ತಿರುವನಂತಪುರ : ಮನೆಯಿಂದ ನಾಪತ್ತೆಯಾಗಿದ್ದ ಪಾಲಕ್ಕಾಡ್ ನಿವಾಸಿ ಮುರುಗನ್ ಎಂಬಾತ ಇಂದು ಬುಧವಾರ ಇಲ್ಲಿನ ಮೃಗಾಲಯದಲ್ಲಿ ಸಿಂಹಗಳನ್ನು ಕೂಡಿ ಹಾಕಿರುವ ಆವರಣದೊಳಗೆ ಜಂಪ್ ಮಾಡಿ, ತೆವಳಿಕೊಂಡು ಹೋದ ಘಟನೆಯ ವಿಡಿಯೋ ಚಿತ್ರಿಕೆ ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗಿದೆ.
ಸಿಂಹಗಳಿರುವ ಪಂಜರದತ್ತ ಮುರುಗನ್ ತೆವಳಿಕೊಂಡು ಹೋಗುವುದನ್ನು ಕಂಡ ಸಂದರ್ಶಕರು ತಮ್ಮ ಮೊಬೈಲ್ಗಳಲ್ಲಿ ದೃಶ್ಯವನ್ನು ಚಿತ್ರೀಕರಿಸಿಕೊಂಡರೇ ವಿನಾ ಆತನಿಗೆ ಎಚ್ಚರಿಕೆ ನೀಡಲಿಲ್ಲ.
ಆದರೆ ಮೃಗಾಲಯದ ಅಧಿಕಾರಿಯೊಬ್ಬರು ಮುರುಗನ್ ದುಸ್ಸಾಹಸವನ್ನು ಕಂಡು ಆತನೆಡೆಗೆ ಧಾವಿಸಿ ಇತರ ಮೂವರು ಸಿಬಂದಿಗಳ ನೆರವಿನಲ್ಲಿ ಆತನನ್ನು ಸುರಕ್ಷಿತವಾಗಿ ಎಳೆದು ತಂದಿದ್ದಾರೆ.
ಮುರುಗನ್ ಈ ದುಸ್ಸಾಹಸ ನಡೆಸಿದ ವೇಳೆ ಸಿಂಹಗಳನ್ನು ಪಂಜರದಲ್ಲಿ ಕೂಡಿ ಹಾಕಲಾಗಿತ್ತೇ ಅಥವಾ ಅವುಗಳನ್ನು ತೆರೆದ ಆವರಣದೊಳಗೆ ಬಿಡಲಾಗಿತ್ತೇ ಎಂಬುದು ಗೊತ್ತಾಗಿಲ್ಲ.
ಮನೆಯಿಂದ ನಾಪತ್ತೆಯಾಗಿದ್ದ ಮುರುಗನ್ ಬಗ್ಗೆ ಆತನ ಮನೆಯವರು ಪತ್ರಿಕೆಯಲ್ಲಿ “ವ್ಯಕ್ತಿ ಕಾಣೆಯಾಗಿದ್ದಾನೆ’ ಎಂದು ಜಾಹೀರಾತು ನೀಡಿದ್ದರು. ಈತ ಮಾನಸಿಕ ಅಸ್ವಾಸ್ಥ್ಯದಿಂದ ಬಳಲುತ್ತಿದ್ದಾನೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
2014ರಲ್ಲಿ ಮಕ್ಸೂದ್ ಎಂಬ ಮನೋರೋಗಿಯೊಬ್ಬ ದಿಲ್ಲಿ ಮೃಗಾಲಯದಲ್ಲಿ ಬಿಳಿ ಹುಲಿಗಳ ಆವರಣವನ್ನು ಹತ್ತಿದ್ದ. ಆಗ ಹುಲಿ ಆತನನ್ನು ತಿಂದು ಹಾಕಿತ್ತು.
-ಉದಯವಾಣಿ
Comments are closed.