ರಾಷ್ಟ್ರೀಯ

ರಾಮಮಂದಿರ ನಿರ್ಮಾಣ: ರಾಮನವಮಿಗೆ ಆರಂಭ, 2022ಕ್ಕೆ ಪೂರ್ಣ!

Pinterest LinkedIn Tumblr


ಹೊಸದಿಲ್ಲಿ: ಹಿಂದೂಗಳ ಆರಾಧ್ಯ ದೈವ ಶ್ರೀರಾಮಚಂದ್ರನ ಜನ್ಮಸ್ಥಾನ ಅಯೋಧ್ಯೆಯಲ್ಲಿಭವ್ಯ ರಾಮ ಮಂದಿರ ನಿರ್ಮಿಸುವ ಯೋಜನೆಗೆ ಮುಂದಿನ ವರ್ಷದ ಮಕರ ಸಂಕ್ರಾಂತಿಯಂದು ಅಧಿಕೃತ ಚಾಲನೆ ಸಿಗಲಿದೆ.
ಮಕರ ಸಂಕ್ರಾಂತಿಯಂದು ಹೊಸದಾಗಿ ಶಿಲಾನ್ಯಾಸ ನೆರವೇರಿಸುವ ಸಾಧ್ಯತೆಗಳಿವೆ. ಸಂಕ್ರಾಂತಿಯಿಂದ ರಾಮನವಮಿವರೆಗೂ (2020ರ ಏಪ್ರಿಲ್‌ 2) ನಿರ್ಮಾಣದ ಪೂರ್ವ ಸಿದ್ಧತೆಗಳು ನಡೆಯಲಿವೆ. ರಾಮನವಮಿಯಂದು ನಿರ್ಮಾಣ ಕಾಮಗಾರಿ ಆರಂಭಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.

ಸುಪ್ರೀಂ ಕೋರ್ಟ್‌ ನಿರ್ದೇಶನದಂತೆ ಕೇಂದ್ರ ಸರಕಾರ ಮಂದಿರ ನಿರ್ಮಾಣ ಮತ್ತು ನಿರ್ವಹಣೆಗೆ ಮೂರು ತಿಂಗಳೊಳಗೆ ಸೋಮನಾಥ ಮಂದಿರದ ಮಾದರಿಯಲ್ಲಿಟ್ರಸ್ಟ್‌ ರಚಿಸಲಿದ್ದು ಮುಂದಿನ ದಿನಗಳಲ್ಲಿನಿರ್ಮಾಣ ಕಾರ್ಯವನ್ನು ಚುರುಕುಗೊಳಿಸಲಿದೆ. 2022ರ ಹೊತ್ತಿಗೆ ಉತ್ತರ ಪ್ರದೇಶ ವಿಧಾನಸಭೆಗೆ ಚುನಾವಣೆ ನಡೆಯಲಿದ್ದು, ಅಷ್ಟರೊಳಗೆ ಬಹುತೇಕ ನಿರ್ಮಾಣ ಕಾರ್ಯ ಪೂರ್ಣಗೊಳಿಸುವ ಗುರಿಯನ್ನು ಸರಕಾರ ಹೊಂದಿದೆ ಎಂದು ಮೂಲಗಳು ತಿಳಿಸಿವೆ. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರಿಂದಲೂ ಈಗಾಗಲೇ ಇದೇ ರೀತಿಯ ವಿಶ್ವಾಸ ವ್ಯಕ್ತವಾಗಿದೆ.

ಕೇಂದ್ರ ಸರಕಾರವು ಅಯೋಧ್ಯೆ ರಾಮಮಂದಿರ ನಿರ್ಮಾಣ ಟ್ರಸ್ಟ್‌ ರಚನೆ ಸಂಬಂಧದ ಪ್ರಕ್ರಿಯೆಗಳನ್ನು ಚುರುಕುಗೊಳಿಸಿದೆ. ಸಂಸ್ಕೃತಿ ಸಚಿವಾಲಯವು ಸೋಮವಾರ ಕಾನೂನು, ಗೃಹ ಸಚಿವಾಲಯದ ಸಲಹೆ ಕೋರಿದೆ. ನಿದಿಗತ ಅವಧಿಯೊಳಗೆ ಅಂದರೆ ಫೆಬ್ರುವರಿ ಒಳಗಾಗಿ ಟ್ರಸ್ಟ್‌ ಅಸ್ತಿತ್ವಕ್ಕೆ ಬರಬೇಕು ಎನ್ನುವುದು ಸರಕಾರದ ಇರಾದೆಯಾಗಿದೆ.

ವಿಹಿಂಪ ಆಗ್ರಹ: ಶಿಲ್ಪಿ ಚಂದ್ರಕಾಂತ್‌ ಸೋಂಪುರಾ ಅವರ ವಿನ್ಯಾಸದಂತೆಯೇ ರಾಮ ಮಂದಿರ ನಿರ್ಮಾಣವಾಗಬೇಕೆಂದು ವಿಶ್ವ ಹಿಂದೂ ಪರಿಷತ್‌ ಸರಕಾರದ ಮೇಲೆ ಒತ್ತಡ ಹೇರಿದೆ. ವಿಹಿಂಪದ ಹಿಂದಿನ ಮುಖ್ಯಸ್ಥ ಅಶೋಕ್‌ ಸಿಂಘಾಲ್‌ ಅವರು 1989ರಲ್ಲಿಮಂದಿರಕ್ಕೆ ವಿನ್ಯಾಸ ರೂಪಿಸಿಕೊಡುವಂತೆ ಶಿಲ್ಪಿ ಚಂದ್ರಕಾಂತ್‌ ಸೋಂಪುರಾ ಅವರಲ್ಲಿಕೋರಿಕೊಂಡಿದ್ದರು. ಅದೇ ಚಿತ್ರ ಇಂದಿಗೂ ದೇಶದಲ್ಲಿಹರಿದಾಡುತ್ತಿದೆ. ಈ ವಿನ್ಯಾಸದ ಅನುಸಾರವೇ ಮಂದಿರ ನಿರ್ಮಾಣವಾಗಬೇಕು ಎಂದು ವಿಹಿಂಪದ ಕಾರ್ಯಕಾರಿ ಅಧ್ಯಕ್ಷ ಅಲೋಕ್‌ ಕುಮಾರ್‌ ಹೇಳಿದ್ದಾರೆ.

ಎಲ್ಲರಿಂದಲೂ ತೀರ್ಪು ಸ್ವಾಗತ: ಶ್ರೀ ಶ್ರೀ ರವಿಶಂಕರ್‌ ಗುರೂಜಿ
ಶತಮಾನದ ವಾಜ್ಯ ಅಯೋಧ್ಯೆ ಭೂ ವಿವಾದವನ್ನು ಸುಪ್ರೀಂ ಕೋರ್ಟ್‌ ಇತ್ಯರ್ಥಪಡಿಸಿ ನೀಡಿದ ಐತಿಹಾಸಿಕ ತೀರ್ಪನ್ನು ಹಿಂದೂ, ಮುಸ್ಲಿಂ ಹೀಗೆ ಎಲ್ಲಸಮುದಾಯದವರೂ ಸಮಚಿತ್ತ ಭಾವದಿಂದ ಸ್ವೀಕರಿಸಿ ಗೌರವಿಸಿರುವುದು ಸ್ವಾಗತಾರ್ಹ ವಿಚಾರವಾಗಿದೆ ಎಂದು ಆರ್ಟ್‌ ಆಫ್‌ ಲಿವಿಂಗ್‌ ಸಂಸ್ಥಾಪಕ ಶ್ರೀ ಶ್ರೀ ರವಿಶಂಕರ್‌ ಗುರೂಜಿ ಹೇಳಿದ್ದಾರೆ. ದಿಲ್ಲಿಯಲ್ಲಿನಡೆಯುತ್ತಿರುವ 12ನೇ ಅಂತಾರಾಷ್ಟ್ರೀಯ ಮಹಿಳಾ ಉದ್ಯಮಶೀಲತಾ ಚಾಲೆಂಜ್‌ ಅವಾರ್ಡ್ಸ್ ಕಾರ‍್ಯಕ್ರಮದಲ್ಲಿಅವರು ”ಎರಡು ಸಮುದಾಯಗಳ ನಡುವಿನ ದೀರ್ಘ ಕಾಲದ ವ್ಯಾಜ್ಯ ಶಾಂತಿಯುತವಾಗಿ ಇತ್ಯರ್ಥಗೊಂಡಿದೆ. 2003ರಿಂದಲೂ ನಾನು ಇತ್ಯರ್ಥಕ್ಕೆ ಯಾವ ಪರಿಹಾರ ಸೂತ್ರ ಮಂಡಿಸುತ್ತಿದ್ದೆನೋ ಅದೇ ರೀತಿಯಲ್ಲಿಸುಪ್ರೀಂ ತೀರ್ಪು ನೀಡಿದೆ. ಇದರಿಂದ ಎರಡೂ ಸಮುದಾಯಗಳಿಗೆ ನೆಮ್ಮದಿ ಸಿಕ್ಕಿದೆ,” ಎಂದು ಹೇಳಿದ್ದಾರೆ. ಅಯೋಧ್ಯೆ ವಿವಾದ ಇತ್ಯರ್ಥಕ್ಕೆ ಸುಪ್ರೀಂ ಕೋರ್ಟ್‌ ನೇಮಿಸಿದ್ದ ಸಂಧಾನ ಸಮಿತಿ ಸದಸ್ಯರಲ್ಲಿಗುರೂಜಿ ಒಬ್ಬರಾಗಿದ್ದರು.

Comments are closed.