
ಹೈದರಾಬಾದ್: 73ನೇ ಸ್ವಾತಂತ್ರ್ಯೋತ್ಸವದಂದು ಉತ್ತಮ ಪೇದೆ (ಬೆಸ್ಟ್ ಕಾನ್ಸ್ಟೇಬಲ್) ಪ್ರಶಸ್ತಿ ಪಡೆದಿದ್ದ ತೆಲಂಗಾಣದ ಪೇದೆಯೊಬ್ಬ ಮರುದಿನ 17 ಸಾವಿರ ರೂ. ಲಂಚ ಪಡೆಯುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾನೆ.

ತೆಲಂಗಾಣದ ಮಹಬೂಬನಗರದ ಜಿಲ್ಲೆಯ ಐಟಿ ಟೌನ್ ಪೊಲೀಸ್ ಠಾಣೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪೇದೆ ಪಲ್ಲೆ ತಿರುಪತಿ ರೆಡ್ಡಿ ತಮ್ಮ ಕಾರ್ಯದಲ್ಲಿ ತೋರಿದ ಶ್ರದ್ಧೆ ಮತ್ತು ಕಠಿಣ ಪರಿಶ್ರಮವನ್ನು ಗುರುತಿಸಿ ಆಗಸ್ಟ್ 15 ರಂದು ಉತ್ತಮ ಪೇದೆ ಪ್ರಶಸ್ತಿ ನೀಡಲಾಗಿತ್ತು. ತೆಲಂಗಾಣದ ಸಚಿವ ಶ್ರೀನಿವಾಸ್ ಗೌಡ್ ಪ್ರಶಸ್ತಿ ಪ್ರದಾನ ಮಾಡಿದ್ದರು.
ಪ್ರಶಸ್ತಿ ಸ್ವೀಕರಿಸಿದ ಮರುದಿನ ಆ. 16 ರಂದು ತಿರುಪತಿ ರೆಡ್ಡಿ ವ್ಯಕ್ತಿಯೊಬ್ಬರಿಂದ 17 ಸಾವಿರ ರೂ. ಲಂಚ ಸ್ವೀಕರಿಸುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾನೆ. ಲಂಚ ನೀಡುವಂತೆ ರಮೇಶ್ ಎಂಬುವರಿಗೆ ತಿರುಪತಿ ರೆಡ್ಡಿ ಒಂದು ವರ್ಷದಿಂದ ಕಿರುಕುಳ ನೀಡುತ್ತಿದ್ದ.
ರೆಡ್ಡಿಯ ಕಿರುಕುಳದಿಂದ ಬೇಸತ್ತ ರಮೇಶ್ ತೆಲಂಗಾಣ ಎಸಿಬಿಗೆ ದೂರು ನೀಡಿದ್ದರು. ದೂರು ಆಧರಿಸಿ ಕಾರ್ಯಾಚರಣೆ ನಡೆಸಿದ ಎಸಿಬಿ ತಂಡ ತಿರುಪತಿ ರೆಡ್ಡಿಯನ್ನು ಶುಕ್ರವಾರ ಸಂಜೆ 5 ಗಂಟೆಗೆ ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ. ರೆಡ್ಡಿಯನ್ನು ಬಂಧಿಸಲಾಗಿದ್ದು, ವಿಶೇಷ ಕೋರ್ಟ್ ಸಮ್ಮುಖದಲ್ಲಿ ಹಾಜರುಪಡಿಸಲಾಗಿದೆ.
Comments are closed.