ನವದೆಹಲಿ: ಪಶ್ಚಿಮ ಬಂಗಾಳದ ಸಿಂಗೂರಿನಲ್ಲಿ ಅಂದಿನ ಸಿಪಿಎಂ ಸರ್ಕಾರ ನ್ಯಾನೊ ಕಾರು ತಯಾರಿಕೆಗಾಗಿ ಟಾಟಾ ಮೋಟಾರ್ಸ್ ಕಂಪೆನಿಗೆ ನೀಡಿದ್ದ ಭೂಮಿಯನ್ನು ರೈತರಿಗೆ ವಾಪಸ್ಸು ನೀಡುವಂತೆ ಸುಪ್ರೀಂ ಕೋರ್ಟ್ ಬುಧವಾರ ಮಹತ್ವದ ಆದೇಶ ನೀಡಿದೆ.
ಸುಪ್ರಿಂ ಕೋರ್ಟ್ನ ಮಹತ್ವದ ಈ ಆದೇಶದಿಂದ ಸಿಪಿಎಂ ಪಕ್ಷಕ್ಕೆ ಮತ್ತು ಟಾಟಾ ಮೋಟಾರ್ಸ್ ಕಂಪೆನಿಗೆ ಮುಖಭಂಗವಾದಂತಾಗಿದೆ.
ನ್ಯಾಯಮೂರ್ತಿ ವಿ.ಗೋಪಾಲ್ ಗೌಡ ಹಾಗೂ ನ್ಯಾಯಮೂರ್ತಿ ಅರುಣ್ ಮಿಶ್ರಾ ಅವರಿದ್ದ ವಿಭಾಗೀಯ ಪೀಠ ಪಶ್ಚಿಮ ಬಂಗಾಳ ಸರ್ಕಾರ ಮತ್ತು ಟಾಟಾ ಮೋಟಾರ್ಸ್ ಕಂಪೆನಿ ಮಾಡಿಕೊಂಡಿದ್ದ ಭೂ ಒಪ್ಪಂದವನ್ನು ರದ್ದುಪಡಿಸಿ ಮುಂದಿನ 12 ವಾರಗಳಲ್ಲಿ ರೈತರಿಗೆ ಭೂಮಿಯನ್ನು ಮರಳಿ ನೀಡುವಂತೆ ಆದೇಶಿಸಿದೆ.
ಪ್ರಕರಣದ ಹಿನ್ನೆಲೆ: 2006ರಲ್ಲಿ ಪಶ್ಚಿಮ ಬಂಗಾಳದ ಅಂದಿನ ಸಿಪಿಎಂ ಸರ್ಕಾರ ನ್ಯಾನೊ ಕಾರು ತಯಾರಿಕಾ ಘಟಕ ನಿರ್ಮಾಣಕ್ಕಾಗಿ ಸಿಂಗೂರಿನಲ್ಲಿ ಟಾಟಾ ಮೋಟಾರ್ಸ್ ಕಂಪನಿಗೆ 997 ಎಕರೆ ಭೂಮಿಯನ್ನು ಮಂಜೂರು ಮಾಡಿತ್ತು. ಅಂದಿನ ಸರ್ಕಾರ ಭೂಸ್ವಾದೀನ ಪ್ರಕ್ರಿಯೆಯಲ್ಲಿ ನಿಯಮಾವಳಿಗಳನ್ನು ಉಲ್ಲಂಘಿಸಿ ಟಾಟಾ ಮೋಟಾರ್ಸ್ ಕಂಪೆನಿಗೆ ಭೂಮಿ ನೀಡಿದೆ ಎಂದು ಸುಪ್ರೀಂ ಕೋರ್ಟ್ ತನ್ನ ಮಹತ್ವದ ತೀರ್ಪಿನಲ್ಲಿ ತಿಳಿಸಿದ್ದು ಕಲ್ಕತ್ತಾ ಹೈಕೋರ್ಟ್ ನೀಡಿದ್ದ ತೀರ್ಪನ್ನು ಎತ್ತಿಹಿಡಿದಿದೆ.
ಕಳೆದ 10 ವರ್ಷಗಳಿಂದ ಸಿಂಗೂರ್ ಭೂ ಪ್ರಕರಣಕ್ಕೆ ಸಂಬಂಧಿಸಿದಂತೆ ಹೋರಾಟ ನಡೆಸುತ್ತ ಬಂದಿದ್ದ ಇಂದಿನ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಜಯ ಸಿಕ್ಕಂತಾಗಿದೆ.
Comments are closed.