ಬಟಿಂಡಾ(ನ.25): ಭಾರತಕ್ಕೆ ಸೇರಿದ ನೀರು ಪಾಕಿಸ್ತಾನಕ್ಕೆ ಹರಿಯಲು ಬಿಡುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಸಿಂಧೂ ನದಿ ನೀರು ಒಪ್ಪಂದವನ್ನು ಉಲ್ಲೇಖಿಸಿ ಮಾತನಾಡಿದ ಮೋದಿ, ‘‘ನಮ್ಮ ರೈತರ ಹೊಲಗಳಿಗೆ ಸಾಕಷ್ಟು ನೀರು ಲಭಿಸಬೇಕು. ಭಾರತಕ್ಕೆ ಸೇರಿದ ನೀರು ಪಾಕಿಸ್ತಾನಕ್ಕೆ ಹೋಗಲು ಬಿಡಕೂಡದು. ರೈತರಿಗೆ ಸಾಕಷ್ಟು ನೀರು ಪೂರೈಸಲು ಸರ್ಕಾರ ಪ್ರತಿಯೊಂದು ಪ್ರಯತ್ನ ನಡೆಸಲಿದೆ’’ ಎಂದು ಅವರು ಹೇಳಿದ್ದಾರೆ.
ಸರ್ಜಿಕಲ್ ದಾಳಿಯ ಹಿನ್ನಡೆಯಿಂದ ಪಾಕಿಸ್ತಾನ ಇನ್ನಷ್ಟೇ ಚೇತರಿಸಿಕೊಳ್ಳಬೇಕಾಗಿದೆ ಮತ್ತು ಭಾರತದ ವಿರುದ್ಧ ಹೋರಾಡುವ ಮೂಲಕ ಅದು ಸ್ವಯಂ ನಷ್ಟ ಮಾಡಿಕೊಳ್ಳುತ್ತಿದೆ ಎಂದು ಪ್ರಧಾನಿ ಹೇಳಿದರು. ‘‘ಈ ಮೊದಲು ಸೈನಿಕರಿಗೆ ಶಕ್ತಿಯಿದ್ದರೂ ಅದನ್ನು ತೋರಿಸಲು ಸಾಧ್ಯವಾಗುತ್ತಿರಲಿಲ್ಲ. ಆದರೆ ಇದೀಗ, ಎಲ್’ಒಸಿಯ ವ್ಯಾಪ್ತಿಯನ್ನು ದಾಟಿ ಸರ್ಜಿಕಲ್ ದಾಳಿಗಳನ್ನು ನಡೆಸಿದ ನಮ್ಮ ಸೈನಿಕರ ಧೈರ್ಯವನ್ನು ಪಾಕಿಸ್ತಾನ ಕೂಡಾ ನೋಡಿ ಬೆಚ್ಚಿಬಿದ್ದಿದೆ’’ ಎಂದು ಪ್ರಧಾನಿ ಹೇಳಿದ್ದಾರೆ.
ಸಿಂಧೂ ನದಿ ನೀರು ಒಪ್ಪಂದದ ಪ್ರಕಾರ, ಪೂರ್ವದಿಂದ ಹರಿಯುವ ರಾವಿ, ಸತ್ಲೇಜ್, ಬಿಯಾಸ್ ನದಿಗಳು ಪೂರ್ಣ ಹಕ್ಕನ್ನು ಭಾರತ ಹೊಂದಿದ್ದರೆ, ಪಾಕಿಸ್ತಾನವು ಪಶ್ಚಿಮದಿಂದ ಹರಿಯುವ ನದಿಗಳಾದ ಚೀನಾಬ್, ಜೇಲಂ ಹಾಗೂ ಸಿಂಧೂ ನದಿ ನೀರನ್ನು ಅವಲಂಬಿಸಿದೆ.
ನೋಟು ರದ್ದತಿಯಿಂದ ಆಗಿರುವ ಸಮಸ್ಯೆಗಳನ್ನು ನಿವಾರಿಸಲು ಮೊಬೈಲ್ ಬ್ಯಾಂಕಿಂಗ್ ವ್ಯವಸ್ಥೆಯ ಪ್ರಯೋಜನ ಪಡೆಯುವಂತೆಯೂ ಅವರು ಸಲಹೆ ನೀಡಿದ್ದಾರೆ.
ರಾಷ್ಟ್ರೀಯ
Comments are closed.