ನೋಯ್ಡಾ: ಮಂಗಳವಾರ ಮಧ್ಯಾಹ್ನ 65ರ ಹರೆಯದ ಮುನ್ನಿ ಲಾಲ್ ಎಂಬ ದಿನಗೂಲಿ ನೌಕರ ತನ್ನ ಪತ್ನಿಯ ಮೃತದೇಹದ ಮುಂದೆ ನಿಸ್ಸಹಾಯಕರಾಗಿ ಕುಳಿತು ಬಿಟ್ಟಿದ್ದರು. ಹಿಂದಿನ ದಿನ ನೋಯ್ಡಾದ ಆಸ್ಪತ್ರೆಯಲ್ಲಿ ಅಸು ನೀಗಿದ ಆತನ ಪತ್ನಿ ಫೂಲ್ಮತಿ ದೇವಿಯ ಅಂತ್ಯ ಸಂಸ್ಕಾರ ಮಾಡಲು ಆತನ ಕೈಯಲ್ಲಿ ದುಡ್ಡಿರಲಿಲ್ಲ.
ತನ್ನ ಮಗನ ಬ್ಯಾಂಕ್ ಖಾತೆಯಲ್ಲಿದ್ದ ಹಣ ವಿತ್ಡ್ರಾ ಮಾಡಲು ಬ್ಯಾಂಕ್ಗೆ ಹೋದರೆ ಬ್ಯಾಂಕ್ನಲ್ಲಿ ದುಡ್ಡಿಲ್ಲ ಎಂದು ಅಲ್ಲಿನ ನೌಕರರು ಈತನನ್ನು ಹೊರ ಕಳಿಸಿದ್ದಾರೆ.
ಕೈಯಲ್ಲಿ ದುಡ್ಡೂ ಇಲ್ಲದೆ, ಇತ್ತ ಬ್ಯಾಂಕ್ನಿಂದ ದುಡ್ಡೂ ತೆಗೆದುಕೊಳ್ಳಲು ಸಾಧ್ಯವಾಗದೆ ಮುನ್ನಿಲಾಲ್ ಕಂಗೆಟ್ಟಿದ್ದರು.
ಈ ಬಗ್ಗೆ ಸುದ್ದಿಮಾಧ್ಯಮವೊಂದರ ಪ್ರತಿನಿಧಿ ಜತೆ ಮಾತನಾಡಿದ ಮುನ್ನಿಲಾಲ್, ”ಸೋಮವಾರ ಬೆಳಗ್ಗೆ 9 ಗಂಟೆಗೆ ನಾನು ನನ್ನ ಪತ್ನಿಯನ್ನು ಧರ್ಮಶಿಲಾ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದೆ. ಅಲ್ಲಿಂದ ಖಾಸಗಿ ಆಸ್ಪತ್ರೆಯೊಂದಕ್ಕೆ ಕರೆದುಕೊಂಡು ಹೋಗಿ ಎಂದು ವೈದ್ಯರು ಸೂಚಿಸಿದರು. ನಾನು ಆಟೋದಲ್ಲಿ ಆಕೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋದೆ. ಮಧ್ಯಾಹ್ನ 2 ಗಂಟೆ ಹೊತ್ತಿಗೆ ಆಕೆ ಅಸು ನೀಗಿದಳು. ಆಸ್ಪತ್ರೆಯಲ್ಲಿ ಸಿರಿಂಜ್, ಔಷಧಿಗಾಗಿ ₹600-₹ 700 ರೂಪಾಯಿ ಪಾವತಿಸಬೇಕಾಗಿ ಬಂತು.
ಆದರೆ ಪತ್ನಿಯ ಅಂತ್ಯ ಸಂಸ್ಕಾರ ಮಾಡಲು ಕೈಯಲ್ಲಿ ದುಡ್ಡು ಉಳಿದಿರಲಿಲ್ಲ, ನನ್ನ ಮಗನ ಖಾತೆಯಲ್ಲಿ ₹16,000 ಇತ್ತು. ಅದನ್ನು ವಿತ್ಡ್ರಾ ಮಾಡುವುದಕ್ಕಾಗಿ ಬ್ಯಾಂಕ್ಗೆ ಹೋದೆ. ಅಲ್ಲಿ ತುಂಬಾ ಹೊತ್ತು ಕಾದ ನಂತರ, ಬ್ಯಾಂಕ್ನಲ್ಲಿ ದುಡ್ಡಿಲ್ಲ ಎಂದು ಬ್ಯಾಂಕ್ ಮ್ಯಾನೇಜರ್ ಹೇಳಿದರು. ನನ್ನ ಪರಿಸ್ಥಿತಿಯನ್ನು ಅವರಿಗೆ ಹೇಳಿದರೂ ಯಾರೊಬ್ಬರೂ ಕಿವಿಗೊಡಲಿಲ್ಲ.
ಸೋಮವಾರ ಬ್ಯಾಂಕ್ನಲ್ಲಿ ದುಡ್ಡಿರಲ್ಲ, ನಾವು ದುಡ್ಡಿನ ವ್ಯವಸ್ಥೆ ಮಾಡಲು ಪ್ರಯತ್ನಿಸುತ್ತೇವೆ ಎಂದು ಅಲ್ಲಿನ ಅಧಿಕಾರಿಯೊಬ್ಬರು ಹೇಳಿದರು.
ಮರುದಿನ ಅಂದರೆ ಮಂಗಳವಾರ ಲಾಲ್ ಅವರು ನೆರೆಮನೆಯವರೊಂದಿಗೆ ಬ್ಯಾಂಕ್ಗೆ ಹೋಗಿದ್ದರು. ಬೆಳಗ್ಗೆ 10 ಗಂಟೆಗೆ ಬ್ಯಾಂಕ್ಗೆ ಹೋದಾಗಲೂ ಅಲ್ಲಿ ದುಡ್ಡಿರಲಿಲ್ಲ, ಸ್ವಲ್ಪ ಹೊತ್ತಲ್ಲಿ ಹಣ ಬರುತ್ತದೆ ಎಂದು ಅವರು ಹೇಳಿದ್ದರಿಂದ ಒಂದಷ್ಟು ಹೊತ್ತು ಕಾದು ಮತ್ತೊಮ್ಮೆ ಬ್ಯಾಂಕ್ ಗೆ ಹೋದೆವು. ಆದರೂ ನಮಗೆ ದುಡ್ಡು ಸಿಗಲಿಲ್ಲ.
ಮಂಗಳವಾರ ಸಂಜೆ 3ಗಂಟೆಗೆ ಪೊಲೀಸ್ ಅಧಿಕಾರಿಯೊಬ್ಬರು ₹2,500 ತಂದು ಕೊಟ್ಟರು. ರಾಜಕಾರಣಿಯೊಬ್ಬರು ₹ 5,000 ಕೊಟ್ಟರು. ಆದರೆ ಸಾಲ ಪಡೆದ ಹಣದಿಂದ ಪತ್ನಿಯ ಅಂತ್ಯ ಸಂಸ್ಕಾರ ಮಾಡಲು ನನಗಿಷ್ಟವಿಲ್ಲ.
ಆ ಹೊತ್ತಲ್ಲಿ ಜಿಲ್ಲಾಡಳಿತ ಬ್ಯಾಂಕ್ಗೆ ದುಡ್ಡು ನೀಡಿದ ಕಾರಣ ನಾನು ಮಗನ ಖಾತೆಯಿಂದ ₹15,000 ವಿತ್ಡ್ರಾ ಮಾಡಿದೆ. ನಾಳೆ ಬೆಳಗ್ಗೆ ಪತ್ನಿಯ ಅಂತ್ಯ ಸಂಸ್ಕಾರ ಮಾಡುತ್ತೇನೆ ಎಂದು ಲಾಲ್ ಹೇಳಿದ್ದಾರೆ.
Comments are closed.