ನವದೆಹಲಿ: ತಮ್ಮನ್ನು ಚೌಕಿದಾರ್ ಎಂದು ಕರೆದುಕೊಳ್ಳುವ ಪ್ರಧಾನಮಂತ್ರಿ ನರೇಂದ್ರ ಮೋದಿ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿರುವ ಕಾಂಗ್ರೆಸ್ ಯುವ ನಾಯಕ ಹಾರ್ದಿಕ್ ಪಟೇಲ್, ನಮಗೆ ಕಾವಲುಗಾರ ಬೇಕೆಂದರೆ ನೇಪಾಳಕ್ಕೆ ಹೋಗಿ ಕರೆತರುತ್ತೇವೆ. ಆದರೆ, ನಮಗೆ ಬೇಕಿರುವುದು ದೇಶವನ್ನು ಸಮರ್ಥವಾಗಿ ಮುನ್ನಡೆಸುವ ಪ್ರಧಾನಮಂತ್ರಿಯೇ ಹೊರತು ಕಾವಲುಗಾರನಲ್ಲ ಎಂದು ಹೇಳಿದ್ದಾರೆ.
ಇಂದು ಗುಜರಾತ್ನ ವೀರಾಂಗಮ್ನಲ್ಲಿ ಮತ ಚಲಾಯಿಸಿದ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಹಾರ್ದಿಕ್ ಪಟೇಲ್, ನಮ್ಮ ದೇಶವನ್ನು ಆರ್ಥಿಕ, ಯುವಜನತೆ, ಶಿಕ್ಷಣ ಮತ್ತು ಸೈನಿಕರನ್ನು ಪ್ರಬಲಗೊಳಿಸುವ ಪ್ರಧಾನಮಂತ್ರಿ ಬೇಕಾಗಿದ್ದಾರೆ ಎಂದು ಹಾರ್ದಿಕ್ ಪಟೇಲ್ ಹೇಳಿದ್ದಾರೆ. ಅವರ ಈ ಹೇಳಿಕೆಗೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ವಿರೋಧಗಳು ವ್ಯಕ್ತವಾಗಿವೆ.
ಭಾರತದಲ್ಲಿರುವ ಗೂರ್ಖ ಅಥವಾ ಕಾವಲುದಾರರಲ್ಲಿ ಬಹುತೇಕರು ನೇಪಾಳದವರೇ ಆಗಿರುವುದರಿಂದ ಹಾರ್ದಿಕ್ ಪಟೇಲ್ ನೀಡಿರುವ ಈ ಹೇಳಿಕೆ ಇದೀಗ ತೀವ್ರ ಚರ್ಚೆಗೊಳಗಾಗಿದೆ. ಹಾರ್ದಿಕ್ ಪಟೇಲ್ ಈ ರೀತಿ ವಿವಾದಾತ್ಮಕ ಹೇಳಿಕೆ ನೀಡುತ್ತಿರುವುದು ಇದೇ ಮೊದಲೇನಲ್ಲ. ಕಳೆದ ವಾರವಷ್ಟೆ ಸುರೇಂದ್ರನಗರದಲ್ಲಿ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡಿದ್ದ ವೇಳೆ ಭಾಷಣ ಮಾಡುತ್ತಿದ್ದಾಗ ವೇದಿಕೆಯಲ್ಲೇ ಕಾರ್ಯಕರ್ತನೊಬ್ಬ ಹಾರ್ದಿಕ್ ಪಟೇಲ್ ಕೆನ್ನೆಗೆ ಬಾರಿಸಿದ್ದ. ಆ ವಿಡಿಯೋ ಭಾರೀ ವೈರಲ್ ಆಗಿತ್ತು.
ಪಾತಿದಾರ್ ಮೀಸಲಾತಿ ಹೋರಾಟದ ಮುಂದಾಳತ್ವ ವಹಿಸಿದ್ದ ಹಾರ್ದಿಕ್ ಪಟೇಲ್ ಆ ಕಾರಣದಿಂದಾಗಿಯೇ ದೇಶದೆಲ್ಲೆಡೆ ಗುರುತಿಸಿಕೊಂಡಿದ್ದರು. ಕಳೆದ ತಿಂಗಳು ಕಾಂಗ್ರೆಸ್ ಸೇರಿದ್ದರು. ಇಂದಿಗೆ ಗುಜರಾತ್ನ 26 ಲೋಕಸಭಾ ಕ್ಷೇತ್ರಗಳ ಚುನಾವಣೆಯೂ ಮುಗಿದಿದೆ.
Comments are closed.