ರಾಷ್ಟ್ರೀಯ

ರಾಹುಲ್‌ ಬರುವುದು ಬೇಡ ಎಂದ ಓಸ್ಮಾನಿಯಾ ವಿವಿ!

Pinterest LinkedIn Tumblr


ಹೈದರಾಬಾದ್‌: ಕಾಲೇಜು ಭದ್ರತೆಯ ಕಾರಣ ಹೇಳಿ ಕಾಂಗ್ರೆಸ್‌ ರಾಷ್ಟ್ರೀಯ ಅಧ್ಯಕ್ಷ ರಾಹುಲ್‌ ಗಾಂಧಿ ಅವರ ಮಕ್ಕಳೊಂದಿಗಿನ ಸಂವಾದ ಕಾರ್ಯಕ್ರಮಕ್ಕೆ ಓಸ್ಮಾನಿಯಾ ಕಾಲೇಜು ಆಡಳಿತ ಮಂಡಳಿ ಅನುಮತಿ ನಿರಾರಿಸಿದೆ.

ರಾಹುಲ್‌ ಗಾಂಧಿ ಆ.13 ಹಾಗೂ 14ರಂದು ತೆಲಂಗಾಣಕ್ಕೆ ಭೇಟಿ ನೀಡುತ್ತಿದ್ದು, ತೆಲಂಗಾಣ ಪ್ರತ್ಯೇಕ ರಾಜ್ಯ ಹೋರಾಟಗಾರರನ್ನು ಭೇಟಿಯಾಗಲಿದ್ದಾರೆ. ಇದೇ ವೇಳೆ ಓಸ್ಮಾನಿಯಾ ಕಾಲೇಜಿನ ಶತಮಾನೋತ್ಸವ ಕಾರ್ಯಕ್ರಮವೂ ನಡೆಯಲಿದ್ದು, ಅಲ್ಲಿನ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಲು ರಾಹುಲ್‌ ಬಯಸಿದ್ದರು. ರಾಹುಲ್‌ಗೆ ವಿಶೇಷ ಭದ್ರತೆ ಅಗತ್ಯವಿರುವ ಹಿನ್ನೆಲೆಯಲ್ಲಿ ಕಾರ್ಯಕ್ರಮ ಕಷ್ಟಕರ ಎಂದು ಕಾಲೇಜು ಆಡಳಿತ ಮಂಡಳಿ ಹೇಳಿದೆ.

ವಿಶ್ವವಿದ್ಯಾಲಯದಲ್ಲಿ ಅನೇಕ ವಿದ್ಯಾರ್ಥಿ ಸಂಘಟನೆಗಳಿವೆ. ಅದರಲ್ಲಿ ಹೆಚ್ಚಿನ ಸಂಘಟನೆ ರಾಹುಲ್‌ ಭೇಟಿಗೆ ವಿರುದ್ಧವಾಗಿದ್ದಾರೆ. ಕೇವಲ ಒಂದು ಸಂಘಟನೆ ಮಾತ್ರ ರಾಹುಲ್‌ ಆಗಮನಕ್ಕೆ ಮನವಿ ನೀಡಿದ್ದಾರೆ. ಇದು ಕಾರ್ಯಕ್ರಮದ ವೇಳೆ ಸಮಸ್ಯೆಗೆ ಕಾರಣವಾಗಬಹುದು ಎಂದು ಅನುಮತಿ ನಿರಾಕರಿಸಲಾಗಿದೆ ಎಂದು ಉಪಕುಲಪತಿ ಎಸ್. ರಾಮಚಂದ್ರಂ ಹೇಳಿದ್ದಾರೆ.

ರಾಹುಲ್‌ ಗಾಂಧಿ ಸ್ಥಳೀಯ ನಾಯಕ ಅಲ್ಲ. ಒಂದು ವೇಳೆ ಸ್ಥಳೀಯ ನಾಯಕರನ್ನು ಕರೆಸುವುದು ಕಷ್ಟಕರವಾಗಿರುವುದಿಲ್ಲ. ರಾಹುಲ್‌ ಗಾಂಧಿ ಝಡ್‌ ಕೆಟಗರಿ ಭದ್ರತೆ ಹೊಂದಿರುವವರು. ಕಾರ್ಯಕ್ರಮದ ವೇಳೆ ಅಚಾತುರ್ಯಗಳು ಸಂಭವಿಸಿದಲ್ಲಿ ಉತ್ತರ ಕೊಡಬೇಕಾದವರು ನಾವು. ಇಂತಹ ಸಂದರ್ಭವನ್ನು ನಿಭಾಯಿಸಲು ನಾವು ಸಿದ್ಧರಿಲ್ಲ ಅವರು ತಿಳಿಸಿದ್ದಾರೆ.

ವಿವಿಯ ನಿರ್ಧಾರವನ್ನು ಒಪ್ಪದ ವಿದ್ಯಾರ್ಥಿ ಸಂಘಟನೆಗಳು, ಕಾಲೇಜು ಆವರಣದಲ್ಲಿ ಪ್ರತಿಭಟನೆ ನಡೆಸಿದ್ದು, ವಿವಿ ನಿರ್ಧಾರವನ್ನು ಪ್ರಶ್ನಿಸಿ ಕೋರ್ಟ್‌ ಮೆಟ್ಟಿಲೇರಲು ತೀರ್ಮಾನಿಸಿದ್ದಾರೆ. ಸರಕಾರಿ ರಜೆ ಹಿನ್ನೆಲೆಯಲ್ಲಿ ನ್ಯಾಯಾಧೀಶರ ಮನೆಗೆ ತೆರಳಿ ಅರ್ಜಿ ಸಲ್ಲಿಸಿದ್ದಾರೆ ಎನ್ನಲಾಗಿದೆ. ತೆಲಂಗಾಣ ಸರಕಾರ ಕೊಟ್ಟ ಭರವಸೆಗಳನ್ನು ಪೂರೈಸಿಲ್ಲ ಎಂದೂ ಕೆಲ ಸಂಘಟನೆಗಳು ಪ್ರತಿಭಟನೆ ಹಮ್ಮಿಕೊಂಡಿದೆ.

Comments are closed.