ಮುಂಬೈ: ಕಿರುತೆರೆ ನಟಿ ಪ್ರತ್ಯೂಷ ಆತ್ಮಹತ್ಯೆ ಪ್ರಕರಣ ಸಂಬಂಧದಲ್ಲಿ ಸಿಲುಕಿರುವ ನಟ ರಾಹುಲ್ ರಾಜ್ ಸಿಂಗ್ ಆಸ್ಪತ್ರೆಯ ಕಟ್ಟಡದಿಂದ ಕೆಳಗೆ ಬೀಳುವುದಾಗಿ ಬೆದರಿಕೆ ಹಾಗಿದ್ದು, ಆಸ್ಪತ್ರೆಯಲ್ಲಿ ಕೆಲವು ಗಂಟೆಗಳ ಕಾಲ ಆತಂಕದ ವಾತಾವರಣ ಸೃಷ್ಟಿಯಾಗಿರುವ ಘಟನೆ ಭಾನುವಾರ ನಡೆದಿದೆ.
ಪ್ರತ್ಯೂಷ ಆತ್ಮಹತ್ಯೆಗೆ ಶರಣಾದ ಮರುದಿನದಿಂದ ಅನಾರೋಗ್ಯದ ಕಾರಣ ರಾಹುಲ್ ಆಸ್ಪತ್ರೆಗೆ ದಾಖಲಾಗಿದ್ದರು. ಇಂದಿಗೂ ರಾಹುಲ್ ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂದು ಬೆಳಿಗ್ಗೆ ಕೂಡ ಎಂದಿನಂತೆ ರಾಹುಲ್ ಆಸ್ಪತ್ರೆಯ ಕೊಠಡಿಯಲ್ಲಿ ಬಾತ್ ರೂಮಿಗೆ ಹೋಗಿದ್ದಾನೆ. ಕೊಠಡಿಯ ಬಾಗಿಲನ್ನು ಹಾಕಿಕೊಂಡ ರಾಹುಲ್ ಇದ್ದಕ್ಕಿದ್ದಂತೆ ಆಸ್ಪತ್ರೆಯ ಕಟ್ಟಡದಿಂದ ಕೆಳಗೆ ಬೀಳುವುದಾಗಿ ಬೆದರಿಕೆ ಹಾಕಿದ್ದಾನೆ.
ಇದರಿಂದಾಗಿ ಆಸ್ಪತ್ರೆಯಲ್ಲಿ ಕೆಲವು ಗಂಟೆಗಳ ಆತಂಕದ ವಾತಾವರಣ ಸೃಷ್ಟಿಯಾಗಿದೆ. ನಂತರ ಸ್ಥಳಕ್ಕೆ ಬಂದಿರುವ ವೈದ್ಯರು ರಾಹುಲ್ ನನ್ನು ಸಮಾಧಾನ ಪಡಿಸಿ ಕೊಠಡಿಯ ಬಾಗಿಲು ತೆಗೆಸಿ ತನ್ನ ನಿರ್ಧಾರವನ್ನು ಹಿಂಪಡೆಯುವಂತೆ ಮಾಡಿದ್ದಾರೆಂದು ವರದಿಗಳು ತಿಳಿಸಿವೆ.
ಇನ್ನು ರಾಹುಲ್ ಹಾಗೂ ಆಸ್ಪತ್ರೆಯ ವರ್ತನೆ ಕುರಿತಂತೆ ಪ್ರತ್ಯೂಷ ತಂದೆ ಅನುಮಾನ ವ್ಯಕ್ತಪಡಿಸಿದ್ದು, ರಾಹುಲ್ ಜೊತೆಗೂಡಿ ಆಸ್ಪತ್ರೆಯ ಆಡಳಿತ ಮಂಡಳಿಯವರು ಪಿತೂರಿ ನಡೆಸುತ್ತಿದ್ದಾರೆ. ಈ ಬಗ್ಗೆ ಭಾರತೀಯ ವೈದ್ಯಕೀಯ ಸಂಘಕ್ಕೆ ಪತ್ರ ಬರೆಯಲಾಗಿದ್ದು, ತನಿಖೆ ನಡೆಸುವಂತೆ ಆಗ್ರಹಿಸಿದ್ದಾರೆಂದು ಹೇಳಲಾಗುತ್ತಿದೆ.
ಪ್ರತ್ಯೂಷ ತಂದೆ ಬರೆದಿರುವ ಪತ್ರದಲ್ಲಿ ರಾಹುಲ್ ಕೆಲ ಆರೋಗ್ಯ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದಾನೆ. ಆದರೆ, ನಮಗೆ ರಾಹುಲ್ ನಡೆಸುತ್ತಿರುವ ಪಿತೂರಿಯಲ್ಲಿ ಆಸ್ಪತ್ರೆ ಕೂಡ ಭಾಗಿಯಾಗಿದೆ ಎಂಬುದು ನಮಗೆ ದೃಢ ನಂಬಿಕೆಯಿದೆ. ರಾಹುಲ್ ಗೆ ಆಸ್ಪತ್ರೆ ಆಡಳಿತ ಮಂಡಳಿಯವರೇ ವಸತಿ ಸೌಕರ್ಯವನ್ನು ನೀಡುತ್ತಿದ್ದಾರೆ. ನಮಗೆ ತಿಳಿದುಬಂದಿರುವ ಮೂಲಗಳ ಮಾಹಿತಿ ಪ್ರಕಾರ ಈ ಹಿಂದೆಯೂ ಇದೇ ಆಸ್ಪತ್ರೆ ಹಲವು ಅಪರಾಧಿಗಳಿಂದ ಹಣವನ್ನು ಪಡೆದುಕೊಂಡು ಅಪರಾಧಿಗಳ ಪರವಾಗಿ ನಡೆದುಕೊಂಡಿದೆ ಎಂದು ಹೇಳಿಕೊಂಡಿದ್ದಾರೆ.
ಕಿರುತೆರೆಯಲ್ಲಿ ಬಾಲಿಕಾ ವಧು ಆನಂದಿ ಎಂದೇ ಖ್ಯಾತಿ ಪಡೆದಿದ್ದ ಪ್ರತ್ಯೂಷ ಬ್ಯಾನರ್ಜಿಯವರು ಏಪ್ರಿಲ್.1 ರಂದು ತಮ್ಮ ಕೊಠಡಿಯಲ್ಲಿ ನೇಣಿಗೆ ಶರಣಾಗಿರುವ ರೀತಿಯಲ್ಲಿ ಕಂಡುಬಂದಿದ್ದರು. ಪ್ರತ್ಯೂಷ ಅವರ ಸಾವು ಸಾಕಷ್ಟು ಅನುಮಾನಗಳನ್ನು ಹುಟ್ಟುಹಾಕಿದ್ದವು. ಅಲ್ಲದೆ, ಹಲವರು ಪ್ರತ್ಯೂಷ ಗೆಳೆಯನಾಗಿದ್ದ ರಾಹುಲ್ ಮೇಲೆ ಆರೋಪಗಳನ್ನು ಮಾಡಿದ್ದರು. ಇದರಂತೆ ಪೊಲೀಸರು ರಾಹುಲ್ ನನ್ನು ಬಂಧನಕ್ಕೊಳಪಡಿಸಿದ್ದರು. ನಂತರ ರಾಹುಲ್ ನಿರೀಕ್ಷಣಾ ಜಾಮೀನು ಪಡೆದುಕೊಂಡಿದ್ದರು.
ಇನ್ನು ತನಿಖೆ ವೇಳೆ ಪ್ರತ್ಯೂಷ ಗೆಳಯರು ಪ್ರತ್ಯೂಷ ಪ್ರೀತಿ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡಿದ್ದಳು. ರಾಹುಲ್ ಕೂಡ ಕಾರ್ಯಕ್ರಮವೊಂದರಲ್ಲಿ ಪ್ರತ್ಯೂಷಳಿಗೆ ಸಾರ್ವಜನಿಕವಾಗಿ ಹಲ್ಲೆ ನಡೆಸಿದ್ದ ಎಂದು ಹೇಳಿಕೊಂಡಿದ್ದಾರೆ.