ನವದೆಹಲಿ: ಬಹುನಿರೀಕ್ಷಿತ ಚಂದ್ರಯಾನ-2 ಕೊನೆ ಕ್ಷಣದಲ್ಲಿ ವಿಫಲವಾದರೂ ಕೂಡ ಭಾರತೀಯ ಬಾಹ್ಯಾಕಾಶ ಸಂಶೋಧನ ಸಂಸ್ಥೆಯ(ಇಸ್ರೋ) ಪ್ರಯತ್ನಕ್ಕೆ ಇಡೀ ದೇಶವೇ ಬೆಂಬಲವಾಗಿ ನಿಂತಿದೆ. ಚಂದ್ರನ ದಕ್ಷಿಣ ಧ್ರುವದಲ್ಲಿ ಚಂದ್ರಯಾನ-2 ಹೊತ್ತೊಯ್ದಿದ್ದ ವಿಕ್ರಂ ಲ್ಯಾಂಡರ್ ಅನ್ನು ಸಾಫ್ಟ್ ಲ್ಯಾಂಡಿಂಗ್ ಮಾಡುವ ವೇಳೆ ಚಂದ್ರನಿಂದ 2.1 ಕಿ.ಮೀ. ದೂರದಲ್ಲಿದ್ದಾಗ ಸಂಪರ್ಕ ಕಡಿದುಕೊಂಡಿದೆ ಎಂದು ಹೇಳಲಾಗಿತ್ತು. ಆದರೆ, ಚಂದ್ರನಿಂದ 400 ಮೀಟರ್ ಅಂತರದಲ್ಲಿದ್ದಾಗ ಮಾತ್ರ ವಿಕ್ರಂ ಸಂಪರ್ಕಕ್ಕೆ ಸಿಕ್ಕಿಲ್ಲ ಎಂದು ಇಸ್ರೋ ಬುಧವಾರ ಖಚಿತಪಡಿಸಿದೆ.
ವಿಕ್ರಂ ಲ್ಯಾಂಡರ್ನೊಂದಿಗಿನ ಸಂಪರ್ಕವನ್ನು ಕಳೆದುಕೊಂಡಿರುವ ಬಗ್ಗೆ ಇಸ್ರೋ ಇದೀಗ ಬಿಡುಗಡೆ ಮಾಡಿರುವ ಹೇಳಿಕೆ ಗೊಂದಲ ಸೃಷ್ಟಿ ಮಾಡಿದ್ದರೂ, ವಿಕ್ರಂ ಲ್ಯಾಂಡಿಂಗ್ ಗ್ರಾಫ್ ಅನ್ನು ಇಸ್ರೋ ಬಿಡುಗಡೆ ಮಾಡಿರುವುದು ಗೊಂದಲಕ್ಕೆ ತೆರೆ ಎಳೆದಿದೆ. ಇದರೊಂದಿಗೆ ವಿಕ್ರಂ ಲ್ಯಾಂಡರ್ ಜತೆ ಸಂಪರ್ಕ ಸಾಧಿಸುವ ಪ್ರಯತ್ನವನ್ನು ಇಸ್ರೋ ಮುಂದುವರಿಸಿದೆ. ಆರ್ಬಿಟರ್ ರವಾನಿಸಿದ ಚಂದ್ರನ ಚಿತ್ರದಲ್ಲಿ ವಿಕ್ರಂ ಇರುವ ಗುರುತು ಪತ್ತೆಯಾಗಿತ್ತು.
ಚಂದ್ರನ ಸುತ್ತ ಸುತ್ತುತ್ತಿದ್ದ ವಿಕ್ರಂ ಲ್ಯಾಂಡರ್ 30 ಕಿ.ಮೀ. ಎತ್ತರದಿಂದ ಚಂದ್ರನ ಮೇಲೆ ಇಳಿಯುವ ಪ್ರಕ್ರಿಯೆಯನ್ನು ಶನಿವಾರ ಬೆಳಗ್ಗೆ 1.40ಕ್ಕೆ ಆರಂಭಿಸಲಾಗಿತ್ತು. ಹಂತ ಹಂತವಾಗಿ ವೇಗವನ್ನು ಕಡಿಮೆ ಮಾಡಿಕೊಳ್ಳುತ್ತಾ ವಿಕ್ರಂ ಲ್ಯಾಂಡರ್ 1.55 ಕ್ಕೆ ಚಂದ್ರನ ಮೇಲ್ಮೈ ಮೇಲೆ ಸುರಕ್ಷಿತವಾಗಿ ಲ್ಯಾಂಡ್ ಆಗಬೇಕಿತ್ತು. ಆದರೆ 2.1 ಕಿ.ಮೀ. ಎತ್ತರದಲ್ಲಿ ಲ್ಯಾಂಡರ್ನಿಂದ ಸಿಗ್ನಲ್ ಕಡಿತಗೊಂಡಿತ್ತು ಎಂದು ಸಂಪರ್ಕ ಕಡಿತಗೊಂಡ ಬೆನ್ನಲ್ಲೇ ಇಸ್ರೋ ಮಾಹಿತಿ ನೀಡಿತ್ತು.
Comments are closed.