ರಾಷ್ಟ್ರೀಯ

ದೈಹಿಕ ಸಂಬಂಧಕ್ಕೆ ನಿರಾಕರಿಸಿದ 8ನೇ ತರಗತಿ ವಿದ್ಯಾರ್ಥಿನಿಯನ್ನು ಗುಂಡಿಟ್ಟು ಹತ್ಯೆ ಮಾಡಿದ ಶಿಕ್ಷಕ!

Pinterest LinkedIn Tumblr


ಲಕ್ನೋ: ದೈಹಿಕ ಸಂಬಂಧವನ್ನು ನಿರಾಕರಿಸಿದ್ದರಿಂದ ಎಂಟನೇ ತರಗತಿ ವಿದ್ಯಾರ್ಥಿನಿಯನ್ನು ಶಿಕ್ಷಕನೇ ಗುಂಡಿಟ್ಟು ಹತ್ಯೆಗೈದ ಘಟನೆ ಉತ್ತರಪ್ರದೇಶದ ದೆಹಾಟ್ ಜಿಲ್ಲೆಯ ಕಾನ್ಪುರದಲ್ಲಿ ನಡೆದಿದೆ.

ಶಾಲೆಯಿಂದ ಸಂಜೆ ಮನೆಗೆ ಹೋಗುತ್ತಿದ್ದ ವೇಳೆ ವಿದ್ಯಾರ್ಥಿನಿ ಮೇಲೆ ಶಿಕ್ಷಕನೇ ಮೂರು ಸುತ್ತು ಗುಂಡು ಹಾರಿಸಿದ್ದ. ಒಂದು ಗುಂಡು ಬಾಲಕಿಯ ಕುತ್ತಿಗೆಯನ್ನು ಸೀಳಿ ಹಾಕಿತ್ತು. ಇದರಿಂದ ಬಾಲಕಿ ರಕ್ತಸ್ರಾವದಿಂದ ನೆಲಕ್ಕೊರಗಿದ್ದಳು. ಕೂಡಲೇ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಆಕೆ ಗುರುವಾರ ರಾತ್ರಿ ಸಾವನ್ನಪ್ಪಿರುವುದಾಗಿ ವರದಿ ತಿಳಿಸಿದೆ.

ಆರೋಪಿಯನ್ನು ಶಿಕ್ಷಕ ಶೈಲೇಂದ್ರ ರಾಜ್ ಪುತ್ ಎಂದು ಗುರುತಿಸಲಾಗಿದೆ. ದೀರ್ಘಕಾಲದಿಂದ ಶಿಕ್ಷಕ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದು, ಲೈಂಗಿಕ ಬಯಕೆ ಈಡೇರಿಸಲು ಒತ್ತಾಯಿಸುತ್ತಿದ್ದ. ಆದರೆ ವಿದ್ಯಾರ್ಥಿನಿ ಅದನ್ನು ನಿರಾಕರಿಸಿದ್ದಳು. ಅಲ್ಲದೇ ಈ ಬಗ್ಗೆ ದೂರು ನೀಡಿದ್ದರಿಂದ ಶಿಕ್ಷಕನನ್ನು ಮೂರು ತಿಂಗಳ ಕಾಲ ಶಾಲೆಯಿಂದ ಅಮಾನತುಗೊಳಿಸಿದ್ದರು.

ತನ್ನ ವಿರುದ್ಧ ದೂರು ನೀಡಿ ಅಮಾನತುಗೊಳಿಸಿದ್ದಕ್ಕೆ ಆಕ್ರೋಶಗೊಂಡಿದ್ದ ಶಿಕ್ಷಕ ವಿದ್ಯಾರ್ಥಿನಿಯನ್ನು ಗುಂಡಿಟ್ಟು ಹತ್ಯೆಗೈದಿದ್ದ. ಇದರಿಂದ ಆಕ್ರೋಶಗೊಂಡ ಗ್ರಾಮಸ್ಥರು ರಸ್ತೆಯನ್ನು ತಡೆದು ತೀವ್ರ ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದ್ದರು.

ಶಿಕ್ಷಕನ ವಿರುದ್ಧ ಎಫ್ ಐಆರ್ ದಾಖಲಿಸಲಾಗಿದ್ದು, ತಲೆಮರೆಸಿಕೊಂಡಿರುವ ಶಿಕ್ಷಕನ ಪತ್ತೆಗೆ ಶೋಧ ಕಾರ್ಯ ನಡೆಸಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

Comments are closed.