ನವದೆಹಲಿ: ನೋಟು ನಿಷೇಧದ ಬಳಿಕ ದೇಶದಲ್ಲಿ ಉಂಟಾಗಿರುವ ಆರ್ಥಿಕ ಬಿಕ್ಕಟ್ಟಿನ ವಿಚಾರಕ್ಕೆ ಸಂಬಂಧಿಸಿದಂತೆ ಇದೇ ಮೊದಲ ಬಾರಿಗೆ ರಾಜ್ಯಸಭೆಯಲ್ಲಿ ಮೌನ ಮುರಿದಿರುವ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು, ನೋಟು ನಿಷೇಧವನ್ನು ಕೇಂದ್ರ ಸರ್ಕಾರ ಅತ್ಯಂತ ಕೆಟ್ಟದಾಗಿ ನಿರ್ವಹಿಸಿದೆ ಎಂದು ಕಿಡಿಕಾರಿದ್ದಾರೆ.
ಚಳಿಗಾಲದ ಅಧಿವೇಶನ ಆರಂಭವಾದಾಗಿನಿಂದಲೂ ಕಾಂಗ್ರೆಸ್ ಸೇರಿದಂತೆ ಎಲ್ಲ ಪ್ರತಿಪಕ್ಷಗಳು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ಮುಂದುವರೆಸಿದ್ದು, ಇಂದು ಪ್ರಧಾನಿ ನರೇಂದ್ರ ಮೋದಿ ಅವರ ನಡೆಯನ್ನು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಖಂಡಿಸಿದರು.
ಕಪ್ಪುಹಣದ ವಿರುದ್ಧ ಕ್ರಮ ಒಳ್ಳೆಯದಾರರೂ ಕೇಂದ್ರ ಸರ್ಕಾರದ ಅದನ್ನು ನಿರ್ವಹಿಸುತ್ತಿರುವ ರೀತಿ ಮಾತ್ರ ಅತ್ಯಂತ ಕೆಟ್ಟದಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಪ್ರಧಾನಿ ಮೋದಿ ಪರಿಸ್ಥಿತಿ ನಿಯಂತ್ರಣಕ್ಕೆ 50 ದಿನಗಳ ಕಾಲಾವಕಾಶ ಕೇಳುತ್ತಿದ್ದಾರೆ. ಇದೇ 50 ದಿನಗಳಲ್ಲಿ ದೇಶದ ಜಿಡಿಪಿ ದರ ಪಾತಾಳ ಸೇರಬಹುದು. ದೇಶ ಆರ್ಥಿಕ ವಿಕೋಪಕ್ಕೆ ತುತ್ತಾಗಬಹುದು ಎಂದು ಹೇಳಿದರು.
ಕೇಂದ್ರ ಸರ್ಕಾರದ ನಡೆಯಿಂದಾಗಿ ಆರ್ ಬಿಐ ಅನ್ನು ಟೀಕಿಸಲಾಗುತ್ತಿದೆ. ಕೇಂದ್ರ ಸರ್ಕಾರದ ನಡೆ ಕಾನೂನು ಬದ್ಧ ದೊಡ್ಡ ಪ್ರಮಾದ ಮತ್ತು ಬೃಹತ್ ಪ್ರಮಾಣದ ಲೂಟಿ ಎಂದು ಡಾ. ಸಿಂಗ್ ಬಣ್ಣಿಸಿದರು. “ಕೇಂದ್ರ ಸರ್ಕಾರದ ನಡೆಯಿಂದ ದೇಶದ ಕೃಷಿಕ ಕ್ಷೇತ್ರ ದಿಢೀರ್ ತಲ್ಲಣಗೊಂಡಿದ್ದು, ದೇಶದ ಶೇ.50ರಷ್ಟು ಕೃಷಿ ಚಟುವಟಿಕೆಗಳು ಸ್ಥಗಿತಗೊಂಡಿವೆ. ಇದರಿಂದ ದೇಶದ ಆರ್ಥಿಕತೆಗೆ ಧಕ್ಕೆಯಾಗಿದ್ದು, ಶೇ.50ರಷ್ಟು ಗ್ರಾಮೀಣ ಬ್ಯಾಂಕಿಂಗ್ ವಹಿವಾಟು ಆಸ್ತವ್ಯಸ್ಥವಾಗಿದೆ. ಕೇಂದ್ರ ಸರ್ಕಾರದ 88 ಬಿಲಿಯನ್ ಡಾಲರ್ ನಷ್ಟು ಹಣ ಠೇವಣಿಯಾಗಿದೆ ಎಂದು ಹೇಳುತ್ತಿದೆ. ಆದರೆ ಜನ ತಾವು ಠೇವಣಿ ಮಾಡಿರುವ ತಮ್ಮದೇ ಹಣವನ್ನು ತಮ್ಮ ಕೆಲಸಗಳಿಗೆ ಬಳಕೆ ಮಾಡಲಾಗದೇ ಪರದಾಡುತ್ತಿದ್ದಾ ರೆ ಎಂದು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಕಿಡಿಕಾರಿದರು. ಮತ್ತೊಂದೆಡೆ ರಾಜ್ಯಸಭೆ ಕಲಾಪವನ್ನು ಮಧ್ಯಾಹ್ನ 2 ಗಂಟೆಗೆ ಮುಂದೂಡಲಾಗಿದೆ.
Comments are closed.