ನವದೆಹಲಿ: ಕಿರುತೆರೆ ನಟಿ ಪ್ರತ್ಯೂಷಾ ಬ್ಯಾನರ್ಜಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧ ಬಂಧನ ಭೀತಿ ಎದುರಿಸುತ್ತಿರುವ ಆಕೆಯ ಬಾಯ್ ಫ್ರೆಂಡ್ ರಾಹುಲ್ ರಾಜ್ ಸಿಂಗ್ ಅವರು ನಿರೀಕ್ಷಣಾ ಜಾಮೀನು ಕೋರಿ ಬುಧವಾರ ಅರ್ಜಿ ಸಲ್ಲಿಸಿದ್ದಾರೆ.
ಪ್ರತ್ಯೂಷಾ ಆತ್ಮಹತ್ಯೆ ಪ್ರಚೋದನೆ ನೀಡಿದ ಹಾಗೂ ಆಕೆಯ ಮೇಲೆ ಹಲ್ಲೆ ನಡೆಸಿದ ಆರೋಪ ಎದುರಿಸುತ್ತಿರುವ ರಾಹುಲ್ ರಾಜ್ ಸಿಂಗ್ ಅವರು ಇಂದು ಮುಂಬೈನ ದಿಂಡೋಶಿ ಕೋರ್ಟ್ ಗೆ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದು, ನಾಳೆ ವಿಚಾರಣೆಗೆ ಬರಲಿದೆ.
ಪ್ರತ್ಯೂಷಾ ತಾಯಿ ಸೋಮಾ ಅವರು ನಿನ್ನೆ ರಾಹುಲ್ ರಾಜ್ ಸಿಂಗ್ ಅವರ ವಿರುದ್ಧ ಬಂಗೂರ್ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಆರೋಪಿಯ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಹಾಗೂ ಹಲ್ಲೆ ಮಾಡಿದ ಆರೋಪದಡಿ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.
ಪ್ರಕರಣ ಸಂಬಂಧ ಪೊಲೀಸರು ಇದುವರೆಗೆ 12 ಜನರ ಹೇಳಿಕೆಗಳನ್ನು ದಾಖಲಿಸಿದ್ದು, ಕಳೆದ ಏಪ್ರಿಲ್ 4ರಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರಾಹುಲ್ ರಾಜ್ ಸಿಂಗ್ ಅವರನ್ನು ಆಸ್ಪತ್ರೆಯಿಂದ ಬಿಡುಗಡೆಯಾದ ನಂತರ ಬಂಧಿಸುವ ಸಾಧ್ಯತೆ ಇದೆ.
ರಾಹುಲ್ ಜೊತೆಗಿನ ಸಂಬಂಧದ ಬಗ್ಗೆ ಪ್ರತ್ಯೂಷಾ ತುಂಬಾನೆ ನೊಂದಿದ್ದಳು ಮತ್ತು ಕಾರ್ಯಕ್ರಮವೊಂದರಲ್ಲಿ ರಾಹುಲ್ ರಾಜ್ ಸಿಂಗ್ ಸಾರ್ವಜನಿಕವಾಗಿಯೇ ಆಕೆಯ ಮೇಲೆ ಹಲ್ಲೆ ನಡೆಸಿದ್ದ ಎಂದು ಪ್ರತ್ಯೂಷಾ ಗೆಳತಿ ಪೊಲೀಸರಿಗೆ ತಿಳಿಸಿದ್ದಾರೆ.
ಈ ಮಧ್ಯೆ, ರಾಹುಲ್ ರಾಜ್ ಸಿಂಗ್ ಅವರ ತಂದೆ, ಪ್ರತ್ಯೂಷಾ ಸ್ವತಃ ತನ್ನ ಪೋಷಕರ ವಿರುದ್ಧವೇ ದೂರು ನೀಡಲು ಮುಂದಾಗಿದ್ದಳು ಎಂದು ಹೇಳಿದ್ದಾರೆ.