡಬೇಕು. ಬಾಬರ್​ ಆದೇಶದ ಮೇಲೆ ಮಸೀದಿ ನಿರ್ಮಿಸಲಾಗಿದೆ. 1949ರಲ್ಲಿ ರಾಮನ ಮೂರ್ತಿ ಪ್ರತಿಷ್ಠಾಪಿಸಲಾಗಿದೆ ಎಂದು ವಾದಿಸಿದ್ದಾರೆ. ನಮ್ಮ ಸಂವಿಧಾನ ನಿರ್ಮಾಣ ಆಗಿರೋದು ಜ್ಯಾತ್ಯಾತೀತ ತತ್ವದಡಿಯಲ್ಲಿ. ಜ್ಯಾತ್ಯಾತೀತತೆ ಉಳಿಸೋದು ಸಂವಿಧಾನದ ಮೂಲ ಆಶಯ ಎಂದು ಸುಪ್ರೀಂ ಕೋರ್ಟ್​ ಅಭಿಪ್ರಾಯ ಪಟ್ಟಿತು.
ರಾಮ ಜನ್ಮ ಭೂಮಿ ನ್ಯಾಯಶಾಸ್ತ್ರವಾಗಿ ಇಲ್ಲ, ಹಾಗೇ ಬಾಬ್ರಿ ಮಸೀದಿಯೂ ಖಾಲಿ ಜಾಗದಲ್ಲಿ ಕಟ್ಟಿಲ್ಲ. ಅಲ್ಲಿ ಈ ಹಿಂದೆ ಯಾವುದೋ ಕಟ್ಟಡ ಇತ್ತು ಎನ್ನುವುದಕ್ಕೆ ಸಾಕ್ಷಿಯಿದೆ. ಅಲ್ಲಿದ್ದ ಕಟ್ಟಡ ಮುಸ್ಲಿಮೇತರ ಕಟ್ಟಡ ಎಂಬುದನ್ನು ಪುರಾತತ್ವ ಇಲಾಖೆ ಸ್ಪಷ್ಟಪಡಿಸಿದೆ. 12ನೇ ಶತಮಾನದ ಕಟ್ಟಡ ಆಗಿದ್ರೂ ಅದು ದೇಗುಲ ಎಂದು ಹೇಳಿಲ್ಲ. ಹಿಂದೂಗಳ ಪ್ರಕಾರ ಆ ಜಾಗ ರಾಮನ ಜನ್ಮಭೂಮಿ. ಶ್ರೀರಾಮ ಇಲ್ಲೇ ಹುಟ್ಟಿದ್ದು ಎಂಬ ನಂಬಿಕೆ ಹಿಂದೂಗಳದ್ದು. ಹಿಂದೂಗಳ ನಂಬಿಕೆಯನ್ನೂ ನಾವು ತೆಗೆದು ಹಾಕಲು ಆಗಲ್ಲ ಎಂದು ಸುಪ್ರೀಂ ಆದೇಶದಲ್ಲಿ ತಿಳಿಸಿತು.

ಕಟ್ಟಡದ ಮಧ್ಯಭಾಗದಲ್ಲಿ ಶ್ರೀರಾಮ ಹುಟ್ಟಿದ್ದು ಅನ್ನೋದು ವಾದ. ನಂಬಿಕೆ ಅನ್ನೋದು ಪಕ್ಕಾ ಎಂದಾಗ ಮಧ್ಯ ಪ್ರವೇಶ ಸರಿಯಲ್ಲ. ನಂಬಿಕೆಗಳನ್ನ ಕೋರ್ಟ್​ ಒಪ್ಪಬೇಕಾಗುತ್ತೆ. ಹಿಂದೂಗಳ ಪ್ರಕಾರ ಇದು ಶ್ರೀರಾಮನ ಜನ್ಮಭೂಮಿ. ಮುಸ್ಲೀಮರ ಪ್ರಕಾರ ಇದು ಐತಿಹಾಸಿಕ ಮಸೀದಿ ಕಟ್ಟಡ . ಯಾರ ನಂಬಿಕೆಗಳನ್ನ ಕೋರ್ಟ್​ ಪ್ರಶ್ನೆ ಮಾಡೋದಿಲ್ಲ ಎಂದ ಕೋರ್ಟ್​ ಕೇವಲ ನಂಬಿಕೆ ಆಧಾರದ ಮೇಲೆ ಭೂಹಕ್ಕು ಸ್ಥಾಪನೆ ಸಾಧ್ಯವಿಲ್ಲ ಎಂದೂ ಸ್ಪಷ್ಟವಾಗಿ ತಿಳಿಸಿತು.

ಏನಿದು ಪ್ರಕರಣ?: ಅಯೋಧ್ಯೆಯಲ್ಲಿ ಬಾಬ್ರಿ ಮಸೀದಿ ಇದ್ದ ಜಾಗದ 2.77 ಎಕರೆ ವಿವಾದಿತ ಭೂಮಿ ಯಾರಿಗೆ ಸೇರಿದ್ದು ಎಂಬುದೇ ಈಗ ಈ ಪ್ರಕರಣದ ವಸ್ತುವಾಗಿದೆ. 1528 ಶ್ರೀರಾಮ ಹುಟ್ಟಿದ ಸ್ಥಳ ಎಂದು ನಂಬಲಾಗುವ ಅಯೋಧ್ಯೆಯಲ್ಲಿ ಬಾಬರ್‌ ಮಸೀದಿ ನಿರ್ಮಾಣ ಮಾಡಿದ್ದ. ರಾಮ ಮಂದಿರ ಕೆಡವಿ ದೇವಾಲಯ ನಿರ್ಮಿಸಲಾಗಿದೆ ಎಂಬ ಆರೋಪ ಕೇಳಿಬಂದಿತ್ತು. ಆದರೆ, ಬಾಬ್ರಿ ಮಸೀದಿ ಜಾಗ ತಮಗೆ ಸೇರಿದ್ದು ಎಂಬುದು ಸುನ್ನಿ ವಕ್ಫ್ ಮಂಡಳಿಯ ವಾದವಾಗಿತ್ತು. ಹಾಗೆಯೇ ನಿರ್ಮೋಹಿ ಅಖಾಡ ಕೂಡ ಇದು ತನಗೆ ಸೇರಿದ್ದೆಂದು ಹೇಳಿತ್ತು. 2010ರಲ್ಲಿ ಅಲಾಹಾಬಾದ್ ಉಚ್ಚ ನ್ಯಾಯಾಲಯವು ಈ ಮೂರೂ ಗುಂಪುಗಳಿಗೆ ವಿವಾದಿತ ಭೂಮಿಯನ್ನು ಸಮಾನವಾಗಿ ಹಂಚುವ ತೀರ್ಪು ನೀಡಿತ್ತು. ಆ ತೀರ್ಪನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್​ನಲ್ಲಿ ಹಲವು ಮೇಲ್ಮನವಿಗಳು ದಾಖಲಾಗಿದ್ದವು. ಈಗ ಸಿಜೆಐ ರಂಜನ್ ಗೊಗೋಯ್ ನೇತೃತ್ವದ ಸುಪ್ರೀಂ ನ್ಯಾಯಪೀಠವು ಇದರ ವಿಚಾರಣೆ ನಡೆಸಿ, ಐತಿಹಾಸಿಕ ತೀರ್ಪು ನೀಡಿತ್ತು

Comments are closed.