
ಲಕ್ನೋ: ಭೀಮಸೇನೆ ಮುಖ್ಯಸ್ಥ ಚಂದ್ರಶೇಖರ್ ಆಜಾದ್ ಉತ್ತರಪ್ರದೇಶದಲ್ಲಿ ಕಾಂಗ್ರೆಸ್ಗೆ ಬೆಂಬಲ ಘೋಷಿಸಿದ್ಧಾರೆ. ಶಹರಾನ್ಪುರ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ವಿರುದ್ಧ ಕಣಕ್ಕಿಳಿದಿರುವ ಕಾಂಗ್ರೆಸ್ ಅಭ್ಯರ್ಥಿ ಇಮ್ರಾನ್ ಮಸೂದ್ಗೆ ಮತ ಹಾಕುವಂತೆ ಆಜಾದ್ ಕರೆ ನೀಡಿದ್ದಾರೆ. ಈ ಕ್ಷೇತ್ರದಲ್ಲಿ ‘ಭೀಮ್ ಆರ್ಮಿ’ ಪರವಾಗಿ ಒಲವು ಹೊಂದಿರುವ ದಲಿತರು ಸಾಕಷ್ಟು ಸಂಖ್ಯೆಯಲ್ಲಿದ್ಧಾರೆ. ಹೀಗಾಗಿ ಆಜಾದ್ ಕಾಂಗ್ರೆಸ್ಗೆ ನೀಡಿರುವ ಬೆಂಬಲದಿಂದ ಎಸ್ಪಿ-ಬಿಎಸ್ಪಿ ಮೈತ್ರಿಗೆ ಭಾರೀ ಹಿನ್ನಡೆಯಾಗಿದೆ ಎಂದು ಹೇಳಲಾಗುತ್ತಿದೆ.
ಉತ್ತರಪ್ರದೇಶದ ಪಶ್ಚಿಮ ಭಾಗಕ್ಕೆ ಸೇರಿರುವ ಲೋಕಸಭಾ ಕ್ಷೇತ್ರ ಶಹರಾನ್ಪುರ. ಈ ಭಾಗದಲ್ಲಿ ಚಂದ್ರಶೇಖರ್ ಆಜಾದ್ ಪರವಾಗಿ ಕೆಲಸ ಮಾಡುತ್ತಿರುವ ದಲಿತರ ಸಂಖ್ಯೆ ಗಣನೀಯವಾಗಿದೆ. ಹಾಗಾಗಿ ಆಜಾದ್ ಕರೆ ಇಲ್ಲಿನ ಹಾಲಿ ಬಿಜೆಪಿ ಸಂಸದ ರಾಘವ್ ಲಖನ್ಪಾಲ್ ಎದುರಾಳಿಯಾಗಿರುವ ಬಿಎಸ್ಪಿ-ಎಸ್ಪಿ ಮೈತ್ರಿ ಅಭ್ಯರ್ಥಿ ಫೈಜುಲ್ ರೆಹ್ಮಾನ್ ಮೇಲೆ ತುಸು ಹೆಚ್ಚೇ ಪರಿಣಾಮ ಬೀರಲಿದೆ. ಮತದಾರ ಆಜಾದ್ ಕರೆಗೆ ಓಗೊಟ್ಟು ಕಾಂಗ್ರೆಸ್ ಬೆಂಬಲಕ್ಕೆ ನಿಲ್ಲಬಹುದು ಎನ್ನಲಾಗುತ್ತಿದೆ.
ಇತ್ತೀಚೆಗಷ್ಟೇ ಒಂದೂವರೆ ವರ್ಷದಿಂದ ಸೆರೆಮನೆ ವಾಸದಲಿದ್ದ ದಲಿತ ಹೋರಾಟಗಾರ ಚಂದ್ರಶೇಖರ್ ಆಜಾದ್ ಶಹರಾನ್ಪುರ ಜೈಲಿನಿಂದ ಬಿಡುಗಡೆಯಾಗಿದ್ದರು. ದಲಿತರ ಹೋರಾಟ ತೀವ್ರಗೊಳ್ಳುತ್ತಿದ್ದಂತೆಯೇ ಎಚ್ಚೆತ್ತ ಉತ್ತರಪ್ರದೇಶದ ಬಿಜೆಪಿ ಸರ್ಕಾರ ಆಜಾದ್ರನ್ನು ಬಿಡುಗಡೆ ಮಾಡಿತ್ತು. ಅಲ್ಲದೇ ಚಂದ್ರಶೇಖರ್ನನ್ನು ನೂರಾರು ಜನ ಹೋರಾಟಗಾರರು ಭರ್ಜರಿಯಾಗಿ ಸ್ವಾಗತಿಸಿದ್ದಾರೆ. ಇದರಿಂದ ಮುಂದೆ ರಾಜ್ಯದಲ್ಲಿ ಮಾಯಾವತಿ ಅವರ ವರ್ಚಸ್ಸು ಕಡಿಮೆಯಾಗಲಿದೆ ಎಂಬ ಚರ್ಚೆ ನಡೆಯುತ್ತಿತ್ತು.
ಈ ಬೆನ್ನಲ್ಲೇ ಆಜಾದ್ ಕೂಡ ಬಹಿರಂಗವಾಗಿಯೇ ಬಿಎಸ್ಪಿ ವಿರುದ್ಧ ಕೆಂಡಕಾರಿದ್ದರು. ಇದರಿಂದ ಬೇಸತ್ತ ಮಾಜಿ ಸಿಎಂ ಮಾಯಾವತಿಯವರು ಆಜಾದ್ ‘ಬಿಜೆಪಿಯ ಏಜೆಂಟ್, ದಲಿತರ ಮತಗಳನ್ನು ಒಡೆಯುವುದೇ ಅವರ ಉದ್ದೇಶ ಎಂದಿದ್ದರು. ಇದೀಗ ಬಿಎಸ್ಪಿ ಮುಖ್ಯಸ್ಥೆ ಹೇಳಿಕೆಯಿಂದ ಕೆರಳಿರುವ ಆಜಾದ್ ಹೀಗೆ ಕಾಂಗ್ರೆಸ್ ಬೆನ್ನಿಗೆ ನಿಂತಿದ್ದಾರೆ. ತಮ್ಮ ಚಿತ್ರ ಹಿಡಿದು ರ್ಯಾಲಿ ನಡೆಸಿದ ದಲಿತರ ಮೇಲೆ ಎಸ್ಪಿ-ಬಿಎಸ್ಪಿ ಕಾರ್ಯಕರ್ತರು ಹಲ್ಲೆ ನಡೆಸಿದ್ದಾರೆ ಎಂದು ಆಜಾದ್ ಆರೋಪಿಸಿ, ಈ ರೀತಿ ನಿರ್ಧಾರ ತಾಳಿದ್ಧಾರೆ.
ಇನ್ನು ಒಂದು ವಾರದ ಹಿಂದೆಯಷ್ಟೇ ಆಜಾದ್ ವಾರಾಣಸಿಯಿಂದ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಯಾವುದೇ ಸೂಕ್ತ ಅಭ್ಯರ್ಥಿ ಇಲ್ಲದೇ ಹೋದಲ್ಲಿ ತಾವೇ ಕಣಕ್ಕಿಳಿಯುವುದಾಗಿ ಘೋಷಿಸಿದ್ದರು. ಮೋದಿ ಸೋಲಿಸುವುದೇ ನನ್ನ ಗುರಿ ಎಂದಿದ್ದ ಆಜಾದ್ ನಡೆಯಿಂದ ಎಸ್ಪಿ-ಬಿಎಸ್ಪಿ ಮೈತ್ರಿಗೆ ರಾಜ್ಯಾದ್ಯಂತ ತೊಡಕಾಗುವ ಸಾಧ್ಯತೆ ಇದೆ ಎನ್ನುತ್ತಿದ್ದರು ರಾಜಕೀಯ ತಜ್ಙರು.
ಜತೆಗೆ ಈ ಹಿಂದೆ ಚಂದ್ರಶೇಖರ್ ಆಜಾದ್ನನ್ನು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿಯವರು ಭೇಟಿ ಮಾಡಿದ್ದರು. ಈಗಾಗಲೇ ಸಕ್ರಿಯ ರಾಜಕಾರಣಕ್ಕೆ ಧುಮುಕಿರುವ ಪ್ರಿಯಾಂಕಾ ಗಾಂಧಿ ಗಂಭೀರ ಹೆಜ್ಜೆಯೊಂದನ್ನು ಮುಂದೆ ಇರಿಸಿದ್ದಾರೆ ಎನ್ನಲಾಗಿತ್ತು. ಉತ್ತರ ಪ್ರದೇಶದ ಮೀರತ್ನ ಆಸ್ಪತ್ರೆಯೊಂದರಲ್ಲಿ ದಾಖಲಾಗಿರುವ ಆಜಾದ್ ಅವರನ್ನು ಕಾಂಗ್ರೆಸ್ಸಿಗರು ಭೇಟಿ ಮಾಡಿರುವುದು ಎಲ್ಲರಲ್ಲೂ ಕುತೂಹಲ ಮೂಡಿಸಿತ್ತು. ಅಲ್ಲದೇ ಅಂದೇ ಆಜಾದ್ ಕಾಂಗ್ರೆಸ್ ಬೆಂಬಲಕ್ಕೆ ನಿಲ್ಲಬಹುದು ಎಂದು ಊಹಿಸಲಾಗಿತ್ತು.
Comments are closed.