ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಶ್ರೀನಗರಕ್ಕೆ ಭೇಟಿ ನೀಡಿದ್ದರು. ಈ ವೇಳೆ ಅಲ್ಲಿನ ಪೊಲೀಸ್ ಮತ್ತು ರಕ್ಷಣಾ ಇಲಾಖೆ ಅವರಿಗೆ ಭಾರೀ ಬಿಗಿ ಭದ್ರತೆ ಕಲ್ಪಿಸಿತ್ತು. ಮೊಬೈಲ್ ಮತ್ತು ಇಂಟರ್ನೆಟ್ ಸೇವೆಯನ್ನು ಕೂಡ ಪ್ರಧಾನಿ ಭೇಟಿ ಸಮಯದಲ್ಲಿ ಸ್ಥಗಿತಗೊಳಿಸಲಾಗಿತ್ತು.
ಪ್ರಧಾನಿ ಮೋದಿ ಅವರು ಜಮ್ಮು, ಶ್ರೀನಗರ ಮತ್ತು ಲೆಹ್ಗೆ ಭೇಟಿ ನೀಡಿ, ಹಲವು ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿದರು. ತಮ್ಮ ಭೇಟಿಯ ವೇಳೆ ಶ್ರೀನಗರದ ಪ್ರಸಿದ್ಧ ದಾಲ್ ಸರೋವರಕ್ಕೆ ತೆರಳಿದ್ದರು.
ನದಿಯ ಮೇಲೆ ಬೋಟ್ನಲ್ಲಿ ಪ್ರಧಾನಿ ವಿಹರಿಸುತ್ತಿರುವ ವಿಡಿಯೋ ಒಂದನ್ನು ಬಿಜೆಪಿ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಪ್ರಕಟಿಸಿತ್ತು. ಈ ವಿಡಿಯೋದಲ್ಲಿ ಪ್ರಧಾನಿ ಮೋದಿ ಅವರು ಸಮಾವೇಶಗಳಲ್ಲಿ ಜನರತ್ತ ಕೈ ಬೀಸುವಂತೆ ಬೋಟ್ ಮೇಲಿಂದಲೇ ತಮ್ಮ ಕೈಯನ್ನು ಬೀಸುತ್ತಿರುತ್ತಾರೆ. ಆದರೆ, ಆ ವಿಡಿಯೋದಲ್ಲಿ ಜನರು ಮಾತ್ರ ನಾಪತ್ತೆಯಾಗಿದ್ದಾರೆ!
ಈ ಸಣ್ಣ ವಿಡಿಯೋ ತುಣುಕಿನಲ್ಲಿ ಮೋದಿ ಅವರು ಯಾರಿಗೋ ಕೈ ಬೀಸುತ್ತಿರುತ್ತಾರೆ. ಆದರೆ, ಆ ವಿಡಿಯೋದಲ್ಲಿ ಮಾತ್ರ ಯಾರೊಬ್ಬರೂ ಕಾಣುವುದಿಲ್ಲ ಅಥವಾ ಈ ದೃಶ್ಯ ಬೇರೆ ಏನನ್ನಾದರೂ ಸಲಹೆ ಮಾಡುತ್ತಿದೆಯೇ ಎಂಬುದು ಗೊತ್ತಿಲ್ಲ.
ಈ ವಿಡಿಯೋ ಕಾಶ್ಮೀರಿಗಳನ್ನು ಗೊಂದಲಕ್ಕೆ ಈಡು ಮಾಡಿದೆ. ಏಕೆಂದರೆ ಮೋದಿ ಅವರ ಭೇಟಿ ವೇಳೆ ಆ ಪ್ರದೇಶದಲ್ಲಿ ಅತಿಯಾದ ಬಿಗಿ ಭದ್ರತೆ ಒದಗಿಸಲಾಗಿತ್ತು. ಅಲ್ಲಿ ಜನರು ಬರಲು ಯಾವುದೇ ಕಾರಣಕ್ಕೂ ಸಾಧ್ಯವೇ ಇರಲಿಲ್ಲ. ಆದರೂ ಮೋದಿ ಅವರು ಏಕೆ ಸಮಾವೇಶಗಳಲ್ಲಿ ಜನರತ್ತ ಕೈ ಬೀಸುವಂತೆ ಬೀಸಿದರು ಎಂಬುದೇ ತಿಳಿಯದಾಗಿದೆ.
ಈ ವಿಡಿಯೋ ಬಗ್ಗೆ ವ್ಯಂಗ್ಯವಾಡಿರುವ ಕಾಶ್ಮೀರದ ಮಾಜಿ ಸಿಎಂ ಒಮರ್ ಅಬ್ದುಲ್ಲಾ ಅವರು, ಇದು ವಿಡಿಯೋ ಫ್ರೇಮ್ನಲ್ಲಿ ಜನರನ್ನು ಸೆರೆಹಿಡಿಯಲು ಮರೆತ ಕ್ಯಾಮರಾಮನ್ನ ತಪ್ಪು ಎಂದು ಟ್ವಿಟ್ ಮಾಡಿದ್ದಾರೆ.
ಜಮ್ಮು ಮತ್ತು ಕಾಶ್ಮೀರ ಪೀಪಲ್ಸ್ ಡೆಮಾಕ್ರಟಿಕ್ ಪಕ್ಷದ ಅಧ್ಯಕ್ಷೆ ಮೆಹಬೂಬ್ ಮಫ್ತಿ ಕೂಡ ಮೋದಿ ಅವರ ಈ ವಿಡಿಯೋ ಬಗ್ಗೆ ಟೀಕೆ ಮಾಡಿದ್ದಾರೆ.
Comments are closed.