ಕೊಯಮತ್ತೂರು: ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರು ಚಪ್ಪಲಿ ದುರಸ್ತಿಗಾಗಿ 10 ರೂಪಾಯಿ ಕೇಳಿದ ಚಮ್ಮಾರನೊಬ್ಬನಿಗೆ 100 ರೂಪಾಯಿ ನೀಡಿದ್ದು ಹಾಗೂ ಖುಷಿಯಾದ ಚಮ್ಮಾರ ನಾಲ್ಕು ಹೊಲಿಗೆ ಹೆಚ್ಚೇ ಹಾಕಿದ್ದನ್ನು ತೋರಿಸುವ ವಿಡಿಯೋ ಒಂದು ಅಂತರ್ಜಾಲದಲ್ಲಿ ವೈರಲ್ ಆಗಿದೆ.
ಕೊಯಮತ್ತೂರಿನ ಈಶ ಫೌಂಡೇಷನ್ ಸಂಘಟಿಸಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಕೊಯಮತ್ತೂರಿಗೆ ವಿಮಾನದಲ್ಲಿ ಆಗಮಿಸಿದ ಸಚಿವೆಯ ಚಪ್ಪಲಿ ವಿಮಾನದಿಂದ ಇಳಿಯುವ ವೇಳೆಗೆ ಕಿತ್ತು ಹೋಗಿದ್ದವು. ತಮಿಳುನಾಡು ಬಿಜೆಪಿ ಪ್ರಧಾನ ಕಾರ್ಯದರ್ಶಿ ವನತಿ ಶ್ರೀನಿವಾಸನ್ ಜೊತೆಗೆ ಕಾರಿನಲ್ಲಿ ಹೊರಟಿದ್ದ ಸ್ಮೃತಿ ಇರಾನಿ ದಾರಿಯುದ್ದಕ್ಕೂ ಚಮ್ಮಾರನಿಗಾಗಿ ಹುಡುಕಾಡುತ್ತಾ ಸಾಗಿದ್ದರು. ವಿಮಾನ ನಿಲ್ದಾಣದಿಂದ 16 ಕಿ.ಮೀ. ಸಾಗಿದಾಗ ಪೇರೂರು ಬಳಿ ಚಮ್ಮಾರನೊಬ್ಬ ಕಾಣಿಸಿದ. ಕಾರಿನಿಂದ ಕೆಳಗಿಳಿದ ಸಚಿವೆ ನೇರ ಚಮ್ಮಾರನ ಬಳಿಗೆ ಹೋಗಿ ಚಪ್ಪಲಿಯನ್ನು ಆತನ ಕೈಗೆ ಕೊಟ್ಟು ಅಲ್ಲಿದ್ದ ಸ್ಟೂಲ್ ಒಂದರಲ್ಲಿ ಕುಳಿತುಕೊಂಡರು.
10 ರೂಪಾಯಿ ಆಗುತ್ತದೆ ಎಂದು ಚಮ್ಮಾರ ಹೇಳುತ್ತಿದ್ದಂತೆಯೇ 100 ರೂಪಾಯಿ ನೋಟನ್ನು ಆತನ ನಗದು ಪೆಟ್ಟಿಗೆ ಬಳಿ ಇಟ್ಟ ಸ್ಮೃತಿ ‘ಚೇಂಜ್ ವೇಂಡ’ (ಚಿಲ್ಲರೆ ಬೇಡ) ಎಂದು ಹೇಳಿದರು. ಘಟನೆಯಿಂದ ಖುಷಿಯಾದ ಚಮ್ಮಾರ ಚಪ್ಪಲಿಗೆ ನಾಲ್ಕು ಹೊಲಿಗೆ ಹೆಚ್ಚೇ ಹಾಕಿ ಚಪ್ಪಲಿಯನ್ನು ವಾಪಸ್ ಕೊಟ್ಟ. ಸಾಮಾಜಿಕ ಮಾಧ್ಯಮದಲ್ಲಿ ಈ ವಿಡಿಯೋ ವೈರಲ್ ಆಗಿದ್ದು, ನೆಟಿಜನ್ಗಳು ಸ್ಮೃತಿ ನಡೆ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.
Comments are closed.