ರಾಷ್ಟ್ರೀಯ

ಮಾಯಾವತಿ ಮುಳುಗುತ್ತಿರುವ ಹಡಗು, ಈಗ ಪಾರಾಗಲು ಮುಸ್ಲಿಮರತ್ತ ಕೈಚಾಚಿದ್ದಾರೆ : ಪ್ರಧಾನಿ ಮೋದಿ

Pinterest LinkedIn Tumblr

ನವದೆಹಲಿ: ಬಹುಜನ ಸಮಾಜ ಪಕ್ಷ (ಬಿಎಸ್‍ಪಿ) ನಾಯಕಿ ಮಾಯಾವತಿ ಅವರು ಮುಳುಗುತ್ತಿರುವ ಹಡಗು. ಈಗ ಪಾರಾಗಲು ಮುಸ್ಲಿಮರತ್ತ ಕೈಚಾಚಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಸಂದರ್ಶನವೊಂದರಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಮಾಯಾವತಿ ಅವರು ಸೋಲಿನ ಭೀತಿಯಲ್ಲಿಯೂ ಗೆಲ್ಲಲು ಪ್ರಯತ್ನಿಸುತ್ತಿದ್ದಾರೆ. ಇತ್ತೀಚಿನ ರಾಜಕೀಯ ಬೆಳವಣಿಗೆ ಗಮನಿಸಿದಾಗ ಜಾತ್ಯಾತೀತ ಪಕ್ಷಗಳ ಭವಿಷ್ಯದ ಬಗ್ಗೆ ನಾನು ಚಿಂತಿಸುತ್ತಿದ್ದೇನೆ. ಕಳೆದ 24 ಗಂಟೆಗಳಿಂದ ಅವರು ಯಾಕೆ ಮೌನವಾಗಿ ಉಳಿದಿದ್ದಾರೆ ಎಂದು ಮಾಯಾವತಿ ಅವರಿಗೆ ಪ್ರಶ್ನಿಸಿದರು.

ಮಾಯಾವತಿ ಅವರು ಚುನಾವಣೆಗಳಲ್ಲಿ ನಿರಂತರವಾಗಿ ಸೋಲು ಕಾಣುತ್ತಿದ್ದು, ನಿರಾಶೆಗೆ ಒಳಗಾಗಿದ್ದಾರೆ. ಇದರಿಂದಾಗಿ ನಮ್ಮನ್ನು ಗೆಲ್ಲಿಸಿ ಎಂದು ಮುಸ್ಲಿಂ ಮತದಾರರ ಮೊರೆ ಹೋಗಿದ್ದಾರೆ. ತಮ್ಮ ಹೇಳಿಕೆಯಿಂದ ಸಮಸ್ಯೆಗೆ ಸಿಲುಕಿಕೊಂಡಿದ್ದಾರೆ ಎಂದು ಹೇಳಿದರು.

ಜಾತ್ಯಾತೀತ ಪಕ್ಷಗಳು ದೇಶದಲ್ಲಿ ಗದ್ದಲ ಸೃಷ್ಟಿಸಿವೆ. ಅನೇಕರು ತಮಗೆ ದೊರೆತ ಪ್ರಶಸ್ತಿಗಳನ್ನು ಹಿಂದಕ್ಕೆ ನೀಡಿ ಬೀದಿಗಿಳಿದು ಹೋರಾಟ ಮಾಡುತ್ತಿದ್ದಾರೆ. ಈ ನಿಟ್ಟಿನಲ್ಲಿ ಸಹಿ ಸಂಗ್ರಹ ಅಭಿಯಾನ ಕೂಡ ನಡೆಯುತ್ತಿದೆ. ಆದರೂ ಮುಸ್ಲಿಂ ಸಮುದಾಯ ಮೌನವಾಗಿದೆ? ಇದು ರಾಷ್ಟ್ರೀಯ ಭದ್ರತೆ ವಿಚಾರ. ಇದರಿಂದಾಗಿ ನಾವು ಈ ಬಗ್ಗೆ ಮಾತನಾಡಬೇಕಿದೆ ಎಂದು ತಿಳಿಸಿದರು.

ಮಾಯಾವತಿ ಹೇಳಿದ್ದೇನು?:
ಉತ್ತರ ಪ್ರದೇಶದ ದಿಯೋಬಂದ್‍ನಲ್ಲಿ ಭಾನುವಾರ ನಡೆದಿದ್ದ ಸಮಾಜವಾದಿ ಪಕ್ಷ (ಎಸ್‍ಪಿ) ಹಾಗೂ ಬಿಎಸ್‍ಪಿ ಜಂಟಿ ಸಮಾವೇಶದಲ್ಲಿ ಮಾತನಾಡಿದ್ದ ಮಾಯಾವತಿ ಅವರು, ಕಾಂಗ್ರೆಸ್‍ಗೆ ಮುಸ್ಲಿಮರು ಮತ ಹಾಕಬೇಡಿ. ಬಿಜೆಪಿಗೆ ಅನುಕೂಲ ಕಲ್ಪಿಸಲು ಕಾಂಗ್ರೆಸ್ ಕೆಲವೆಡೆ ಮುಸ್ಲಿಂ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಮುಸ್ಲಿಮರು ಕಾಂಗ್ರೆಸ್‍ಗೆ ಮತ ಹಾಕಿದರೆ ಮತ ವಿಭಜನೆಯಾಗಿ ಬಿಜೆಪಿಗೆ ಅನುಕೂಲವಾಗಲಿದೆ ಎಂದು ಮನವಿ ಮಾಡಿಕೊಂಡಿದ್ದರು.

ಕೇಂದ್ರದ ಬಿಜೆಪಿ ಸರ್ಕಾರವು ಜನರಲ್ಲಿ ದ್ವೇಷದ ಬೀಜ ಬಿತ್ತುತ್ತಿದೆ. ಹೀಗಾಗಿ ಈ ಬಾರಿ ಬಿಜೆಪಿ ಅಧಿಕಾರ ಕಳೆದುಕೊಳ್ಳಲಿದೆ. ಕಾಂಗ್ರೆಸ್‍ಗೆ ಮತ ನೀಡುವ ಮೂಲಕ ಮುಸ್ಲಿಮರು ಪರೋಕ್ಷವಾಗಿ ಬಿಜೆಪಿ ಪರವಾಗಿ ನಿಲ್ಲದಂತೆ ಎಚ್ಚರಿಕೆ ವಹಿಸಬೇಕು ಎಂದು ತಿಳಿಸಿದ್ದರು.

ಮಾಯಾವತಿ ಅವರ ಹೇಳಿಕೆಯಿಂದ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯಾಗಿದೆ. ಈ ಸಂಬಂಧ ಮಾಯಾವತಿ ಅವರ ಹೇಳಿಕೆಯ ಮಾಹಿತಿ ನೀಡುವಂತೆ ಚುನಾವಣಾ ಆಯೋಗವು ಜಿಲ್ಲಾ ಮ್ಯಾಜಿಸ್ಟ್ರೇಟ್ ಗೆ ಸೂಚನೆ ನೀಡಿದೆ. ಮಾಹಿತಿ ನೀಡಿದ ಬಳಿಕ ವಿಚಾರಣೆ ಆರಂಭವಾಗಲಿದೆ.

Comments are closed.