ಪಂಜಾಬ್ ಮಹಾರಾಷ್ಟ್ರ ಕೋಆಪರೇಟಿವ್ ಬ್ಯಾಂಕ್ ಅಥವಾ ಪಿಎಂಸಿ ಬ್ಯಾಂಕ್ ಈಗ್ಗೆ ಕೆಲವಾರು ದಿನಗಳಿಂದ ಜೋರು ಸದ್ದು ಮಾಡುತ್ತಿದೆ. ಆ ಸಹಕಾರಿ ಬ್ಯಾಂಕಲ್ಲಿ ಠೇವಣಿ ಇಟ್ಟಿದ್ದ ಇಬ್ಬರು ವ್ಯಕ್ತಿಗಳು ನಿಧನರಾಗಿರುವ ಶಾಕಿಂಗ್ ನ್ಯೂಸ್ ಕೂಡ ಕೇಳಿಬಂದಿದೆ. ಬ್ಯಾಂಕಿಂಗ್ ವಲಯದಲ್ಲಿ ನಡೆದಿರುವ ಹಲವು ಹಗರಣಗಳ ಪಟ್ಟಿಗೆ ಪಿಎಂಸಿಯೂ ಸೇರ್ಪಡೆಯಾಗಿದೆ. 6 ಸಾವಿರ ಕೋಟಿಗೂ ಅಧಿಕ ಹಣದ ಹಗರಣ ಇದಾಗಿದೆ. ಪಿಎಂಸಿ ಬ್ಯಾಂಕ್ನ ಕೋಟ್ಯಂತರ ಹಣವನ್ನು ಸಂಚು ರೂಪಿಸಿ ಲಪಟಾಯಿಸಿದ ಹೆಚ್ಡಿಐಎಲ್ ಬ್ಯಾಂಕ್ನ ಇಬ್ಬರು ವ್ಯಕ್ತಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಹೆಚ್ಡಿಐಎಲ್ ಕಂಪನಿಗೆ ಸೇರಿದ ಆಸ್ತಿಗಳನ್ನು ಗುರುತಿಸಿ ಮುಟ್ಟುಗೋಲು ಹಾಕಿಕೊಳ್ಳುವ ಪ್ರಯತ್ನ ನಡೆದಿದೆ.
ಹಗರಣಗಳ ಮೇಲೆ ಹಗರಣ ಕಾಣುತ್ತಿರುವ ಬ್ಯಾಂಕಿಂಗ್ ವಲಯದ ವಸ್ತು ಸ್ಥಿತಿಗೆ ಪಿಎಂಸಿ ಕೈಗನ್ನಡಿ ಹಿಡಿದಿದೆ. ಕೆಲವಾರು ವರ್ಷಗಳಿಂದ ಎನ್ಪಿಎ ಅಥವಾ ಅನುತ್ಪಾದಕ ಸಾಲಗಳ ಪ್ರಮಾಣ ತೀವ್ರತರವಾಗಿ ಏರುತ್ತಿದೆ. ಪಿಎಂಸಿ ಬ್ಯಾಂಕ್ ನೀಡಿದ ಶೇ. 70ಕ್ಕಿಂತಲೂ ಹೆಚ್ಚು ಸಾಲ ಎನ್ಪಿಎ ಆಗಿದೆ. ಇದು ಸಾವಿರಾರು ಬ್ಯಾಂಕ್ ಗ್ರಾಹಕರಿಗೆ ಬರಸಿಡಿಲಿನಂತೆ ಬಡಿದಿದೆ. ಪಿಎಂಸಿ ಬ್ಯಾಂಕ್ ಹಾಗೂ ಅದರ ಸುತ್ತಲಿನ ವಿವಾದದ ಬಗ್ಗೆ ಒಂದು ಸಂಕ್ಷಿಪ್ತ ನೋಟ ಇಲ್ಲಿದೆ:
ನಂಬರ್ ಒನ್ ಸಹಕಾರಿ ಬ್ಯಾಂಕ್:
ಪಂಜಾಬ್ ಅಂಡ್ ಮಹಾರಾಷ್ಟ್ರ ಕೋ ಆಪರೇಟಿವ್ ಬ್ಯಾಂಕ್ 1984ರ ಫೆ. 13ರಂದು ಪ್ರಾರಂಭವಾದಾಗ ಒಂದೇ ಬ್ರ್ಯಾಂಚ್ ಇದ್ದದ್ದು. 35 ವರ್ಷಗಳಲ್ಲಿ ಅದು ಕರ್ನಾಟಕ ಸೇರಿದಂತೆ ಏಳು ರಾಜ್ಯಗಳಲ್ಲಿ 137 ಬ್ರ್ಯಾಂಚ್ಗಳನ್ನ ಸ್ಥಾಪಿಸುವ ಮಟ್ಟಕ್ಕೆ ಬೆಳೆದಿದೆ. 1,800ಕ್ಕೂ ಹೆಚ್ಚು ಜನರಿಗೆ ಉದ್ಯೋಗ ನೀಡಿದೆ. ಬರೋಬ್ಬರಿ 11 ಸಾವಿರ ಕೋಟಿ ರೂ ಠೇವಣಿಗಳನ್ನ ಗ್ರಾಹಕರಿಂದ ಶೇಖರಿಸಿದೆ. ಭಾರತದ ಸಹಕಾರಿ ಬ್ಯಾಂಕುಗಳಲ್ಲೇ ಪಿಎಂಸಿ ನಂಬರ್ ಒನ್ ಎನಿಸಿದೆ. 19 ವರ್ಷಗಳ ಹಿಂದ ಆರ್ಬಿಐ ಈ ಸಹಕಾರಿ ಬ್ಯಾಂಕನ್ನ ಶೆಡ್ಯೂಲ್ಡ್ ಕಮರ್ಷಿಯಲ್ ಪಟ್ಟಿಗೆ ಸೇರ್ಪಡೆ ಮಾಡಿತು.
ಹಗರಣ ಬೆಳಕಿಗೆ ತಂದ ನಾರಿಮಣಿಯರು:
ಪಿಎಂಸಿ ಬ್ಯಾಂಕ್ನ ಸಾಲ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಕೆಲ ಮಹಿಳಾ ಉದ್ಯೋಗಿಗಳಿಗೆ ಅದೇನೋ ಅನುಮಾನ ಬಂದಿದೆ. ಲೋನ್ ಅಕೌಂಟ್ ಹೆಸರಲ್ಲಿ ಗುಪ್ತ ಖಾತೆಗಳಿವೆ. ಇತ್ತ ಗಮನ ಹರಿಸಿ ಎಂದು ಈ ಮಹಿಳೆಯರು ಆರ್ಬಿಐಗೆ ತಿಳಿಸಿದ್ದಾರೆ. ಆಗ ಘೋಸ್ಟ್ ಅಕೌಂಟ್ಗಳ ಕರ್ಮಕಾಂಡ ಮತ್ತು ಸಾವಿರಾರು ಕೋಟಿ ರೂ ವಂಚನೆಯ ಪ್ರಕರಣಗಳು ಬೆಳಕಿಗೆ ಬಂದವು.
ರಹಸ್ಯ ಖಾತೆಗಳ ರಹಸ್ಯ:
ರಹಸ್ಯ ಖಾತೆಗಳ ವಿಚಾರ ಹೊರಬರುತ್ತಲೇ ಕಂಗಾಲಾದ ಪಿಎಂಸಿ ಗ್ರಾಹಕರು ತಮ್ಮ ಖಾತೆಯಲ್ಲಿದ್ದ ಹಣವನ್ನು ಹಿಂಪಡೆಯಲು ಮುಗಿಬಿದ್ದರು. ಆಗ ಹಣ ಹಿಂಪಡೆಯುವ ಪ್ರಮಾಣವನ್ನು 1 ಸಾವಿರಕ್ಕೆ ಮಿತಿಗೊಳಿಸಿದಾಗ ಗ್ರಾಹಕರು ಕಂಗಾಲಾದರು. ಈಗ ನಿರ್ಮಲಾ ಸೀತಾರಾಮನ್ ಮಧ್ಯಪ್ರವೇಶದಿಂದ ಹಣ ಹಿಂಪಡೆಯುವ ಮಿತಿ 40 ಸಾವಿರಕ್ಕೆ ಏರಿದೆ.
ಆದರೆ, ಹಗರಣದ ಮೂಲವಾಗಿರುವುದು ಹೆಚ್ಡಿಐಎಲ್ (ಹೌಸಿಂಗ್ ಡೆವಲಪ್ಮೆಂಟ್ ಅಂಡ್ ಇನ್ಫ್ರಾಸ್ಟ್ರಕ್ಚರ್ ಲಿ) ಸಂಸ್ಥೆ ಹಾಗೂ ಅದರ ಅಂಗ ಸಂಸ್ಥೆಗಳು. ಪಿಎಂಸಿ ಬ್ಯಾಂಕ್ನ ಕೆಲ ಉನ್ನತ ಅಧಿಕಾರಿಗಳೊಂದಿಗೆ ಸೇರಿ ಸಾವಿರಾರು ಕೋಟಿ ಲಪಟಾಯಿಸಿದ್ದಾರೆ. ಅದಕ್ಕಾಗಿ ಬರೋಬ್ಬರಿ 21 ಸಾವಿರಕ್ಕೂ ಹೆಚ್ಚು ಬೋಗಸ್ ಖಾತೆಗಳನ್ನ ಸೃಷ್ಟಿಸಿದ್ದಾರೆ. ಹೆಚ್ಡಿಐಎಲ್ ಗ್ರೂಪ್ ಸಂಸ್ಥೆಗಳ 44 ಲೋನ್ ಅಕೌಂಟ್ಗಳನ್ನ ಮುಚ್ಚಿಹಾಕಲು ಈ ರಹಸ್ಯ ಬೋಗಸ್ ಖಾತೆಗಳನ್ನ ಬಳಕೆ ಮಾಡಲಾಗಿದೆ. ಈ ಮೂಲಕ 6 ಸಾವಿರ ಕೋಟಿ ರೂಪಾಯಿಗೂ ಅಧಿಕ ಹಣವನ್ನು ಕಳ್ಳ ಮಾರ್ಗದಲ್ಲಿ ಬ್ಯಾಂಕ್ನಿಂದ ವರ್ಗ ಮಾಡಲಾಗಿದೆ. ಹೆಚ್ಡಿಐಎಲ್ನ ವಿವಿಧ ಲೋನ್ ಅಕೌಂಟ್ಗಳ ಹೆಸರಲ್ಲಿ ಬ್ಯಾಂಕ್ನ ಓವರ್ಡ್ರಾಫ್ಟ್ ಸೌಲಭ್ಯ ಬಳಸಿ ಹಣವನ್ನು ವಿತ್ಡ್ರಾ ಮಾಡಿಕೊಳ್ಳಲಾಗಿದೆ.
ಹೆಚ್ಡಿಐಎಲ್ನ ಲೋನ್ ಅಕೌಂಟ್ಗಳನ್ನ ಮುಚ್ಚಿಡಲು ಪಿಎಂಸಿ ಬ್ಯಾಂಕ್ನ ಸಾಫ್ಟ್ವೇರನ್ನೇ ತಿರುಚಲಾಗಿದೆ. ಆ ಸಂಸ್ಥೆಯ ಪ್ರೊಮೋಟರ್ಸ್ಗೆ ಈ ರಹಸ್ಯ ಖಾತೆಗಳನ್ನ ಗೋಪ್ಯವಾಗಿ ನಿರ್ವಹಿಸುವ ಅವಕಾಶ ಒದಗಿಸಲಾಗಿದೆ.
ಈಗ ಜಾರಿ ನಿರ್ದೇಶನಾಲಯದವರು ಹೆಚ್ಡಿಐಎಲ್ ಸಂಸ್ಥೆಯ ವ್ಯವಹಾರವನ್ನೆಲ್ಲಾ ಜಾಲಾಡುತ್ತಿದ್ದಾರೆ. ಅದರ ಒಡೆತನದ ಆಸ್ತಿಗಳನ್ನ ಮುಟ್ಟುಗೋಲು ಮಾಡಿಕೊಳ್ಳುತ್ತಿದ್ಧಾರೆ. ಈವರೆಗೂ ಸಿಕ್ಕಿರುವ ಅದರ ಆಸ್ತಿಯ ಮೌಲ್ಯ 3,500 ಕೋಟಿ ರೂಪಾಯಿಗೂ ಅಧಿಕ ಎಂದು ಹೇಳಲಾಗುತ್ತಿದೆ. ಹೆಚ್ಡಿಐಎಲ್ನ ಮುಖ್ಯಸ್ಥ ರಾಕೇಶ್ ವಾಧವಾನ್ ಮತ್ತವರ ಮಗ ಸಾರಂಗ್ ವಾಧವಾನ್ ಅವರನ್ನು ಮುಂಬಯ ಪೊಲೀಸರು ಬಂಧಿಸಿದ್ದಾರೆ.
Comments are closed.