ನವದೆಹಲಿ, ಏ.9- ಸದ್ಯ ನಿಮ್ಮ ಅವಸರಕ್ಕೆ ಭಾರತಕ್ಕೆ ಬರಲು ನನಗೆ ಸಾಧ್ಯವಿಲ್ಲ. ಮೇ ಅಂತ್ಯದಲ್ಲಿ ಇನ್ನೊಂದು ದಿನಾಂಕ ನಿಗದಿ ಮಾಡಿ ಎಂದು ಮದ್ಯದ ದೊರೆ ಮತ್ತು ಸುಸ್ತಿದಾರ ವಿಜಯ್ ಮಲ್ಯ ಜಾರಿ ನಿರ್ದೇಶನಾಲಯ (ಇಡಿ)ಕ್ಕೆ ತಿಳಿಸಿರುವುದಾಗಿ ವರದಿಯಾಗಿದೆ. ಒಟ್ಟಾರೆ ಪ್ರಸಕ್ತ ಲಂಡನ್ನಲ್ಲಿ ಠಿಕಾಣಿ ಹೂಡಿರುವ ವಿಜಯ್ ಮಲ್ಯ ಇಂದು ಜಾರಿ ನಿರ್ದೇಶನಾಲಯದ ಅಧಿಕಾರಿಗಳ ಎದುರು ಹಾಜರಾಗಬೇಕಾಗಿತ್ತು. ಆದರೆ ಅವರು ಇವತ್ತಂತೂ ಹಾಜರಾಗುವ ಸಾಧ್ಯತೆ ಇಲ್ಲ.
ಮದ್ಯದ ದೊರೆ ವಿಜಯ್ ಮಲ್ಯ ಅವರು ಜಾರಿ ನಿರ್ದೇಶನಾಲಯದ ಆದೇಶ ತಿರಸ್ಕರಿಸುತ್ತಿರುವುದು ಇದೇ ಮೊದಲೇನಲ್ಲ. ಈಗಾಗಲೇ ಇಡಿ ನೀಡಿದ್ದ ಎರಡು ನೋಟೀಸ್ಗಳನ್ನು ತಿರಸ್ಕರಿಸಿರುವ ಅವರು ಮೂರನೆ ಬಾರಿ ಇಂದೂ ಹಾಜರಾತಿಗೆ ನಿರಾಕರಿಸಿದ್ದಾರೆ. ವಿವಿಧ ಬ್ಯಾಂಕ್ಗಳಿಂದ 9 ಸಾವಿರ ಕೋಟಿ ರೂ. ಸಾಲ ಮಾಡಿರುವ ಮಲ್ಯ ಸದ್ಯ ನಾಲ್ಕು ಸಾವಿರ ಕೋಟಿ ರೂ. ಪಾವತಿಸುವುದಾಗಿ ಹೇಳಿದ್ದರು. ಆದರೆ ಎಸ್ಬಿಐ ನೇತೃತ್ವದ 17 ಬ್ಯಾಂಕ್ಗಳ ಒಕ್ಕೂಟ ಇದನ್ನು ನಿರಾಕರಿಸಿತ್ತು.