ಶ್ರೀನಗರ: ಸಿಆರ್ಪಿಎಫ್ ಬೆಂಗಾವಲು ಪಡೆಯ ಮೇಲೆ ಭೀಕರ ಆತ್ಮಾಹುತಿ ಉಗ್ರರ ದಾಳಿಯಲ್ಲಿ 40 ಯೋಧರು ಹುತಾತ್ಮರಾಗಿದ್ದಾರೆ. ಈ ದಾಳಿಯ ಹೊಣೆಯನ್ನು ಜೈಶ್-ಇ-ಮೊಹಮ್ಮದ್ ಉಗ್ರ ಸಂಘಟನೆ ಹೊತ್ತುಕೊಂಡಿದೆ. ದಾಳಿ ನಡೆದ ನಂತರ ಸಂಘಟನೆ ವಿಡಿಯೋವೊಂದನ್ನು ಬಿಡುಗಡೆ ಮಾಡಿದ್ದು, ಅದರಲ್ಲಿ ಆತ್ಮಾಹುತಿ ದಾಳಿ ನಡೆಸಿದ ಉಗ್ರ ಕೊನೆಯದಾಗಿ ಮಾತನಾಡಿದ್ದಾನೆ.
ವಿಡಿಯೋದಲ್ಲಿ ದಕ್ಷಿಣ ಕಾಶ್ಮೀರದ ಕಾಕಪೊರದ ಆದಿಲ್ ಅಲಿಯಾಸ್ ವಕಾಸ್ ಎಂಬ ಉಗ್ರ ಮಾತನಾಡಿದ್ದಾನೆ. ಅವರ ಹಿಂದೆ ಜೈಶ್ ಧ್ವಜವಿದೆ. ಅವನ ಸುತ್ತ ಹಲವು ಅತ್ಯಾಧುನಿಕ ಸ್ವಯಂಚಾಲಿತ ರೈಫೆಲ್ಸ್ಗಳು ಇವೆ. ಈ ವಿಡಿಯೋ ನಿಮ್ಮನ್ನು ತಲುಪುವ ಹೊತ್ತಿಗೆ ನಾನು ಸ್ವರ್ಗದಲ್ಲಿರುತ್ತೇನೆ. ಕಳೆದ ಒಂದು ವರ್ಷ ನಾನು ಜೈಶ್- ಇ- ಮೊಹಮ್ಮದ್ ಸಂಘಟನೆಯಲ್ಲಿ ಕಳೆದಿದ್ದೇನೆ ಮತ್ತು ಕಾಶ್ಮೀರದ ಜನರಿಗೆ ಇದು ನನ್ನ ಕಡೆಯ ಸಂದೇಶ,” ಎಂದು ಹೇಳಿದ್ದಾನೆ.
ಜೈಶ್ ಇ- ಮೊಹಮ್ಮದ್ ಉಗ್ರ ಸಂಘಟನೆ ಈ ಹಿಂದೆ ಐಸಿಎ18 ವಿಮಾನ ಹೈಜಾಕ್, 2001ರಲ್ಲಿ ಪಾರ್ಲಿಮೆಂಟ್ ಮೇಲೆ ದಾಳಿ, ನಾಗರೊಟ ದಾಳಿ, ಉರಿ ದಾಳಿ ಹಾಗೂ ಪಠಾಣ್ಕೋಟ್ ಮೇಲೆ ದಾಳಿ ನಡೆಸಿತ್ತು.
ಆದಿಲ್ ಉತ್ತರ ಕಾಶ್ಮೀರದ ಜನರಿಗೂ ಸಂದೇಶ ರವಾನಿಸಿದ್ದಾನೆ. ದಕ್ಷಿಣ ಕಾಶ್ಮೀರದ ಜನರು ಭಾರತದ ವಿರುದ್ಧ ಹೋರಾಡಬೇಕು. ಉತ್ತರ ಮತ್ತು ಕೇಂದ್ರ ಕಾಶ್ಮೀರದ ಜನರು ಅದೇ ರೀತಿ ಜಮ್ಮುನಿನ ಜನರು ಜೊತೆಯಾಗಲು ಈಗ ಸಮಯ ಬಂದಿದೆ ಎಂದು ಹೇಳಿದ್ದಾನೆ.
ನಮ್ಮ ಉಗ್ರ ಸಂಘಟನೆಯ ಕೆಲವೇ ಕೆಲವು ಕಮಾಂಡರ್ಗಳನ್ನು ಕೊಂದುಬಿಟ್ಟರೆ ನೀವು ನಮ್ಮನ್ನು ದುರ್ಬಲಗೊಳಿಸಲು ಸಾಧ್ಯವಿಲ್ಲ ಎಂದು ಆತ್ಮಾಹುತಿ ದಾಳಿ ನಡೆಸಿದ ಬಾಂಬರ್ ಇದೇ ವಿಡಿಯೋದಲ್ಲಿ ಹೇಳಿದ್ದಾನೆ. ಇತ್ತೀಚೆಗೆ ಕಾಶ್ಮೀರದಲ್ಲಿ ಭದ್ರತಾ ಪಡೆಗಳ ವಿರುದ್ಧ ನಡೆದ ಸ್ನೈಪರ್ ಮತ್ತು ಐಇಡಿ ದಾಳಿಗಳನ್ನು ನೆನಪಿಸಿದ್ದಾನೆ.
ಸ್ಥಳೀಯ ಪೊಲೀಸರು ಹೇಳುವ ಪ್ರಕಾರ, ಆದಿಲ್ ಹುಸೇನ್ ದರ್ ಪುಲ್ವಾಮ ಜಿಲ್ಲೆಯ ಗುಂಡಿಭಾಗ್ನವನು. ಕಳೆದ 2016 ಮಾರ್ಚ್ 19ರಂದು ತನ್ನ ಇಬ್ಬರು ಸ್ನೇಹಿತರಾದ ತೌಸಿಫ್ ವಾಸಿಂ ಮತ್ತು ವಾಸೀಂ ಅವರೊಂದಿಗೆ ಕಣ್ಮರೆಯಾಗಿದ್ದ. ತೌಸಿಫ್ ಅಣ್ಣನಾದ ಮನೋಜ್ ಅಹಮದ್ ದರ್ ಉಗ್ರ ಸಂಘಟನೆ ಸೇರಿ, 2016ರಲ್ಲಿ ಕೊಲೆಯಾಗಿದ್ದ. ಆದಿಲ್ ಶಾಲೆಗೆ ವಿದ್ಯಾಭ್ಯಾಸ ಮೊಟಕುಗೊಳಿಸಿ, ಕಲ್ಲು ಕ್ವಾರಿಯಲ್ಲಿ ಕೆಲಸ ಮಾಡಿಕೊಂಡಿದ್ದ. ಅಲ್ಲದೇ, ಸ್ಥಳೀಯ ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸುತ್ತಿದ್ದ. ಈತನಿಗೆ ಇಬ್ಬರು ಸಹೋದರರಿದ್ದಾರೆ.
ಗುರುವಾರ ನಡೆದ ದಾಳಿ ಕಳೆದ ಎರಡು ದಶಕಗಳಲ್ಲೇ ನಡೆದ ಅತಿ ದೊಡ್ಡ ಹಾಗೂ ಭಯಾನಕ ದಾಳಿಯಾಗಿದೆ. 2001ರಲ್ಲಿ ಆತ್ಮಾಹುತಿ ದಾಳಿ ನಡೆದಿತ್ತು. ಜೈಶ್- ಇ- ಮೊಹಮ್ಮದ್ ಸಂಘಟನೆಯ ಉಗ್ರರು ಶ್ರೀನಗರದ ಸಚಿವಾಲಯದ ಮೇಲೆ ನಡೆಸಿದ ಆತ್ಮಾಹುತಿ ದಾಳಿಯಲ್ಲಿ 38 ಜನರು ಅಸುನೀಗಿದ್ದರು. 40 ಜನರು ಗಾಯಗೊಂಡಿದ್ದರು. ಈ ದಾಳಿ 2016ರಲ್ಲಿ 19 ಜನರನ್ನು ಆಹುತಿ ಪಡೆದ ಉರಿ ದಾಳಿಗಿಂತಲೂ ದೊಡ್ಡ ಮಟ್ಟದಾಗಿತ್ತು.
ಕಳೆದ 13 ತಿಂಗಳಲ್ಲಿ ಜೈಶ್-ಇ-ಮೊಹಮ್ಮದ್ ಉಗ್ರ ಸಂಘಟನೆಯಿಂದ ನಡೆದ ಎರಡನೇ ಭೀಕರ ದಾಳಿ ಇದಾಗಿದೆ. ಕಳೆದ ವರ್ಷ ಆಗಸ್ಟ್ನಲ್ಲಿ ಸಂಘಟನೆಯ ಮೂವರು ಉಗ್ರತು ಪುಲ್ವಾಮದ ಪೊಲೀಸ್ ಹೆಡ್ಕ್ವಾರ್ಟಸ್ ಮೇಲೆ ದಾಳಿ ನಡೆಸಿ ಐವರು ಭದ್ರತಾ ಸಿಬ್ಬಂದಿಯನ್ನು ಕೊಲೆಗೈದಿದ್ದರು. ಈ ದಾಳಿಯನ್ನು ಪೊಲೀಸ್ ಅಧಿಕಾರಿಯ ಮಗ 17 ವರ್ಷದ ಫರ್ದಿನ್ ಅಹಮದ್ ಎಂಬ ಬಾಲಕ ಉಗ್ರ ನಡೆಸಿದ್ದ. ಈ ದಾಳಿ ನಡೆಸುವ ಮುನ್ನ ಹದಿಹರೆಯದ ಉಗ್ರನು ಇದೇ ರೀತಿಯಾಗಿ ವಿಡಿಯೋವನ್ನು ಚಿತ್ರೀಕರಿಸಿದ್ದ. ಅಲ್ಲಿ ಆತ, ಈ ವಿಡಿಯೋ ನಿಮ್ಮನ್ನು ಮುಟ್ಟುವ ವೇಳೆಗೆ ನಾನು ಸ್ವರ್ಗದಲ್ಲಿರುತ್ತೇನೆ ಎಂದು ಹೇಳಿದ್ದ.
Comments are closed.